ಕನ್ನಡ ಚಿತ್ರರಂಗದ ಏಳಿಗೆ ಬಗ್ಗೆ ಗಿರೀಶ್ ಕಾಸರವಳ್ಳಿ ಮಾತು
''ಸದಭಿರುಚಿಯ ಸಿನಿಮಾಗಳಿಗೆ ರಾಜ್ಯದಲ್ಲಿ ಪ್ರೋತ್ಸಾಹ ಮತ್ತು ಅವಕಾಶ ಸಿಕ್ಕಾಗ ಮಾತ್ರ ಕನ್ನಡ ಚಿತ್ರದ ಏಳಿಗೆ ಸಾಧ್ಯವಾಗಲಿದೆ'' ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರ ಸಮೂಹ ಹಾಗೂ ಚಾಮುಂಡೇಶ್ವರಿ ಸ್ಟುಡಿಯೋ ಅವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಏಳಿಗೆ ಬಗ್ಗೆ ಗಿರೀಶ್ ಕಾಸರವಳ್ಳಿ ಮಾತನಾಡಿದರು.
''ಸದಭಿರುಚಿಯ ಚಿತ್ರಗಳತ್ತ ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಚಲನಚಿತ್ರ ರಂಗದ ಕುರಿತು ಯೋಚಿಸುವವರೆಲ್ಲರ ಕನಸಾಗಿತ್ತು. ಸದಭಿರುಚಿಯ ಚಿತ್ರಗಳು ಅನೇಕ ಕಾರಣಗಳಿಂದಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿಲ್ಲ.'' ['ಬೆಳ್ಳಿ ಸಿನೆಮಾ-ಬೆಳ್ಳಿ ಮಾತು' ಸಿನಿ ರಸಿಕರೊಡನೆ ಸಂವಾದ]

''ಯೂರೋಪ್ ಮತ್ತು ಅಮೇರಿಕಾಗಳಲ್ಲಿ ಇಂತಹ ಸಿನಿಮಾಗಳಿಗೆಂದೇ ಪ್ರತ್ಯೇಕ ಚಿತ್ರಮಂದಿರಗಳಿರುತ್ತವೆ. ಇಲ್ಲಿ ಇಂತಹ ಸಿನಿಮಾಗಳ ಟಿಕೆಟ್ ಬೆಲೆ ಸಾಮಾನ್ಯ ಸಿನಿಮಾಗಳಿಗಿಂತ ಹೆಚ್ಚಾಗಿರುತ್ತದೆ. ಈ ಪರಿಸ್ಥಿತಿ ನಮ್ಮಲ್ಲಿ ಮೂಡಿದಾಗ ಮಾತ್ರ ನಿರ್ದೇಶಕರಿಗೆ ಇನ್ನೂ ಹೆಚ್ಚು ಉತ್ತಮ ಚಿತ್ರಗಳನ್ನು ನೀಡಲು ಸಾಧ್ಯವಾಗುತ್ತದೆ'' ಅಂತ ಗಿರೀಶ್ ಕಾಸರವಳ್ಳಿ ಹೇಳಿದರು.
''ಕನ್ನಡ ಚಿತ್ರರಂಗ ಉಳಿಸಲು ಹಾಗೂ ಬೆಳೆಸಲು 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಉತ್ತಮ ಪ್ರಯತ್ನವಾಗಿದೆ. ಇಂತಹ ಚಿತ್ರಗಳಿಗೆ ಇನ್ನೂ ಹೆಚ್ಚಿನ ಚಿತ್ರಮಂದಿರಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸುತ್ತದೆ'' ಎಂದು ಕನ್ನಡ, ಸಂಸ್ಕೃತಿ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಶ್ರೀ ಬಿ.ಜಿ.ನಂದಕುಮಾರ್ ತಿಳಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಹಾಗೂ ಸದಭಿರುಚಿಯ ಕನ್ನಡ ಚಿತ್ರಗಳನ್ನು ವೀಕ್ಷಕರಿಗೆ ಉಚಿತವಾಗಿ ಪ್ರದರ್ಶಿಸುವ ಮೂಲಕ ಬೆಂಗಳೂರಿನಲ್ಲಿ ಪ್ರಬುದ್ಧ ಚಲನಚಿತ್ರ ಪ್ರೇಕ್ಷಕ ವೃಂದವನ್ನು ಹುಟ್ಟುಹಾಕುವ ಸಲುವಾಗಿ 'ಬೆಳ್ಳಿ ಸಿನಿಮಾ - ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಪ್ರಾರಂಭಿಸಿದೆ.
ಪ್ರತಿ ಶನಿವಾರ ಸದಭಿರುಚಿಯ ಕನ್ನಡ ಚಿತ್ರವನ್ನು ಸಾರ್ವಜನಿಕರಿಗೆ ಉಚಿತವಾಗಿ ಪ್ರದರ್ಶಿಸುವ ಜೊತೆಗೆ ಚಿತ್ರತಂಡದೊಂದಿಗೆ ಸಂವಾದಕ್ಕೆ ಅವಕಾಶವಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಥಾಮಸ್ ಡಿಸೋಜಾ, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಹರಿವು ಚಿತ್ರ ನಿರ್ದೇಶಕ ಮಂಸೋರೆ, ಚಿತ್ರದ ನಾಯಕ ಸಂಚಾರಿ ವಿಜಯ್ ಮತ್ತು ಚಿತ್ರಾಸಕ್ತರು ಹಾಜರಿದ್ದರು.


Click it and Unblock the Notifications











