ಆ ನಗುವೊಂದೇ ಸಾಕು, 'ಅನಂತ' ಕಾಲ ನಿನ್ನ ಹೊಗಳಲು
ಕೆಲವು ಪಾತ್ರಗಳನ್ನು ಅನಂತ್ ನಾಗ್ ಬಿಟ್ಟರೆ ಬೇರೊಬ್ಬರು ಮಾಡಲು ಸಾಧ್ಯವೇ ಇಲ್ಲ. ದೇಶ ಹಾಗೂ ಭಾಷೆಗಳನ್ನು ಮೀರಿದ ಕಲಾವಿದ ಎಂಬ ಹೊಗಳಿಕೆಯ ಮಾತುಗಳು ಕನ್ನಡದ ಸ್ಫುರದ್ರೂಪಿ ನಟ ಅನಂತ್ ನಾಗ್ ಅವರ ಬಗ್ಗೆ ಕೇಳಿ ಬರುತ್ತದೆ. ಚಿರಯುವಕ, ಎವರ್ ಗ್ರೀನ್ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳ ಸಾಲಿಗೆ ಆನಂತ್ ಪೈಪೋಟಿ ಇಲ್ಲದ್ದಂತೆ ಸೇರಿಬಿಡುತ್ತಾರೆ. ಅನಂತ್ ಅವರ ನಟನೆ ಜೊತೆಗೆ ಆ ನಗೆ ಸದಾ ಕಾಲ ಅವರನ್ನು ಸಿನಿರಸಿಕರಲ್ಲಿ ಸ್ಥಿರವಾಗಿರುತ್ತದೆ. ಅವರ ಸುಂದರ ನಗೆ ಅವರ ಬದುಕಲ್ಲೂ ಸ್ಥಿರವಾಗಲಿ ಹ್ಯಾಪಿ ಬರ್ಥ್ ಡೇ ಅನಂತ್ ನಾಗ್.
ಕರಾವಳಿಯ ವಿಶಾಲವಾದ ಪರಿಸರದಲ್ಲಿ ತಮ್ಮ ಶಂಕರನ ಜೊತೆ ಆಡಿ ಬೆಳೆದ, ಅನಂತ್ ಅವರಿಗೆ ಮುಂಬೈ ಕೂಡಾ ಚಿರಪರಿಚಿತ. ಆದರೆ, ಶಂಕರ್ ನಾಗ್ ಗೆ ಮುಂಬೈನ ಸಂಕುಚಿತ ಗಲ್ಲಿಗಳಲ್ಲಿ ಇಕ್ಕಟ್ಟಿನ ಚಾಳಿಯಲ್ಲಿ ವಾಸ ಮಾಡುವ ಅನುಭವಗಳು ಅಷ್ಟಾಗಿ ಹಿಡಿಸಿರಲಿಲ್ಲವಂತೆ. ಕೊಂಕಣಿ, ಮರಾಠಿ, ಹಿಂದಿ ಹೀಗೆ ಅನೇಕ ಭಾಷೆಗಳ, ಸಂಸ್ಕೃತಿಯ ಪರಿಚಯದ ಲಾಭ ಮುಂದೆ ಅಣ್ಣ ತಮ್ಮ ಇಬ್ಬರ ಜೀವನದ ಪ್ರತಿ ಹೆಜ್ಜೆಯಲ್ಲೂ ಪ್ರತಿಬಿಂಬಿತವಾಗಿದೆ.
ಶಂಕರ್ ಹಾಗೂ ಅನಂತ್ರ ಒಡನಾಟದ ಬಗ್ಗೆ ಸುವಿಸ್ತಾರವಾಗಿರುವ ಕಥನದಲ್ಲಿ ಕಾಣಬರುವ ಅಂಶವೆಂದರೆ, ಭಾವನಾಜೀವಿಯಾದ ಅನಂತ್ ತಾವು ಕಲಿತ ಸದ್ವಿದ್ಯೆಗಳನ್ನೆಲ್ಲಾ ತನ್ನ ಪ್ರೀತಿಯ ತಮ್ಮನಿಗೆ ಒಂದೊಂದಾಗಿ ಧಾರೆಯೆರೆದಿದ್ದು. ಅಣ್ಣ ತಮ್ಮನ ಪ್ರೀತಿಯ ಒಡನಾಟ ಎಲ್ಲವನ್ನು ನನ್ನ ತಮ್ಮ ಶಂಕರ ಪುಸ್ತಕದಲ್ಲಿ ತೆರೆದಿಟ್ಟಿರುವ ಅನಂತ್ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದರಲ್ಲಿ ಅಚ್ಚರಿಯೇನಿಲ್ಲ. ನಟನಾಗಿ ಅಷ್ಟೇ ಅಲ್ಲ, ರಾಜಕಾರಣಿ, ಸಾಮಾಜಿಕ ಕಳಕಳಿಯುಳ್ಳ ನಾಗರಿಕ, ಸಾಹಿತ್ಯ ಪ್ರೇಮಿಯಾಗಿ ಕೂಡಾ ಅನಂತ್ ನಮ್ಮೆ ಹೆಮ್ಮೆ.

