ಪ್ರಧಾನಿ ಮೋದಿ ಅವರಿಗೆ 'ಮಹಾಮರಣ' ತೋರಿಸುತ್ತಾರಂತೆ ಪೂಜಾ ಗಾಂಧಿ
ಉತ್ತರ ಕರ್ನಾಟಕದ ರೈತರ ಮಹತ್ವಾಕಾಂಕ್ಷೆಯ ಕಳಾಸಾ-ಬಂಡೂರಿ ಯೋಜನೆ ಕುರಿತಾಗಿ 'ದಂಡುಪಾಳ್ಯ' ನಟಿ ಪೂಜಾ ಗಾಂಧಿ ಅವರು ಮಾಡುತ್ತಿರುವ 'ಮಹಾಮರಣ' ಎಂಬ ಸಾಕ್ಷ್ಯಚಿತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತೋರಿಸಲು ಅತೀ ಶೀಘ್ರದಲ್ಲೇ ಅವರನ್ನು ಭೇಟಿ ಮಾಡಲು ನಟಿ ಪೂಜಾ ಗಾಂಧಿ ತಯಾರಿ ನಡೆಸುತ್ತಿದ್ದಾರೆ.
ಉತ್ತರ ಕರ್ನಾಟಕದ ಜನರು ನೀರಿಗಾಗಿ ನಡೆಸುತ್ತಿರುವ ಹೋರಾಟ, ಅವರು ಅನುಭವಿಸುತ್ತಿರುವ ನೋವು, ಎದುರಿಸುತ್ತಿರುವ ಸಮಸ್ಯೆಯನ್ನು ಈ 'ಮಹಾಮರಣ' ಎಂಬ ಸಾಕ್ಷ್ಯಚಿತ್ರದಲ್ಲಿ ಸೆರೆ ಹಿಡಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಡುವ ಪ್ರಯತ್ನ ಮಾಡುವುದಾಗಿ ಪೂಜಾ ಗಾಂಧಿ ಹೇಳಿದ್ದಾರೆ.[ಕಳಸಾ-ಬಂಡೂರಿ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿದ್ದಾರೆ ಪೂಜಾಗಾಂಧಿ]

ತುಂಬಾ ದಿನಗಳ ಹಿಂದೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಸಂಚರಿಸಿ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಹಲವಾರು ದಶಕಗಳಿಂದ ಕಳಸಾ ಬಂಡೂರಿ ಯೋಜನೆಗಾಗಿ ಆ ಭಾಗದ ಜನರು ಹೋರಾಟ ನಡೆಸುತ್ತಾ ಬಂದ ಹಾದಿ ಹೇಗಿತ್ತು? ಅವರು ಅನುಭವಿಸಿದ ನೋವು? ನೀರಿನ ಹೋರಾಟಕ್ಕಾಗಿ ಪ್ರಾಣತ್ಯಾಗ ಮಾಡಿದ ರೈತರೆಷ್ಟು? ಅವರ ಕುಟುಂಬ ಈಗ ಯಾವ ಸ್ಥಿತಿಯಲ್ಲಿದೆ, ಮುಂತಾದ ಗಂಭೀರ ವಿಚಾರಗಳನ್ನು ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗಿದೆ.[ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

ಕಳಸಾ ಬಂಡೂರಿ ಯೋಜನೆ ಬಗ್ಗೆ ರಾಜಕಾರಣಿಗಳಿಗೆ ಮನದಟ್ಟು ಮಾಡಿ, ಸಮಸ್ಯೆ ನಿವಾರಿಸುವಂತೆ ಮನವಿ ಮಾಡುವ ಯೋಚನೆ ಮಾಡಿರುವ ನಟಿ ಪೂಜಾ ಗಾಂಧಿ ಅವರು 'ಮಹಾಮರಣ' ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ.[ನರೇಂದ್ರ ಮೋದಿಗೆ ಕರ್ನಾಟಕದ ಕೂಗು ಕೇಳಿಸಲಿ: ಚಿತ್ರರಂಗ]
ಈ ಸಾಕ್ಷ್ಯಚಿತ್ರ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಿದ್ದು, ಮೊದಲು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೋರಿಸಿದ ನಂತರ ನಮ್ಮ ರಾಜ್ಯದ ಸಂಸದರಿಗೂ ತೋರಿಸುವ ಯೋಜನೆಯನ್ನು ಮಳೆ ಹುಡುಗಿ ಪೂಜಾ ಗಾಂಧಿ ಹಾಕಿಕೊಂಡಿದ್ದಾರೆ.


Click it and Unblock the Notifications











