ಶಿವಗಂಗದಲ್ಲಿ ಉಕ್ಕಿಹರಿದ ಶೃಂಗಾರ ರಸಧಾರೆ

ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನ ಹೊರವಲಯದ ನಾಗರಬಾವಿ ಬಳಿಯ ರೋಲಾ ಗಾರ್ಡನ್ ನಲ್ಲಿ ಭರದಿಂದ ಸಾಗುತ್ತಿದೆ. ಹಾಟ್ ಹಾಟ್ ಹಾಡಿನ ಚಿತ್ರೀಕರಣ ಬಿರುಬಿರುಸಾಗಿ ಸಾಗಿದೆ. ಈ ಐಟಂ ಹಾಡಿಗಾಗಿ ಮುಂಬೈನಿಂದ ನರ್ತಕಿ ಸನಿಷಾರನ್ನು ಕರೆತರಲಾಗಿತ್ತು.
"ಬಾರೊಲೇ ಮಲ್ಲೆ ಮೊಗ್ಗುಗಳ ತಾರೋ ಮನ್ಮಥ ಮಂಚಕ್ಕೆ ಬಾರೋ..." ಎಂಬ ಹಾಡಿಗೆ ಸನಿಷಾ ತಮ್ಮ ಮೈಕುಣಿಸಿ ಶೃಂಗಾರ ರಸಧಾರೆ ಹರಿಸಿದರು. ಈ ಹಾಡಿಗೆ ಕಪಿಲ್ ಎಂಬುವವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ಗೋಪಿಕರ್, ಶೋಭರಾಜ್, ಭಾನುರೆಡ್ಡಿ ಮುಂತಾದವರಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ರಾಜೀವ್ ಕೃಷ್ಣ ಅವರದು.
ಎಲ್ಲರೂ ಹೊಸಬರೇ ಇರುವ ಚಿತ್ರಕ್ಕೆ ಈ ಹಿಂದೆ 'ಗ್ರಹಣ' ಎಂದು ಹೆಸರಿಡಲಾಗಿತ್ತು. ಆದರೆ ಈಗಾಗಲೆ ಆ ಹೆಸರಿನ ಚಿತ್ರ ಬಂದು ಹೋಗಿರುವುದರಿಂದ ಬೇರೆ ಹೆಸರಿಡುವಂತೆ ವಾಣಿಜ್ಯ ಮಂಡಳಿ ಸೂಚಿಸಿತ್ತು. ಹಾಗಾಗಿ ಚಿತ್ರಕ್ಕೆ 'ಶಿವಗಂಗ' ಎಂದಿಡಲಾಗಿದೆ. ಚಿತ್ರದಲ್ಲಿ ನಾಯಕನ ಹೆಸರು ಶಿವ ಹಾಗೂ ನಾಯಕಿಯ ಹೆಸರು ಗಂಗ.
ಈ ಚಿತ್ರದ ವಿಶೇಷವೆಂದರೆ ಇಡೀ ಚಿತ್ರದಲ್ಲಿ ಬರುವುದು ಕೇವಲ ಮೂರೇ ಮೂರು ಪಾತ್ರಗಳು. ಕೇವಲ ಮೂರು ಪಾತ್ರಗಳಲ್ಲಿ ಕಥೆ ಸಾಗುತ್ತದೆ. ಪ್ರೀತಿಯನ್ನು ಪ್ರೀತಿಯಿಂದಲೆ ಪಡೆಯಬೇಕು ಬಲವಂತದಿಂದಲ್ಲ ಎಂಬುದರ ಬಗ್ಗೆ ಕಥೆ ಹೆಣೆದಿದ್ದು, ನಾಯಕರಾಗಿ ತೆಲುಗು ನಟ ಗೋಪಿಕರ್ ಮತ್ತೊಬ್ಬ ನಾಯಕರಾಗಿ ಶೋಭರಾಜ್ ನಟಿಸುತ್ತಿದ್ದಾರೆ. 'ನಮಿತಾಐಲವ್ಯು' ಮತ್ತು 'ಅಂತಃಕರಣ' ಚಿತ್ರಗಳಲ್ಲಿ ಪುಟ್ಟ ಪಾತ್ರ ಮಾಡಿರುವ ಅಕ್ಷತಾಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಖಳನಟನಾಗಿ ಯಶಸ್ವಿಯಾಗಿರುವ ಶೋಭರಾಜ್ಗೆ ಇದರಲ್ಲಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸೋಲೋ ಸಾಂಗ್ನ್ನು ಇವರಿಗೆ ಅಂತಲೆ ಸೃಷ್ಟಿಸಲಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಒಂದು ಹಾಡು ಸಂಪೂರ್ಣ ಐಟಂಮಯ.
ನಿರ್ದೇಶಕರು ಒಂದು ಹಾಗೂ ನಿರ್ಮಾಪಕರು ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಈಗಾಗಲೆ ದೇವನಹಳ್ಳಿ ಸುತ್ತಮುತ್ತ 20 ದಿನಗಳ ಚಿತ್ರೀಕರಣವನ್ನು ಮುಗಿಸಲಾಗಿದೆ. ಸುಮಾರು ರು.30 ಲಕ್ಷ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಬೆಳ್ಳಿತೆರೆ ಮೇಲೆ ಬೆಳೆ ತೆಗೆಯುವ ಹುಮ್ಮಸ್ಸು ಬಳ್ಳಾರಿ ಬೇಸಾಯಗಾರರದು. (ಏಜೆನ್ಸೀಸ್)


Click it and Unblock the Notifications











