ಕನ್ನಡ ಚಿತ್ರಗಳ ಸಹ ನಿರ್ಮಾಪಕ ಶ್ರೀನಿವಾಸ್ ಆತ್ಮಹತ್ಯೆ

ಮೈಸೂರಿಗೆ ಹೋಗುತ್ತೇನೆ ಎಂದು ಹೇಳಿ ರಿವಾಲ್ವರ್ ತೆಗೆದುಕೊಂಡು ಹೋಗಿದ್ದರು ಶ್ರೀನಿವಾಸ್. ಅವರ ಬಳಿ ಪರವಾನಗಿ ಪಡೆದ ರಿವಾಲ್ವರ್ ಇತ್ತು. ಅವರು ಹೊರಗೆ ಹೋದಾಗಲೆಲ್ಲಾ ರಿವಾಲ್ವರ್ ತೆಗೆದುಕೊಂಡೇ ಹೋಗುತ್ತಿದ್ದರು ಎಂದು ಅವರ ಪತ್ನಿ ರೇಖಾ ಪೊಲೀಸರಿಗೆ ತಿಳಿಸಿದ್ದಾರೆ.
ಮೈಸೂರಿಗೆ ಹೋಗುತ್ತೇನೆ ಎಂದು ಪತ್ನಿಗೆ ಹೇಳಿ ನಾಗರಬಾವಿಯಲ್ಲಿರುವ ತಮ್ಮ ತಂಗಿ ಮನೆಗೆ ಹೋಗಿದ್ದರು. ಬಳಿಕ ಅವರು ಸ್ನೇಹಿತರಾದ ಜಗದೀಶ್ ಮತ್ತು ಬಾಬುಗೆ ಕರೆ ಮಾಡಿ ರಾಮನಗರದ ಲಕ್ಷ್ಮಿಪುರದಲ್ಲಿರುವ ತಮ್ಮ ತೋಟಕ್ಕೆ ಬರಲು ಹೇಳಿದ್ದಾರೆ.
ಸ್ಥಳಕ್ಕೆ ಹೋಗಿ ಶ್ರೀನಿವಾಸ್ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅವರ ಕಾರು ಕೂಡ ರಸ್ತೆ ಬದಿಯಲ್ಲೇ ಇತ್ತು. ಬಳಿಕ ಅವರಿಗಾಗಿ ಹುಡುಕಾಟ ನಡೆಸಿದಾಗ ತೋಟದಲ್ಲಿ ಅವರ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಪಕ್ಕದಲ್ಲೇ ರಿಲಾವ್ವರ್ ಕೂಡ ಇತ್ತು ಎಂದು ಜಗದೀಶ್ ಪೊಲೀಸರಿಗೆ ವಿವರ ನೀಡಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರೀಶೀಲನೆ ನಡೆಸಿ ಇದು ಆತ್ಮಹತ್ಯೆ ಎಂದು ಸ್ಪಷ್ಟಪಡಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸ್ ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಾಗಿದೆ.
ಕಳೆದೆರಡು ವರ್ಷಗಳಿಂದ ಅವರು ಖಿನ್ನಮನಸ್ಕರಾಗಿದ್ದು ಮನೆಯವರೊಂದಿಗೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಶ್ರೀನಿವಾಸ್ ಅವರಿಗೆ ಸಂಜನಾ (9) ಹಾಗೂ ಶಾಲಿನಿ (5) ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ದೂರು ದಾಖಲಿಸಿಕೊಂಡಿರುವ ತಾವರೆಕೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











