ಕುಪ್ಪಳ್ಳಿಯಲ್ಲಿ ನಿಂತು ಕಹಳೆ ಊದಿದ ಹಂಸಲೇಖ: ''ಹೋರಾಟ ಶುರು''
''ಕನ್ನಡದ ನಡ ಮುರಿಯುವ ಕೆಲಸವನ್ನು ಮಾಡಲಾಗುತ್ತಿದೆ. ಬಸವಣ್ಣ, ಕುವೆಂಪು ಅವರಿಗೆ ಅಪಮಾನ ಎಸಗುವ ಮೂಲಕ ಕನ್ನಡಕ್ಕೆ ಅಪಮಾನ ಎಸಗಲಾಗಿದೆ. ಹೀಗಿದ್ದ ಮೇಲೆ ನಾವು ಬದುಕಿದ್ದು ಏನು ಪ್ರಯೋಜನ, ಬನ್ನಿ ಹೋರಾಡೋಣ'' ಎಂದು ಚಿತ್ರ ಸಾಹಿತಿ ಹಂಸಲೇಖ ಕರೆ ನೀಡಿದ್ದಾರೆ.
ಪಠ್ಯ ಪರೀಕ್ಷರಣೆ ವಿರುದ್ಧ ಕುಪ್ಪಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಹಂಸಲೇಖ, ''ಅಂದು ಗೋಕಾಕ್ ಚಳವಳಿ, ಇಂದು ಕುಪ್ಪಳ್ಳಿ ಕಹಳೆ. ಸತತವಾಗಿ ನಾವು ಹೋರಾಟ ಮಾಡಬೇಕಿದೆ. ಕುವೆಂಪು ಎಂದರೆ ಕರ್ನಾಟಕ, ಬಸವಣ್ಣ ಎಂದರೆ ಕನ್ನಡ. ಇವರಿಗೇ ಅಪಮಾನ ಮಾಡಲಾಗಿದೆ, ಇದನ್ನು ಖಂಡಿಸಲೇ ಬೇಕಾಗಿದೆ'' ಎಂದರು.
''ಕನ್ನಡಿಗರಿಗೆ ಕಲ್ಯಾಣ ಮಹಾಮನೆಯಾದರೆ, ಕವಿಶೈಲ, ಕುಪ್ಪಳ್ಳಿ ಗುರುಮನೆ. ಈ ಗುರುಮನೆಯಿಂದ ನಾವಿಂದು ಕಹಳೆಯನ್ನು ಊದುತ್ತಾ ಇದ್ದೇವೆ. ನಮ್ಮ ನಾಡೇ ಒಂದು ಗೀತೆ. ನಮ್ಮ ನಾಡೇ ಒಂದು ಧ್ವಜ ಇವಕ್ಕೆ ಅಪಮಾನ ಆಗಿದೆ. ಕನ್ನಡದ ನಡ ಮುರಿಯುವ ನಡೆ ಕನ್ನಡ ನಾಡಿನಲ್ಲಿ ಶುರುವಾಗಿದೆ. ಇದರ ವಿರುದ್ಧ ಸತತವಾದ, ಸುಧೀರ್ಘ ಹೋರಾಟವನ್ನು ನಾವು ಮಾಡಬೇಕು'' ಎಂದಿದ್ದಾರೆ ಹಂಸಲೇಖ.

''ನಮ್ಮನ್ನು ಭಾಷಾಂಧರು ಅಂದರೂ ಸರಿ, ನಾವು ನೆರೆಯ ತಮಿಳುನಾಡಿಗರನ್ನು ಅನುಸರಿಸಬೇಕಿದೆ. ಅಲ್ಲಿ ಅವರ ಭಾಷೆಗೆ ತುಸು ಧಕ್ಕೆಯಾದರೂ ಆಡಳಿತ ಪಕ್ಷ, ವಿರೋಧ ಪಕ್ಷ ಎಲ್ಲರೂ ಒಟ್ಟಾಗಿ ಹೋರಾಡುತ್ತಾರೆ. ನಮಗೆ ಪಕ್ಷ ಇಲ್ಲ, ನಮ್ಮದು ಕನ್ನಡದ ಪಕ್ಷ, ಕವಿ ಪುಟ್ಟಪ್ಪ ಪಕ್ಷ, ಇಲ್ಲಿಂದ ಶುರುವಾಗಿದೆ ಕುಪ್ಪಳ್ಳಿ ಕಹಳೆ'' ಎಂದರು ಹಂಸಲೇಖ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ''ಪುರಂದರದಾಸರಿಗೆ ಅವಮಾನ ಮಾಡಲಾಗಿದೆ, ಕುವೆಂಪು, ಅಂಬೇಡ್ಕರ್, ಬಡವಣ್ಣರಿಗೆ, ನಾರಾಯಣಗುರುವಿಗೆ ಅವಮಾನ ಮಾಡಿದ್ದಾರೆ. ಮನುಸ್ಮೃತಿಯಲ್ಲಿರುವ ಕೆಲವವರ ಹೊರತಾಗಿ ಇನ್ಯಾರನ್ನೂ ಬಿಡದೆ ಅವಮಾನ ಮಾಡಲಾಗಿದೆ. ಅದನ್ನು ಸರ್ಕಾರ ಸರಿಪಡಿಸಲು ಆಗುವುದಿಲ್ಲ. ಅದರ ಬದಲು, ಎರಡು ವರ್ಷ ಅಧ್ಯಯನ ಮಾಡಿ ಮಾಡಿರುವ ಈ ಹಿಂದಿನ ಪಠ್ಯವನ್ನೇ ಉಳಿಸಿಕೊಳ್ಳಬೇಕು'' ಎಂದು ಒತ್ತಾಯಿಸಿದ್ದಾರೆ.
''ಪಠ್ಯ ಬದಲಾವಣೆಯಿಂದ ಹಲವಾರು ಕೋಟಿ ನಷ್ಟ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆ ಹಣವನ್ನು ಪಠ್ಯ ಪರಿಕ್ಷರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಶಿಕ್ಷಣ ಸಚಿವ ನಾಗೇಶ್ ಸರ್ಕಾರಕ್ಕೆ ಕಟ್ಟುವುದು ಒಳ್ಳೆಯದು. ಸಮಯ ಇಲ್ಲ ಎಂದು ಸರ್ಕಾರ ಹೇಳುತ್ತಿರುವ ಕಾರಣವೂ ಸರಿಯಿಲ್ಲ. ಕೊರೊನಾ ಸಮಯದಲ್ಲಿ ಎರಡೆರಡು ವರ್ಷವೇ ಕಳೆದು ಹೋಗಿದೆ. ಹಾಗಿದ್ದ ಮೇಲೆ ಇನ್ನೊಂದು ತಿಂಗಳು ಕಳೆದರೆ ಏನೂ ಆಗುವುದಿಲ್ಲ'' ಎಂದಿದ್ದಾರೆ ಕಿಮ್ಮನೆ.


Click it and Unblock the Notifications










