'ಕಾಂತಾರ' ಒಂದೆರಡು ವಾರ ಓಡುತ್ತೆ ಅನ್ಕೊಂಡಿದ್ದೆ, 'ಗಂಧದಗುಡಿ' ರಿಲೀಸ್ ಡೇಟ್ ಗೊತ್ತಿರಲಿಲ್ಲ: ಝೈದ್ ಖಾನ್
ಝೈದ್ ಖಾನ್ ಹಾಗೂ ಸೋನಲ್ ಮೊಂಥೆರೊ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಹಾಗೂ ಬನಾರಸ್ ನಿನ್ನೆಯಷ್ಟೇ ( ನವೆಂಬರ್ 4 ) ರಾಜ್ಯಾದಂತ್ಯ ಬಿಡುಗಡೆಗೊಂಡು ವೀಕ್ಷಿಸಲ್ಪಟ್ಟ ಸಿನಿ ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆ ಪಡೆದುಕೊಳ್ತಿದೆ. ಈ ಹಿಂದೆ ಬೆಲ್ ಬಾಟಂ ರೀತಿಯ ಬೃಹತ್ ಹಿಟ್ ನೀಡಿದ್ದ ನಿರ್ದೇಶಕ ಜಯತೀರ್ಥ ಗ್ಯಾಪ್ ಬಳಿಕ ಬನಾರಸ್ ಕತೆಯೊಂದಿಗೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ನಿರ್ದೇಶಕ ಜಯತೀರ್ಥ ಹಾಗೂ ನಟ ಝೈದ್ ಖಾನ್ ಇಬ್ಬರೂ ಸಹ ಯಶಸ್ವಿಯಾಗಿದ್ದಾರೆ. ಇನ್ನು ಚಿತ್ರಮಂದಿರಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಹಾಗೂ ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರಗಳು ಅಬ್ಬರಿಸುತ್ತಿರುವ ಸಮಯದಲ್ಲಿ ಬನಾರಸ್ ಬಿಡುಗಡೆಗೊಳಿಸಿದ್ದು ಸರಿಯಾದ ನಿರ್ಧಾರವಲ್ಲ ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗಿತ್ತು.
ಈ ಕುರಿತಾಗಿ ಚಿತ್ರ ಬಿಡುಗಡೆ ಹಿಂದಿನ ದಿನ ನಡೆದ ಸುದ್ದಿಗೋಷ್ಠಿಯಲ್ಲಿಯೂ ಸಹ ಪ್ರಶ್ನೆ ಎದುರಾಗಿತ್ತು. ದೊಡ್ಡ ಚಿತ್ರಗಳ ನಡುವೆ ತಮ್ಮ ಚಿತ್ರವನ್ನೇಕೆ ಬಿಡುಗಡೆ ಮಾಡಿದ್ದರ ಕಾರಣವನ್ನೂ ಸಹ ನಟ ಝೈದ್ ಖಾನ್ ಇದೇ ವೇಳೆ ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಕಾಂತಾರ ಹಾಗೂ ಗಂಧದ ಗುಡಿ ಬಗ್ಗೆಯೂ ಝೈದ್ ಖಾನ್ ಮಾತನಾಡಿದರು.

ಕಾಂತಾರ ಒಂದೆರಡು ವಾರ ಅನ್ಕೊಂಡಿದ್ದೆ
ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರೋರ್ವರು ಕಾಂತಾರ ಚೆನ್ನಾಗಿ ಓಡ್ತಾ ಇದೆ, ಹೆಡ್ ಬುಷ್ ಇದೆ ಹಾಗೂ ಗಂಧದ ಗುಡಿ ಕೂಡ ಬಂದಿದೆ ಇಂಥ ಸಂದರ್ಭದಲ್ಲಿ ನಿಮ್ಮ ಚಿತ್ರವನ್ನು ಯಾಕೆ ಬಿಡುಗಡೆ ಮಾಡ್ತಾ ಇದ್ದೀರ, ಇದರರ್ಥ ನೀವು ತುಂಬಾ ಧೈರ್ಯದಿಂದ ಇದ್ದೀರ ಅಂತಾನಾ ಅಥವಾ ಚಿತ್ರದ ಕಂಟೆಂಟ್ ಮೇಲೆ ನಂಬಿಕೆ ಇದೆ ಅಂತಾನಾ ಎಂದು ಪ್ರಶ್ನೆಯನ್ನು ಝೈದ್ ಖಾನ್ಗೆ ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ಝೈದ್ ಖಾನ್ ನವೆಂಬರ್ 4ರಂದು ಬನಾರಸ್ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಬಹಳ ಹಿಂದೆಯೇ ನಿರ್ಧರಿಸಿದ್ದೆವು, ಕಾಂತಾರ ಚೆನ್ನಾಗಿದ್ದರೆ ಒಂದೆರಡು ವಾರ ಓಡಬಹುದು ಅನ್ಕೊಂಡಿದ್ವಿ, ಐದಾರು ವಾರ ನಿಲ್ಲುತ್ತೆ ಅನ್ನೋ ಗ್ಯಾರಂಟಿ ಇರಲಿಲ್ಲ, ಆದ್ರೆ ಚಿತ್ರ ಸೂಪರ್ ಡೂಪರ್ ಹಿಟ್ ಆಯ್ತು ಹೀಗಾಗಿ ಆರನೇ ವಾರವೂ ಪ್ರದರ್ಶನವಾಗ್ತಿದೆ ಎಂದರು.

