ದಂಡುಪಾಳ್ಯಕ್ಕೆ ಈಗ ಹೊಸ ಹೆಸರು ಗಾಂಧಿನಗರ
ಬೆಂಗಳೂರಿನಿಂದ 35 ಕಿ.ಮೀ ದೂರದಲ್ಲಿರುವ ಹೊಸಕೋಟೆ ತಾಲೂಕಿನ ದಂಡುಪಾಳ್ಯ ಹೆಸರು ಈಗ ಬದಲಾಗಿದೆ. ತಮ್ಮ ಊರಿನ ಹೆಸರು ಬದಲಾಯಿಸಬೇಕು ಎಂದು ಗ್ರಾಮಸ್ಥರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರು ಪ್ರಯೋಜನವಾಗಿರಲಿಲ್ಲ. "ನೀವ್ಯಾಕೆ ನಿಮ್ಮ ಊರಿನ ಹೆಸರನ್ನು ಫ್ಲೋರಿಡಾ" ಎಂದು ಬದಲಾಯಿಸಿಕೊಳ್ಳ ಬಾರದು ಕೋರ್ಟ್ ಚಟಾಕಿ ಹಾರಿಸಿತ್ತು.
ಇದನ್ನೇ ಸೀರಿಯಸ್ಸಾಗಿ ತೆಗೆದುಕೊಂಡ ಗ್ರಾಮಸ್ಥರು ತಮ್ಮ ಊರಿಗೆ ಗಾಂಧಿನಗರ ಎಂದು ಹೊಸದಾಗಿ ನಾಮಕರಣ ಮಾಡಿದ್ದಾರೆ. ಕನ್ನಡ ಚಿತ್ರೋದ್ಯಮದ ಶಕ್ತಿಕೇಂದ್ರ ಗಾಂಧಿನಗರ ಮೇಲಿನ ಪ್ರೀತಿಗೋ ಅಥವಾ ದ್ವೇಷಕ್ಕೋ ಏನೋ ಗೊತ್ತಿಲ್ಲ.
ಒಂದು ಮಾತಿದೆಯಲ್ಲಾ ಶತ್ರುವಿನ ಹೆಸರನ್ನು ಸಾಕುನಾಯಿಗೆ ಇಡಬೇಕು ಎಂಬಂತೆ ಇವರು ಒಂಚೂರು ಬದಲಾವಣೆ ಮಾಡಿಕೊಂಡು ತಮ್ಮ ಊರಿಗೆ ಇಟ್ಟುಕೊಂಡಿದ್ದಾರೆ. ಅಥವಾ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿಗೂ ಇರಬಹುದು.
ಒಟ್ಟಿನಲ್ಲಿ ಹೆಸರು ಬದಲಾಗಿರುವ ಸುದ್ದಿಯನ್ನು 'ಟೈಂಸ್ ಆಫ್ ಇಂಡಿಯಾ' ದಿನಪತ್ರಿಕೆ ಮುಖಪುಟದಲ್ಲಿ ಪ್ರಕಟಿಸಿದೆ. ಅದರಲ್ಲೂ ಪೂಜಾಗಾಂಧಿ ಪ್ರಮುಖ ಪಾತ್ರದಲ್ಲಿರುವ 'ದಂಡುಪಾಳ್ಯ' ಚಿತ್ರ ಬಿಡುಗಡೆಯಾದ ಮೇಲಂತೂ ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದರು.
ಯಾರೋ ಕೆಲವರು ಮಾಡಿದ ದರೋಡೆ ಹಾಗೂ ಕೊಲೆ ಕೃತ್ಯಗಳಿಂದಾಗಿ ಇಡೀ ನಮ್ಮ ಊರಿಗೆ ಕೆಟ್ಟ ಹೆಸರು ಬಂದಿದೆ. ಕೃತ್ಯದಲ್ಲಿ ತೊಡಗಿದ್ದವರನ್ನು ದಂಡುಪಾಳ್ಯ ಗ್ಯಾಂಗ್ ಎಂದು ಕರೆದಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ತಮ್ಮ ನೋವು ತೋಡಿಕೊಂಡಿದ್ದರು.
ಇಡೀ ಊರಿಗೆ ಅಂಟಿಕೊಂಡಿರುವ ಈ ಕುಖ್ಯಾತಿಯಿಂದಾಗಿ ನಮ್ಮ ಊರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ನಮ್ಮೂರಿನೊಂದಿಗೆ ಸಂಬಂಧ ಬೆಳೆಸುತ್ತಿಲ್ಲ. ಊರಿನವರೆಲ್ಲರನ್ನೂ ಕೆಟ್ಟಭಾವದಿಂದ ನೋಡಲಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಸಹನೆಯನ್ನು ಹೊರಹಾಕಿದ್ದರು.
ಚಿತ್ರದ ಶೀರ್ಷಿಕೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಬೇಕಿದ್ದರೆ ನಿಮ್ಮ ಊರಿನ ಹೆಸರನ್ನೇ ಬದಲಾಯಿಸಿಕೊಳ್ಳಿ ಎಂದು ಕೋರ್ಟ್ ಸಲಹೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ತಮ್ಮ ಊರಿಗೆ 'ಗಾಂಧಿನಗರ' ಎಂದು ಹೆಸರಿಟ್ಟಿದ್ದಾರೆ.
ಈ ಬಗ್ಗೆ ದಂಡುಪಾಳ್ಯ ಕೌನ್ಸಿಲರ್ 'ಟೈಂಸ್' ಪತ್ರಿಕೆ ಜೊತೆ ಮಾತನಾಡುತ್ತಾ, "ಚಿತ್ರಕ್ಕೆ ದಂಡುಪಾಳ್ಯ ಶೀರ್ಷಿಕೆ ಇಡದಂತೆ ನಿರ್ಮಾಪಕರಿಗೆ ಕರೆಮಾಡಿದರೂ ನಯಾಪೈಸೆಯಷ್ಟು ಪ್ರಯೋಜವಾಗಿರಲಿಲ್ಲ. ಕಡೆಗೆ ಊರಿನ ಹೆಸರು ಬದಲಾಯಿಸುವುದೇ ಸೂಕ್ತ ಎನ್ನಿಸಿ ಗಾಂಧಿನಗರ ಎಂದು ಹೊಸದಾಗಿ ಮರುನಾಮಕರಣ ಮಾಡಿದ್ದೇವೆ" ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











