ಯಾರದ್ದೋ ಪಾಲಾಗಿದ್ದ 'ರಕ್ತ ಕಣ್ಣೀರು' ಸಾಧುಕೋಕಿಲಾ ಅದೃಷ್ಟ ಬದಲಾಯಿಸಿದ್ದು ಹೇಗೆ?
ಸಾಧುಕೋಕಿಲ ಹಾಸ್ಯನಟರಾಗಿ ಕನ್ನಡ ಸಿನಿ ಪ್ರಿಯರಿಗೆ ಗೊತ್ತು. ಭಾರತದ ಪ್ರಸ್ತುತ ಖ್ಯಾತ ಹಾಸ್ಯನಟರ ಸಾಲಿನಲ್ಲಿ ನಿಲ್ಲುವ ಸಾಧುಕೋಕಿಲ, ಕನ್ನಡ ಸಿನಿಮಾ ರಂಗದ ಈಗಿನ ನಂಬರ್ 1 ಹಾಸ್ಯ ನಟ.
Recommended Video
ಆದರೆ ಸಾಧುಕೋಕಿಲ ಕೇವಲ ಹಾಸ್ಯನಟರಷ್ಟೇ ಅಲ್ಲ. ಅವರದ್ದು ಬಹುಮುಖ ಪ್ರತಿಭೆ. ಸಂಗೀತ ನಿರ್ದೇಶಕ, ಗಾಯಕ ಜೊತೆಗೆ ಅತ್ಯುತ್ತಮ ಸಿನಿಮಾ ನಿರ್ದೇಶಕರೂ ಹೌದು.
ಸಂಗೀತ ನಿರ್ದೇಶಕರಾಗುವ ಕನಸು ಹೊತ್ತು ಸಿನಿಮಾ ರಂಗ ಪ್ರವೇಶಿಸಿದ ಸಾಧುಕೋಕಿಲ ಅವರಿಗೆ ನಟನೆಯ ಅವಕಾಶವೂ ದೊರೆಯಿತು, ಅದನ್ನು ಅವರು ಅದ್ಭುತವಾಗಿ ಬಳಸಿಕೊಂಡರು, ನಂತರ ನಿರ್ದೇಶಕನಾಗುವ ಅವಕಾಶವೂ ದೊರೆಯಿತು ಅದನ್ನೂ ಅವರು ಚೆನ್ನಾಗಿ ಬಳಸಿಕೊಂಡರು.
ಸಂಗೀತ, ಸಾಧುಕೋಕಿಲ ಆಯ್ಕೆ ಮಾಡಿಕೊಂಡಿದ್ದ ಕ್ಷೇತ್ರ, ಆದರೆ ನಿರ್ದೇಶನ ಹಾಗಲ್ಲ, ಅದು ಬಯಸದೇ ಬಂದ ಭಾಗ್ಯ.

ಸಾಧುಕೋಕಿಲ ನಿರ್ದೇಶನದ ಮೊದಲ ಸಿನಿಮಾ 'ರಕ್ತ ಕಣ್ಣೀರು'
ಸಾಧುಕೋಕಿಲ ಅವರ ಮೊದಲ ನಿರ್ದೇಶನದ ಸಿನಿಮಾ 'ರಕ್ತ ಕಣ್ಣೀರು'. ಉಪೇಂದ್ರ, ರಮ್ಯಾಕೃಷ್ಣ, ಅಭಿರಾಮಿ, ಕುಮಾರ್ ಬಂಗಾರಪ್ಪ ನಟಿಸಿದ್ದ ಈ ಸಿನಿಮಾ ಸೂಪರ್, ಡೂಪರ್ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಸಾಧುಕೋಕಿಲ ಅವರಿಗೆ ಸಿನಿಮಾ ನಿರ್ದೇಶನದ ಅವಕಾಶಗಳು ಹುಡುಕಿಕೊಂಡು ಬಂದವು.

ಸಾಧು ಕೋಕಿಲ ನಿರ್ದೇಶಕರಾಗಿರಲಿಲ್ಲ
ಆದರೆ ರಕ್ತ ಕಣ್ಣೀರು ಸಿನಿಮಾದ ನಿರ್ದೇಶಕ ಸಾಧುಕೋಕಿಲಾ ಆಗಿರಲಿಲ್ಲ, ಸಿನಿಮಾದ ನಿರ್ಮಾಪಕ ಮುನಿರತ್ನ, ರಕ್ತ ಕಣ್ಣೀರು ಸಿನಿಮಾದ ನಿರ್ದೇಶನಕ್ಕಾಗಿ ಆಯ್ಕೆ ಮಾಡಿದ್ದಿದ್ದು ಶಿವಮಣಿ ಅವರನ್ನು. ಗೋಲಿಬಾರ್ ಸಿನಿಮಾ ಖ್ಯಾತಿಯ ಶಿವಮಣಿ, ಉಪೇಂದ್ರ, ಮುನಿರತ್ನ ಒಟ್ಟಾಗಿಯೇ ರಕ್ತ ಕಣ್ಣೀರು ಸಿನಿಮಾದ ಘೋಷಣೆ ಮಾಡಿದ್ದರು.

