ಉಮೇಶ್ 'ರೆಡ್ಡಿ' ಟೈಟಲ್ ವಿವಾದ ಸುಖಾಂತ್ಯ
ಒಂದು ಕಡೆ ಸೈಕೋ ಜೈ ಶಂಕರ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡು ಮತ್ತೆ ಸಿಕ್ಕಿಬಿದ್ದಿದ್ದಾನೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸೈಕೋ ಕುರಿತ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಕ್ಕೆ ಆರಂಭದಿಂದಲೂ ಸಾಕಷ್ಟು ಎಡರುತೊಡರುಗಳು ಬರುತ್ತಲೇ ಇವೆ.
ಈ ಹಿಂದೆ ಚಿತ್ರಕ್ಕೆ 'ಉಮೇಶ್ ರೆಡ್ಡಿ' ಎಂಬ ಹೆಸರಿನಲ್ಲೇ ಚಿತ್ರವನ್ನು ತರಲು ಯೋಜಿಸಲಾಗಿತ್ತು. ಆದರೆ ಆ ಟೈಟಲ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ನೀಡದ ಕಾರಣ 'ಉಮೇಶ್' ಎಂಬ ಶೀರ್ಷಿಕೆಯಲ್ಲಿ ಚಿತ್ರ ಸಿದ್ಧವಾಯಿತು.
ಈ ಮಧ್ಯೆ ಪೋಸ್ಟರ್ ಗಳಲ್ಲಿ 'ಉಮೇಶ್' ಎಂದು ಅಚ್ಚುಕಟ್ಟಾಗಿ ಅಚ್ಚುಹಾಕಿ ಕೆಳಗೆ 'ರೆಡ್ಡಿ' ಎಂಬುದನ್ನು ಕ್ರಾಸ್ ಮಾಡಲಾಗಿತ್ತು. ಈ ಬಗ್ಗೆ ಸ್ವತಃ ಸರಣಿ ಹಂತಕ ಉಮೇಶ್ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಬಾರದು. ಹಾಗೆಯೇ ತಮ್ಮ ಹೆಸರಿನ ಶೀರ್ಷಿಕೆಯನ್ನೂ ಬಳಸ ಬಾರದು ಎಂದು ವಿನಂತಿಸಿಕೊಂಡಿದ್ದ.ಈಗ ನ್ಯಾಯಾಲಯ ಕ್ರಾಸ್ ಮಾಡಿರುವ 'ರೆಡ್ಡಿ' ಎಂಬ ಪದ ಬಳಕೆಯನ್ನು ಕೈಬಿಡುವಂತೆ ಆದೇಶಿಸಿದೆ. ಈಗ ಚಿತ್ರದ ವಿವಾದ ಸುಖಾಂತ್ಯವಾಗಿದ್ದು ಶೀಘ್ರದಲ್ಲೇ ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿರುವವರು ಅಶೋಕ್. ಜೋಯ್ ಸಿಮನ್ ಅವರ ಪುತ್ರ ಜಿತೇಂದ್ರ ಮುಖ್ಯ ಪಾತ್ರವನ್ನು ಪೋಷಿಸಿದ್ದಾರೆ.
ಇಷ್ಟಕ್ಕೂ ಚಿತ್ರದ ಕತೆ ಏನೆಂದರೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಬಿಹೇವಿಯರಲ್ ಸೈನ್ಸ್ ಓದುತ್ತಿರುವ ವಿದ್ಯಾರ್ಥಿನಿಯರು ಭಾರತಕ್ಕೆ ಬರುತ್ತಾರೆ.
ಅರೆಸ್ಟ್ ಆಗಿರುವ ಸೈಕೋಪಾತ್ 'ಉಮೇಶ್'ನನ್ನು ಸಂದರ್ಶನ ಮಾಡಲು ಹೋಗುತ್ತಾರೆ. ಉಮೇಶ್ಗೆ ಅವರಿಬ್ಬರ ಮೇಲೆ ಕಣ್ಣುಬೀಳುತ್ತದೆ. ಜೈಲಿನಿಂದ ಎಸ್ಕೇಪ್ ಆಗುವ ಆತ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸುತ್ತಾನೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕತೆ.
ಉಮೇಶ್ ರೆಡ್ಡಿ ಕತೆಯನ್ನು ಯಥಾವತ್ತಾಗಿ ತರದೆ ಅಲ್ಲಲ್ಲಿ ಸಿನಿಮೀಯ ಬದಲಾವಣೆಗಳು ಇರುತ್ತವೆ. ನೈಜವಾಗಿ ಉಮೇಶ್ ರೆಡ್ಡಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಇಲ್ಲಿನ 'ಉಮೇಶ್'ನನ್ನು ಒಬ್ಬ ಚಲನಚಿತ್ರ ನಿರ್ದೇಶಕನಾಗಿ ತೋರಿಸಲಾಗಿದೆಯಂತೆ. ಚಿತ್ರದಲ್ಲಿ ಬಹುತೇಕ ಹೊಸಬರೇ ಇದ್ದಾರೆ.
ಚಿತ್ರದ ಪಾತ್ರವರ್ಗದಲ್ಲಿ ರವಿಕಾಳೆ, ರೂಪಿಕಾ, ಶರತ್ ಲೋಹಿತಾಶ್ವ, ಶೋಭಾ ರಾಘವೇಂದ್ರ ಮುಂತಾದರಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲ ಸಂಗೀತ, ಎಂಆರ್ ಸೀನು ಅವರ ಛಾಯಾಗ್ರಹಣ ಇದೆ. (ಏಜೆನ್ಸೀಸ್)


Click it and Unblock the Notifications