ಅನಂತ್ ಅವರ ಸಿನಿ ಪಯಣ
1973ರಲ್ಲಿ ಪಿವಿ ನಂಜರಾಜ ಅರಸ್ ಅವರ 'ಸಂಕಲ್ಪ' ಚಿತ್ರದ ಮೂಲಕ ಅನಂತ ನಾಗ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. 1975ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ನಿರ್ದೇಶನದ 'ಹಂಸಗೀತೆ' ಯಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರು. ಶಂಕರ್ ಕೂಡಾ ಕ್ಲಾಸಿಕ್ ಚಿತ್ರಗಳ ಮೂಲಕ ಚಿತ್ರಕ್ಕೆ ಕಾಲಿಟ್ಟವರು, ಅನಂತ್ ಹಾಗೂ ಶಂಕರ್ ಇಬ್ಬರೂ ಕ್ಲಾಸ್ ಹಾಗೂ ಮಾಸ್ ಎರಡೂ ಬಗೆ ಚಿತ್ರಗಳಲ್ಲಿ ಮಿಂಚಿದರು.

ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿ
ಕನ್ನಡದ ಜನಪ್ರಿಯ ಜೋಡಿ ಆದರ್ಶ ದಂಪತಿಗಳ ಜೋಡಿ, ಕೆಎಸ್ ನರಸಿಂಹ ಸ್ವಾಮಿ ಕವಿತೆಯ ಪಾತ್ರಗಳಂಥ ಕಂಡು ಬರುವ ಅನಂತ್ ಹಾಗೂ ಲಕ್ಷ್ಮಿ ಮುಖ್ಯ ಭೂಮಿಕೆಯ ಬೆಂಕಿಯ ಬಲೆ', 'ಚಂದನದ ಗೊಂಬೆ', 'ಇಬ್ಬನಿ ಕರಗಿತು', ಮುದುಡಿದ ತಾವರೆ ಅರಳಿತು', 'ಮಕ್ಕಳಿರಲವ್ವ ಮನೆತುಂಬ', 'ನೋಡಿ ಸ್ವಾಮಿ ನಾವಿರೋದು ಹೀಗೆ', 'ನಾ ನಿನ್ನ ಬಿಡಲಾರೆ', 'ಧೈರ್ಯಲಕ್ಷ್ಮಿ', 'ಬಿಡುಗಡೆಯ ಬೇಡಿ' ಎಂದಿಗೂ ಮರೆಯಲು ಸಾಧ್ಯವಿಲ್ಲ.

ಅನಂತ್ ಅವರ ಈ ಚಿತ್ರಗಳನ್ನು ನೋಡಲು ಮರೆಯದಿರಿ
'ಹಂಸಗೀತೆ', 'ಕನ್ನೇಶ್ವರ ರಾಮ', 'ಬರ', 'ಅವಸ್ಥೆ', 'ಉದ್ಭವ', 'ಮಿಂಚಿನ ಓಟ', 'ಆಕ್ಸಿಡೆಂಟ್', 'ಬೆಳದಿಂಗಳ ಬಾಲೆ', 'ಮತದಾನ', 'ಮೌನಿ', 'ಅನುರೂಪ', 'ರಾಮಾಪುರದ ರಾವಣ', 'ಸಿಂಹಾಸನ', 'ಅನ್ವೇಷಣೆ' ಹಾಗೂ ಟಿವಿ ಧಾರಾವಾಹಿ ಸರಣಿ, 'ಮಾಲ್ಗುಡಿ ಡೇಸ್' ಜೊತೆಗೆ 'ನಾ ನಿನ್ನ ಬಿಡಲಾರೆ" ಯ ವಿಭಿನ್ನ ಪಾತ್ರ ಡೋಂಟ್ ಮಿಸ್ ಇಟ್!

