ಕುಡಿದು ಎಸ್ಕೇಪ್ ಆದ ನಂದಮೂರಿ ಬಾಲಕೃಷ್ಣ ಕುಡಿ

ನಂದಮೂರು ತಾರಕ ರಾಮಾರಾವ್ ಅವರ ಮೂರನೇ ತಲೆಮಾರಿನ ಕುಡಿ ಈತ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಎಂದರೆ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ಸುಪುತ್ರ. ಹೆಸರು ತಾರಕರಾಮ್ ಮೋಕ್ಷಜ್ಞ. ಈತನನ್ನು ಮೊನ್ನೆಯಷ್ಟೇ ಬಾಲಕೃಷ್ಣ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಇನ್ನೇನು ಚಿತ್ರರಂಗಕ್ಕೆ ಅಂಬೆಗಾಲಿಡಲಿರುವ ಈತ ಅಷ್ಟರಲ್ಲೇ ಈ ಘನಂದಾರಿ ಕೆಲಸ ಮಾಡಿದ್ದಾನೆ.
ಹೈದರಾಬಾದಿನ ಬಂಜಾರ ಹಿಲ್ಸ್ ಪ್ರದೇಶದಲ್ಲಿ ಈತ ತನ್ನ ಗೆಳೆಯರೊಂದಿಗೆ ಗುಂಡು ಪಾರ್ಟಿ ಮಾಡಿಕೊಂಡು ಗುಂಡಿನ ಗಮ್ಮತ್ತಿನಲ್ಲೇ ಕಾರಿನಲ್ಲಿ ಬಂದಿದ್ದಾನೆ. ಕಡೆಗೆ ಈತನ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದರೆ, ಒಬ್ಬನೇ ಒಬ್ಬನೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲವಂತೆ.
ಆದರೆ ಈ ಕಾರನ್ನು ಓಡಿಸುತ್ತಿದ್ದದ್ದು ಮಾತ್ರ ಮೋಕ್ಷಜ್ಞ ಗೆಳೆಯ ವೆಂಕಟ್. ಆತನನ್ನು ಪರೀಕ್ಷಿಸಿದ ಪೊಲೀಸರು ಬಳಿಕ ಟಾಟಾ ಸಫಾರಿಯನ್ನು (AP 16 BK 1) ಜಪ್ತಿ ಮಾಡಿಕೊಂಡಿದ್ದಾರೆ. ಕಾರಿನಲ್ಲಿದ್ದ ಆರು ಮಂದಿ ಕಂಠಮಟ್ಟ ಕುಡಿದಿದ್ದರು ಎನ್ನುತ್ತವೆ ಪೊಲೀಸ್ ಮೂಲಗಳು.
ಶನಿವಾರ (ಆ.18) ರಾತ್ರಿ ಈತ ಗೆಳೆಯರೊಂದಿಗೆ ಪಾರ್ಟಿ ಮಾಡಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಮಧ್ಯರಾತ್ರಿ ಮೀರಿತ್ತು. ಬಂಜಾರಾ ಹಿಲ್ಸ್ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ನಿಲ್ಲಿಸಿ ಪರೀಕ್ಷಿಸಲಾಗಿ ಕಾರಿನ ಡ್ರೈವರ್ ಸಮೇತ ಎಲ್ಲರೂ ಕುಡಿದಿದ್ದರು ಎಂದು ಬಂಜಾರ ಹಿಲ್ಸ್ ಟ್ರಾಫಿಕ್ ಇನ್ಸ್ ಪೆಕ್ಟರ್ ಬಾಲಕೃಷ್ಣ ರೆಡ್ಡಿ ತಿಳಿಸಿದ್ದಾರೆ.
ಡ್ರೈವರ್ ವೆಂಕಟ್ ರನ್ನು ಪರೀಕ್ಷಿಸಲಾಗಿ ಆತನ ರಕ್ತದಲ್ಲಿ (100 ಎಂಎಲ್) ಆಲ್ಕೋಹಾಲ್ ಮಟ್ಟ 77 ಎಂಜಿಯಷ್ಟಿತ್ತು. 30 ಎಂಜಿಗೆ ಮಾತ್ರ ಅನುಮತಿ ನೀಡಲಾಗಿದೆ. ಸೆಕ್ಷನ್ 185 (A) ಮೋಟಾರು ವಾಹನ ಕಾಯಿದೆ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡು ವಾಹವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಆದರೆ ಮೋಕ್ಷಜ್ಞ ಹಾಗೂ ಆತನ ಉಳಿದ ಗೆಳೆಯರು ಹಿಂದಿನ ಬಾಗಿನಿಂದ ಇಳಿದು ಎಸ್ಕೇಪ್ ಆಗಿದ್ದಾರೆ. "ಅವರ ವಿರುದ್ಧ ಯಾವುದೇ ಕೇಸ್ ಇಲ್ಲದಿದ್ದರೂ ಅವರು ಯಾಕೆ ಓಡಿಹೋದರೋ ನಮಗೂ ತಿಳಿಯುತ್ತಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ.


Click it and Unblock the Notifications











