ಕನ್ನಡ ನಿರ್ಮಾಪಕರು ಭಿಕ್ಷುಕರೇ.? ಚಿತ್ರರಂಗದ ದೌರ್ಭಾಗ್ಯದ ಬಗ್ಗೆ ಜಗ್ಗೇಶ್ ಆಕ್ರೋಶ.!
ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತೆ... ಎಷ್ಟೋ ಬಾರಿ ಕರ್ನಾಟಕದಲ್ಲಿ, ಕನ್ನಡ ಚಿತ್ರರಂಗದಲ್ಲಿ ಕನ್ನಡ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ. ಕನ್ನಡದ ಮಣ್ಣಿನ ಪ್ರತಿಭಾವಂತರಿಗೆ ಮಣೆ ಹಾಕದೆ, ಭಾಷೆ ಬಾರದ ಪರಭಾಷೆಯವರಿಗೆ ರತ್ನಗಂಬಳಿ ಹಾಸುವ ಪದ್ಧತಿ ಸ್ಯಾಂಡಲ್ ವುಡ್ ನಲ್ಲಿ ಬಹಳ ವರ್ಷಗಳಿಂದಲೂ ಇದೆ.
ಹಾಗಂತ, ಕನ್ನಡ ಚಿತ್ರರಂಗದಲ್ಲಿ ಇರುವ ಎಲ್ಲರೂ ಅದನ್ನೇ ಮಾಡ್ತಾರೆ ಅಂತಲ್ಲ. ತಮ್ಮ ಸಿನಿಮಾಗಳಿಗೆ ಹೆಚ್ಚಿನ ಮೈಲೇಜ್ ಸಿಗಬಹುದು ಎಂಬ ಕಾರಣಕ್ಕೆ ಕೆಲವರು ಪರಭಾಷೆಯ ಸ್ಟಾರ್ ಗಳನ್ನ ಕರೆದು ತರುತ್ತಾರೆ. ಕನ್ನಡ ನಿರ್ಮಾಪಕರ ಆಹ್ವಾನಕ್ಕೆ ಬೆಲೆ ಕೊಟ್ಟು ಅಲ್ಲಿನ ಸ್ಟಾರ್ ಗಳು ಇಲ್ಲಿಗೆ ಬಂದರೆ ಖುಷಿಯೇ. 'ಇಲ್ಲ' ಅಂದ್ರೆ..?
ಚಿತ್ರರಂಗದ ಈ ಪರಿಸ್ಥಿತಿ ಬಗ್ಗೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ''ಕನ್ನಡ ನಿರ್ಮಾಪಕರು ಭಿಕ್ಷುಕರೇ.? ನಮ್ಮವರಿಗೆ ಇನ್ನೂ ಬುದ್ಧಿ ಬಂದಿಲ್ಲ'' ಎಂದು ತಮ್ಮ ಬೇಸರವನ್ನ ಜಗ್ಗೇಶ್ ಹೊರಹಾಕಿದ್ದಾರೆ. ಮುಂದೆ ಓದಿರಿ....

ಶ್ರುತಿ ಹಾಸನ್ ವಿಚಾರದ ಬಗ್ಗೆ ಜಗ್ಗೇಶ್ ಮಾತು
ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ ಕಿಶೋರ್ ಕಾಂಬಿನೇಶನ್ ನಲ್ಲಿ ಮೂಡಿಬರುವ 'ಪೊಗರು' ಚಿತ್ರಕ್ಕೆ ನಟಿ ಶ್ರುತಿ ಹಾಸನ್ ನಾಯಕಿ ಆಗಲಿದ್ದಾರೆ ಎಂಬ ಮಾತುಗಳು ಕಳೆದ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಆದ್ರೆ, 'ಕನ್ನಡ ಸಿನಿಮಾದಲ್ಲಿ ನಟಿಸುವ ಯೋಚನೆ ಇಲ್ಲ' ಎಂದು ನಟಿ ಶ್ರುತಿ ಹಾಸನ್ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಆಕ್ರೋಶಗೊಂಡಿದ್ದಾರೆ.

ನಾಯಕಿಯರಿಗೆ ಕೊರತೆ ಇದ್ಯಾ.?
''ನಮ್ಮ ಕನ್ನಡದಲ್ಲಿ ನಾಯಕಿಯರಿಗೆ ಕೊರತೆಯೇ.? ಇಂಥ ಮಾತು ಕೇಳಿ ಇವರ ಮನೆ ಮುಂದೆ ನಿಲ್ಲಲು ಕನ್ನಡ ನಿರ್ಮಾಪಕರು ಭಿಕ್ಷುಕರೇ.? ನಮ್ಮವರಿಗೆ ಇನ್ನೂ ಬುದ್ಧಿ ಬಂದಿಲ್ಲ. ದೌರ್ಭಾಗ್ಯ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಮೇಕಪ್ ತೆಗೆದರೆ ಯುವಕರು ಮೈಲಿ ದೂರ ಓಡುತ್ತಾರೆ
''ಕರ್ನಾಟಕದ ಕಾಲೇಜು ಹೆಣ್ಣುಮಕ್ಕಳ ರೂಪದ ಮುಂದೆ ಇವರೆಲ್ಲ ಕಾಲುಧೂಳು.! ಬಣ್ಣ ತೆಗೆದು ಬಂದರೆ ನಮ್ಮ ಯುವಕರು ಮೈಲಿ ದೂರ ಓಡುತ್ತಾರೆ. ಕನ್ನಡಿಗರ ದುಡ್ಡುಬೇಕು, ಕನ್ನಡ ಚಿತ್ರ ಬೇಡ್ವಂತೆ.!'' ಅಂತ ಸಿಡಿಮಿಡಿಗೊಂಡು ಜಗ್ಗೇಶ್ ಟ್ವೀಟಿಸಿದ್ದಾರೆ.

ಜಗ್ಗೇಶ್ ಮಾತುಗಳಿಗೆ ಜೈಕಾರ
ಜಗ್ಗೇಶ್ ರವರ ಈ ಮಾತುಗಳಿಗೆ ಕನ್ನಡಿಗರು, ಕನ್ನಡಾಭಿಮಾನಿಗಳು ಜೈಕಾರ ಹಾಕಿದ್ದಾರೆ. ಜೊತೆಗೆ ನಟಿ ಶ್ರುತಿ ಹಾಸನ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.


Click it and Unblock the Notifications