ಬಹುಭಾಷಾ ನಟ, ರಂಗಭೂಮಿ ಕಲಾವಿದ
ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲೂ ನಟಿಸಿರುವ ಅನಂತ್ ನಾಗ್ ಮರಾಠಿ ರಂಗಭೂಮಿಯಲ್ಲಿ ಎಂಟು ವರ್ಷಗಳ ಕಾಲ ದುಡಿದವರು. 'ಶ್ಯಾಂ ಬೆನೆಗಲ್' ಅವರ 'ಅಂಕುರ್' ಚಿತ್ರದಿಂದ ಚಿತ್ರರಂಗಕ್ಕೆ ಬಂದ ಅನಂತ್ ನಾಗ್, ನಂತರ 'ನಿಶಾಂತ್', 'ಕಲಿಯುಗ್', 'ಗೆಹ್ರಾಯಿ', 'ಭೂಮಿಕಾ', 'ಮಂಗಳಸೂತ್ರ್'. 'ಯುವ', 'ಕೊಂಡುರಾ', 'ಉತ್ಸವ್' ಹೀಗೆ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದರು. ಅಮೊಲ್ ಪಾಲೇಕರ್ ಜೋಡಿಯಾಗಿ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡರು.

'ಹಾಸ್ಯರತ್ನ ರಾಮಕೃಷ್ಣ ನಮ್ಮ ಅನಂತ್ ನಾಗ್
ಹಾಸ್ಯ ಚಿತ್ರಗಳಾದ 'ಚಾಲೆಂಜ್ ಗೋಪಾಲಕೃಷ್ಣ', 'ಗೋಲ್ ಮಾಲ್ ರಾಧಾಕೃಷ್ಣ', 'ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು', 'ಹೆಂಡ್ತೀಗ್ಹೇಳ್ಬೇಡಿ', 'ಗೌರಿ ಗಣೇಶ', 'ಗಣೇಶ ಸುಬ್ರಮಣ್ಯ', 'ಮನೇಲಿ ಇಲಿ ಬೀದೀಲಿ ಹುಲಿ', 'ಧೈರ್ಯಲಕ್ಷ್ಮಿ', 'ನಾರದ ವಿಜಯ', 'ಹಾಸ್ಯರತ್ನ ರಾಮಕೃಷ್ಣ', 'ಯಾರಿಗೂ ಹೇಳ್ಬೇಡಿ', 'ಗಾಯತ್ರಿ ಮದುವೆ', 'ಇನ್ನೊಂದು ಮದುವೆ', 'ಯಾರಿಗೆ ಸಾಲುತ್ತೆ ಸಂಬಳ', 'ಉಂಡು ಹೋದ ಕೊಂಡೂ ಹೋದ', 'ಉದ್ಭವ', 'ಹೆಂಡ್ತಿ ಬೇಕು ಹೆಂಡ್ತಿ', 'ಸಮಯಕ್ಕೊಂದು ಸುಳ್ಳು', 'ನಾನೇನೂ ಮಾಡ್ಲಿಲ್ಲ' ಮತ್ತೆ ಮತ್ತೆ ನೋಡುವಂಥ ಚಿತ್ರ.

ಮಲ್ಟಿ ಸ್ಟಾರರ್ ಚಿತ್ರಕ್ಕೂ ಸೈ
ಅನಂತ್ ನಾಗ್. ಡಾ ರಾಜ್ ಕುಮಾರ್ ಅವರೊಡನೆ 'ಕಾಮನಬಿಲ್ಲು'; ಡಾ ವಿಷ್ಣುವರ್ಧನ್ ಅವರೊಡನೆ 'ನಿಷ್ಕರ್ಷ', 'ಮತ್ತೆ ಹಾಡಿತು ಕೋಗಿಲೆ', 'ಜೀವನದಿ'; ರವಿಚಂದ್ರನ್ ಜೊತೆ 'ರಣಧೀರ', ಶಾಂತಿಕ್ರಾಂತಿ'; ಉಪೇಂದ್ರ ಅವರೊಡನೆ 'ಹಾಲಿವುಡ್', ಉಪ್ಪಿದಾದಾ, ಇತ್ತೀಚಿನ ಗಣೇಶ್, ದಿಗಂತ್ ಜೋಡಿಯಲ್ಲಿ ಬಂದ ಚಿತ್ರಗಳು ಜನಪ್ರಿಯ.


Click it and Unblock the Notifications











