ಬೆಂಗಳೂರು ವಾಸಿಗಳ ಬದ್ಧತೆ ಬಗ್ಗೆ ಪ್ರಶ್ನಿಸಿದ ನಟ ಜಗ್ಗೇಶ್.!
ಕರ್ನಾಟಕ ವಿಧಾನಸಭೆ ಚುನಾವಣೆ 2018 ರ ಮತದಾನ ಪ್ರಕ್ರಿಯೆ ಮುಗಿದಿದೆ. ಚುನಾವಣೆ ದಿನವಾದ ನಿನ್ನೆ (ಮೇ 12) ಪ್ರಜ್ಞಾವಂತ ಜನಸಾಮಾನ್ಯರು ಮತ ಚಲಾಯಿಸಿ ಕರ್ತವ್ಯ ನಿರ್ವಹಿಸಿದ್ದಾರೆ.
ಆದರೆ, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇಕಡವಾರು ಮತದಾನ ಕಮ್ಮಿ. ಇದನ್ನ ಗಮನಿಸಿದ ನಟ ಹಾಗೂ ರಾಜಕಾರಣಿ ಜಗ್ಗೇಶ್ ಬೆಂಗಳೂರು ವಾಸಿಗಳ ಬದ್ಧತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ಬೆಂಗಳೂರು ವಾಸಿಗಳೇ... ಏನು ಬದ್ಧತೆ, ಏನು ಪ್ರೇಮ, ಏನು ಸ್ವಾಭಿಮಾನ, ಅಂತರರಾಷ್ಟ್ರೀಯ ಗುಣಮಟ್ಟ ಬೇಕು. ಟಿವಿ ಕಂಡರೆ ಸಾಕು ಏನು ವಾದ ಮಂಡನೆ. ಮೆಚ್ಚಬೇಕು ಬದ್ಧತೆ. ಹಳ್ಳಿಯಲ್ಲಿ ದುಡ್ಡಿಗೆ ವೋಟ್. ಸಿಟಿಯಲ್ಲಿ ಬೂತ್ ತಿರುಗಿ ನೋಡಲ್ಲ. ಹೀಗಾದರೆ ಬದಲಾವಣೆ ಹೇಗೆ.? ಯಾರಿಂದ ಬದಲಾವಣೆ.? ಯಾಕೆ ಬದಲಾವಣೆ.? ನಗು ಬರುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ ನಟ ಜಗ್ಗೇಶ್.
ಮತದಾನ ಮಾಡಿ ಉತ್ತಮ ಆಯ್ಕೆ ಮಾಡದೇ ಇದ್ದರೆ, ಬದಲಾವಣೆ ಹೇಗೆ ತಾನೆ ತರಲು ಸಾಧ್ಯ ಅಂತ ತಮ್ಮ ಟ್ವೀಟ್ ಮೂಲಕ ಬೆಂಗಳೂರಿಗರನ್ನ ಜಗ್ಗೇಶ್ ಪ್ರಶ್ನಿಸಿದ್ದಾರೆ.
ಮತದಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಬೆಂಗಳೂರು ನಗರದಲ್ಲಿಯೇ ಅತಿ ಕಡಿಮೆ ಮತದಾನ ಆಗಿರುವುದು ವಿಷಾದನೀಯ.
ಅಂದ್ಹಾಗೆ, ನಟ ಜಗ್ಗೇಶ್ ಯಶವಂತಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ವರ್ಷಗಳ ನಂತರ ಕಣಕ್ಕೆ ಇಳಿದಿರುವ ಜಗ್ಗೇಶ್ ಗೆಲುವಿನ ನಗೆ ಬೀರುತ್ತಾರಾ.? ಕಾದು ನೋಡಬೇಕು.


Click it and Unblock the Notifications











