ಸ್ಟಾರ್ ನಿರ್ದೇಶಕರ ಬಂಡವಾಳ ಜಗತ್ತಿಗೇ ಗೊತ್ತಾಗಲಿದೆ

ಯಾಕೆಂದರೆ ಈ ವರ್ಷ ಸಾಲು ಸಾಲಾಗಿ ಭರವಸೆಯ ನಿರ್ದೇಶಕರೆಲ್ಲಾ ನಿರಾಶೆ ಉಣಿಸಿದ್ದಾರೆ. ಆದರೆ ಜೊತೆ ತಾವೂ ಭ್ರಮನಿರಸನಗೊಂಡಿದ್ದಾರೆ. ಯೋಗರಾಜ್ ಭಟ್ ಬಗ್ಗೆ ಇನ್ನಿಲ್ಲದಂತೆ ನಿರೀಕ್ಷೆ ಉದ್ಭವವಾಗಿತ್ತು. ಆದರೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾಗಲಿ, ಯೋಗರಾಜ್ ಭಟ್ ಅಭಿಮಾನಿ ವರ್ಗವಾಗಲಿ ಯಾರೊಬ್ಬರೂ ಪರಮಾತ್ಮ ಸಿನಿಮಾ ನೋಡಿ ಸಂಪೂರ್ಣ ತೃಪ್ತಿ ಹೊಂದಿರಲಿಲ್ಲ.
ಅವರ ನಂತರ ಬಂದ ಮೊಗ್ಗಿನಮನಸ್ಸು ಖ್ಯಾತಿಯ ಶಶಾಂಕ್ ಕೂಡ ನಿರಾಶೆ ಹುಟ್ಟಿಸಿದರು. ಅವರ ಬಹು ನಿರೀಕ್ಷಿತ ಜರಾಸಂಧ ದಯನೀಯವಾದ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿತು. ಅದರ ನಂತರ ಬಿಡುಗಡೆಯಾದದ್ದು ಸೂರಿ ನಿರ್ದೇಶನದ ಅಣ್ಣಾಬಾಂಡ್. ಅದು ಕೂಡಾ ಪ್ರೇಕ್ಷಕರ ನಿರೀಕ್ಷೆ ಸಂತೃಪ್ತಿಗೊಳಿಸುವಲ್ಲಿ ವಿಫಲವಾದ ಸಿನಿಮಾ.
ಈಗ ಬಾಕಿ ಉಳಿದುಕೊಂಡಿರುವ ಏಕೈಕ ಭರವಸನೇಯ ನಿರ್ದೇಶಕ ಗುರುಪ್ರಸಾದ್ ಮಾತ್ರ. ಅವರ ಬಿಡುಗಡೆಯಾಗ ಬೇಕಿರುವ 'ಡೈರೆಕ್ಟರ್ ಸ್ಪೆಷಲ್' ಸಿನಿಮಾ ಗುರುಗೆ ಹ್ಯಾಟ್ರಿಕ್ ಯಶಸ್ಸು ತಂದುಕೊಡಲಿದೆಯೋ ಅಥವಾ ಅವರು ಈ ಎಲ್ಲಾ ನಿರ್ದೇಶಕರಂತೆ ಭ್ರಮ ನಿರಸನ ಗೊಳಲಿದ್ದಾರೋ ಅದು ಇತ್ಯರ್ಥವಾಗಲು ಇನ್ನೇನು ಕೆಲವೇ ತಿಂಗಳು ಬಾಕಿಯಿದೆ.
ಅದರ ಬಿಡುಗಡೆಗೂ ಮುನ್ನವೇ ಗುರುಪ್ರಸಾದ್ - ಸೂರಿ- ಯೋಗರಾಜ್ ಭಟ್ ಮೂವರು ಸೇರಿ ಒಂದು ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಗಾಳಿಸುದ್ದಿಗಳು ಶುರುವಾಗಿವೆ. ಒಬ್ಬರು ಹಣ ಹಾಕಿ, ಮತ್ತೊಬ್ಬರು ಸಂಭಾಷಣೆ, ಚಿತ್ರಕಥೆ ರಚಿಸಿ ಮಗುದೊಬ್ಬರು ನಿರ್ದೇಶನ ಮಾಡುವ ಒಂದು ಪ್ರಯೋಗಾತ್ಮಕ ಚಿತ್ರ ಮಾಡುವ ಆಲೋಚನೆ ಈ ಮೂವರಿಗಿದೆಯಂತೆ.
ಕನ್ನಡ ಚಿತ್ರಗಳಲ್ಲಿ ಹೀಗೆ ಪ್ರತಿಭಾವಂತರ ಸಮಾಗಮಗಳು ಒಂದೇ ಸಿನಿಮಾದಲ್ಲಾದರೆ, ಖಂಡಿತಾ ಅದರಿಂದ ಚಿತ್ರರಂಗಕ್ಕೆ ಬಹಳ ಲಾಭವಿದೆ. ಚಿತ್ರಮಂದಿರದಿಂದ ವಿಮುಖವಾಗಿರುವ ಪ್ರೇಕ್ಷಕನನ್ನು ಮತ್ತೆ ಥಿಯೇಟರ್ ಗೆ ಎಳೆದು ತರಲು ಇಂಥ ಪ್ರಯೋಗಗಳು ಯಶಸ್ವಿಯಾಗುವುದರಲ್ಲಿ ಸಂಶಯವೇ ಇಲ್ಲ.
ಆದರೆ ಇಂಥದೊಂದು ಸಿನಿಮಾ ನಿಜಕ್ಕೂ ಸಾಧ್ಯವಾಗುತ್ತದಾ ಅನ್ನೋದೇ ದೂಡ್ಡ ಡೌಟು. ಯಾಕೆಂದರೆ ಈ ಮೂವರಲ್ಲಿ ಯಾರೊಬ್ಬರು ಇಂಥದೊಂದು ಆಲೋಚನೆಯನ್ನು ಸೀರಿಯಸ್ಸಾಗಿ ಮಾಡಿದ್ದಲ್ಲ.
ಸುಮ್ಮನೆ ಕಾಡು ಹರಟೆಯ ಮಧ್ಯೆಯಲ್ಲೊಮ್ಮೆ ತೂರಿಕೊಂಡ ಆಲೋಚನೆ ಇದು. ಅದನ್ನು ಕೇಳಿಸಿಕೊಂಡವರಾರೋ, ನಿಜಕ್ಕೂ ಈ ಮೂವರು ಸೇರಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿಸಿ ಬಿಟ್ಟಿದ್ದಾರೆ. ಆದರೆ ಈ ಸುದ್ದಿಯ ಅಸಲಿ ಸತ್ಯ ಗೊತ್ತಿದ್ದವರು ಮಾತ್ರ ಹಬ್ಬಿಸಿದವರ ಮೂರ್ಖತನಕ್ಕೆ ನಕ್ಕು ಸುಮ್ಮನಾಗುತ್ತಿದ್ದಾರೆ.


Click it and Unblock the Notifications











