ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಈಗ ಹೇಗಿದ್ದಾರೆ?
ಭಾರತೀಯ ಚಿತ್ರರಂಗ ಕಂಡಂತಹ ಮನೋಜ್ಞ ಚಿತ್ರನಿರ್ಮಾತೃ ಕೆ ಬಾಲಚಂದರ್ (84). ಕನ್ನಡ, ತೆಲುಗು,ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಅವರು ಚಿತ್ರಗಳನ್ನು ನಿರ್ದೇಶಿಸಿರುವುದು ಗೊತ್ತೇ ಇದೆ. ಇತ್ತೀಚೆಗೆ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯದ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಒಂದು ಸಣ್ಣ ವರದಿ.
ವಯೋಸಹಜ ಅನಾರೋಗ್ಯ ಸಮಸ್ಯೆಗಳ ಕಾರಣ ಎರಡು ದಿನಗಳ ಹಿಂದಷ್ಟೇ ಬಾಲಚಂದರ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಆದರೆ ಅವರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. [ಕೆ.ಬಾಲಚಂದರ್ ಆರೋಗ್ಯ ಗಂಭೀರ]
ತೀವ್ರ ನಿಗಾ ಘಟಕದಲ್ಲಿ ಅವರು ನಗುನಗುತ್ತಾ ಇರುವ ಫೊಟೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಬಾಲಚಂದರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಒತ್ತಿದ ನಿರ್ದೇಶಕ ಬಾಲಚಂದರ್. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ರಮೇಶ್ ಅರವಿಂದ್, ಕಮಲಹಾಸನ್, ರಜನಿಕಾಂತ್, ಮಮ್ಮುಟ್ಟಿ, ಚಿರಂಜೀವಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಬಾಲಚಂದರ್ ಅವರಿಗೆ ಸಲ್ಲುತ್ತದೆ. ಕನ್ನಡದಲ್ಲಿ ಬಾಲಚಂದರ್ ಅವರು ತಪ್ಪಿದ ತಾಳ, ಬೆಂಕಿಯಲ್ಲಿ ಅರಳಿದ ಹೂವು, ಎರಡು ರೇಖೆಗಳು, ಮುಗಿಲ ಮಲ್ಲಿಗೆ, ಸುಂದರ ಸ್ವಪ್ನಗಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕಮಲ್ ಹಾಸನ್ ಅಭಿನಯದ 'ಉತ್ತಮ ವಿಲನ್' ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸುತ್ತಿದ್ದ ಕೆ.ಬಾಲಚಂದರ್ ಅದರ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಆದರೆ, ತಮ್ಮ 53 ವರ್ಷದ ಮುದ್ದಿನ ಮಗ ಕೈಲಾಸಂ ಸಾವನ್ನಪ್ಪಿದ ಬಳಿಕ ಬಾಲಚಂದರ್, ಮಾನಸಿಕವಾಗಿ ಕುಗ್ಗಿದ್ದರು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