ಗಂಧದ ಗುಡಿ ರಿಲೀಸ್ ಡೇಟ್ ಬಗ್ಗೆ ಗೊತ್ತಿರಲಿಲ್ಲ
ಇನ್ನು ನಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವಾಗ ಅಪ್ಪು ಸರ್ ಗಂಧದ ಗುಡಿ ಅಕ್ಟೋಬರ್ 28ಕ್ಕೆ ಬಿಡುಗಡೆಯಾಗ್ತಿದೆ ಎಂಬುದು ತಿಳಿದಿರಲಿಲ್ಲ, ಆಮೇಲೆ ಹಿಂದಿ ಹಾಗೂ ತೆಲುಗು ವಿತರಕರಿಗೆ ಹಕ್ಕು ಮಾರಾಟ ಮಾಡಿದ್ದರಿಂದ ಚಿತ್ರದ ಬಿಡುಗಡೆ ದಿನಾಂಕವನ್ನೂ ಮುಂದೂಡಲಾಗಲಿಲ್ಲ ಎಂದು ಝೈದ್ ಖಾನ್ ತಿಳಿಸದರು.

ಬನಾರಸ್ಗೂ ಮುನ್ನ ಗಂಧದ ಗುಡಿ ರಿಲೀಸ್ ಡೇಟ್ ಘೋಷಣೆಯಾಗಿತ್ತು!
ಇಲ್ಲಿ ಝೈದ್ ಖಾನ್ ನಾವು ನಮ್ಮ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ಸಂದರ್ಭದಲ್ಲಿ ಗಂಧದಗುಡಿ ಅಕ್ಟೋಬರ್ 28ಕ್ಕೆ ರಿಲೀಸ್ ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಹೇಳಿದರು. ಆದರೆ ಸತ್ಯಾಂಶವೇನೆಂದರೆ ಬನಾರಸ್ ಬಿಡುಗಡೆ ದಿನಾಂಕ ಘೋಷಣೆಗೊಂಡದ್ದು ಆಗಸ್ಟ್ 31ಕ್ಕೆ ಹಾಗೂ ಗಂಧದಗುಡಿ ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದ್ದು ಜುಲೈ 15ಕ್ಕೆ. ಹೀಗೆ ಒಂದೂವರೆ ತಿಂಗಳಿಗೂ ಮುನ್ನವೇ ಘೋಷಣೆಯಾಗಿದ್ದ ಗಂಧದಗುಡಿ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಬನಾರಸ್ ಚಿತ್ರತಂಡಕ್ಕೆ ಮಾಹಿತಿ ಇರಲಿಲ್ವಾ ಎಂಬ ಅನುಮಾನ ಮೂಡದೇ ಇರದು.

ಆದರೂ ನಮಗೆ ಸಿಗಬೇಕಾದದ್ದು ಸಿಕ್ಕಿದೆ
ಇದೇ ವೇಳೆ ಚಿತ್ರದ ನಿರ್ಮಾಪಕರು ಮಾತನಾಡಿ ಎಷ್ಟೇ ದೊಡ್ಡ ಚಿತ್ರಗಳಿದ್ದರೂ ಸಹ ನಮಗೆ ಸಿಗಬೇಕಾದ ಚಿತ್ರಮಂದಿರಗಳು ನಮಗೆ ದೊರೆತಿವೆ ಎಂದು ತಿಳಿಸಿದರು. ಕಳೆದ ಕೆಲ ವರ್ಷಗಳಲ್ಲಿ ಪರಭಾಷಾ ಚಿತ್ರಗಳಿಂದ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿಯೇ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂಬುದನ್ನು ಕೇಳುತ್ತಿದ್ದ ಸಿನಿ ಪ್ರೇಕ್ಷಕರು ಸದ್ಯ ಚಿತ್ರಮಂದಿರಗಳಿಗಾಗಿ ಕನ್ನಡ ಚಿತ್ರಗಳ ನಡುವೆ ನಡೆಯುತ್ತಿರುವ ಸ್ಪರ್ಧೆ ಕಂಡು ಚಂದನವನ ಬೆಳೆಯುತ್ತಿದೆ ಎಂದುಕೊಳ್ಳುತ್ತಿದ್ದಾರೆ.


Click it and Unblock the Notifications