ಗಟ್ಟಿ ನಿರ್ಣಯ ಮಾಡಿದ ಮುನಿರತ್ನ
ಆದರೆ ಆ ನಂತರ ಶಿವಮಣಿ ಅವರು ನಟನೆಯಲ್ಲಿ ಬ್ಯುಸಿ ಆಗಿಬಿಟ್ಟರು. ಉಪೇಂದ್ರ ಅವರು ಕಾಲ್ಶೀಟ್ ಅನ್ನು ಪಡೆದುಕೊಂಡು ಬಿಟ್ಟಿದ್ದ ಮುನಿರತ್ನ ಅವರ ಬಳಿ ಹೆಚ್ಚು ಸಮಯ ಇರಲಿಲ್ಲ. ಆಗ ಉಪೇಂದ್ರ ಅವರ ಸಲಹೆಯನ್ನೂ ಪಡೆದುಕೊಂಡು ಸಾಧುಕೋಕಿಲ ಅವರನ್ನು ನಿರ್ದೇಶಕರನ್ನಾಗಿ ಘೋಷಿಸಿಬಿಟ್ಟಿರು ಮುನಿರತ್ನ.

ಅವಕಾಶವನ್ನು ಕೈಚೆಲ್ಲಲಿಲ್ಲ ಸಾಧುಕೋಕಿಲ
ಹಠಾತ್ ಎಂದು ಬಂದ ಅವಕಾಶವನ್ನು ಸುಮ್ಮನೆ ಹೋಗಲು ಬಿಡಲಿಲ್ಲ ಸಾಧುಕೋಕಿಲ. ಬಹುಕಾಲದ ಗೆಳೆಯ ಹಾಗೂ ನಿರ್ದೇಶಕ ಉಪೇಂದ್ರ ಅವರ ಬೆಂಬಲವೂ ಸಾಧುಕೋಕಿಲ ಅವರಿಗೆ ಇತ್ತು, ಹಾಗಾಗಿ ಧೈರ್ಯವಾಗಿ ಸಿನಿಮಾ ನಿರ್ದೇಶಿಸಿ ತೆರೆಗೆ ತಂದರು. ಆ ನಂತರ ನಡೆದಿದ್ದು ಇತಿಹಾಸ. ಸಿನಿಮಾ ಸೂಪರ್-ಡೂಪರ್ ಹಿಟ್ ಎನಿಸಿಕೊಂಡಿತು.

ಎಲ್ಲರ ಬಾಯಿ ಮುಚ್ಚಿಸಿದ ಸಾಧು ಕೋಕಿಲ
ರಕ್ತ ಕಣ್ಣೀರು ಸಿನಿಮಾ ಉಪೇಂದ್ರ ಅವರದ್ದು, ಹೆಸರಿಗೆ ಮಾತ್ರವೇ ಸಾಧುಕೋಕಿಲ ನಿರ್ದೇಶಕ ಎಂದು ಈಗಲೂ ಕೆಲವರು ಹೇಳುತ್ತಾರೆ. ರಕ್ತ ಕಣ್ಣೀರು ನಂತರ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ಹಿಟ್ ನೀಡಿದ ಸಾಧುಕೋಕಿಲ ಅವರ ಬಾಯಿ ಮುಚ್ಚುವಂತೆ ಮಾಡಿದರು.

ಶಿವಣ್ಣ ಜೊತೆ 'ರಾಕ್ಷಸ' ನಿರ್ದೇಶಿಸಿದರು ಸಾಧು
ರಕ್ತ ಕಣ್ಣೀರು ಬಳಿಕ ಶಿವರಾಜ್ ಕುಮಾರ್ ನಟನೆಯ 'ರಾಕ್ಷಸ' ಸಿನಿಮಾ ನಿರ್ದೇಶಿಸಿದರು ಸಾಧು, ಅದೂ ಸಹ ಸೂಪರ್ ಹಿಟ್ ಆಯಿತು. ದರ್ಶನ್ ಜೊತೆ ಸುಂಟರಗಾಳಿ, ದರ್ಶನ್-ಉಪೇಂದ್ರ ಕಾಂಬಿನೇಶನ್ನ ಅನಾಥರು, ಸುದೀಪ್ ಜೊತೆ ತೀರ್ಥ, ಹೀಗೆ ಒಟ್ಟು ಹತ್ತು ಸಿನಿಮಾ ನಿರ್ದೇಶಿಸಿದ್ದಾರೆ ಸಾಧು. ತಮಗೆ ದೊರೆತ ಅವಕಾಶಗಳನ್ನು ಕೈಚೆಲ್ಲಿ ಹೋಗಲು ಬಿಡದೆ ತಾವೊಬ್ಬ ಬಹುಮುಖ ಪ್ರತಿಭೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಅವರು.


Click it and Unblock the Notifications











