ಹೇಮಶ್ರೀಯನ್ನು ಸುರೇಂದ್ರನೇ ಕೊಂದಿರಬಹುದು: ಮಿರ್ಜಿ

ಈ ಮಧ್ಯೆ ಹೆಬ್ಬಾಳ ಪೊಲೀಸರು ಹೇಮಶ್ರೀ ಸಾವಿನ ಬಗ್ಗೆ ಕುತೂಹಲಕರ ವಿಷಯಗಳನ್ನು ಬಿಚ್ಚಿಟ್ಟಿಡುತ್ತಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ ಮಿರ್ಜಿ ಸಹ ಹೇಮಶ್ರೀಯನ್ನು ಕೊಂದಿರುವುದು ಆಕೆಯ ಪತಿ ಸುರೆಂದ್ರನೇ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.
ಹೇಮಶ್ರೀ ಪ್ರಕರಣದಲ್ಲಿ ಆಕೆಯ ಪತಿ, ಜೆಡಿಎಸ್ ಮುಖಂಡ ಸುರೇಂದ್ರಬಾಬುನನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಹೆಬ್ಬಾಳ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ವರದಿಗಳ ಪ್ರಕಾರ ಹೇಮಶ್ರೀ ಸಾವು/ಹತ್ಯೆ ವಿವರ ಹೀಗಿದೆ:
ಹೇಮಶ್ರೀ ತಾಯಿ ಲೀಲಾವತಿಯ ನೆರವಿನೊಂದಿಗೆ ಅಳೀಮಯ್ಯ ಸುರೇಂದ್ರಬಾಬು ಹೇಮಶ್ರೀಯನ್ನು ಅಪಹರಿಸಿ, ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಅಸಲಿಗೆ ಸುರೆಂದ್ರಬಾಬು ತನ್ನ ಪತ್ನಿ ಹೇಮಶ್ರೀಯನ್ನು ಅನಂತಪುರಕ್ಕೆ ಕರೆದುಕೊಂಡೇ ಹೋಗಿಲ್ಲ.
ಹೇಮಶ್ರೀ ಹತ್ಯೆಯ ಉದ್ದೇಶ ಇನ್ನೂ ತಿಳಿದಿಲ್ಲವಾದರೂ ಸುರೇಂದ್ರಬಾಬು ಆಕೆಯ ಶವವೊಂದಿಗೆ ಸುಮಾರು ಆರೇಳು ಗಂಟೆಗಳ ಕಾಲ ಇಡೀ ಬೆಂಗಳೂರನ್ನು ಸುತ್ತಾಡಿದ್ದಾನೆಯೇ ಹೊರತು ಅನಂತಪುರಕ್ಕೆ ಹೋಗಿಲ್ಲ.
ಈ ಮಧ್ಯೆ ಹೇಮಶ್ರೀ ಶವವನ್ನು ನಗರದಲ್ಲಿ ಬಿಸಾಡಲು ಯತ್ನಿಸಿ, ಸಾಧ್ಯವಾಗದೇ ಹೋದಾಗ ಅನಾರೋಗ್ಯದ ನಾಟಕವಾಡಿ, ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಹೇಮಶ್ರೀಯನ್ನು ಕರೆದೊಯ್ದ ಸಂದರ್ಭದಲ್ಲಿ ಸುರೇಂದ್ರಬಾಬು ಯಾರೊಂದಿಗೆಲ್ಲ ಮಾತುಕತೆ ನಡೆಸಿದ್ದಾನೆ ಎಂಬುದರ ಬಗ್ಗೆ ಪೊಲೀಸರು ಆತನ ಮೊಬೈಲ್ ಕಾಲ್ ಡೀಟೀಲ್ಸ್ ತೆಗೆದು ನೋಡಿದ್ದಾರೆ. ಅದರ ಪ್ರಕಾರ ಸುರೇಂದ್ರಬಾಬು ಕೊನೆಯ ಬಾರಿಗೆ ಮಾತನಾಡಿರುವುದು ಹೇಮಶ್ರೀಯ ತಾಯಿ ಲೀಲಾವತಿ ಜತೆ. ಹಾಗಾಗಿ ಪೊಲೀಸರು ಹೇಮಶ್ರೀ ತಾಯಿಯ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ.
2011ರ ಜೂನ್ 11 ರಂದು ಸುರೇಂದ್ರಬಾಬು ಮತ್ತು ಹೇಮಶ್ರೀ ಮದುವೆ ತಿರುಪತಿಯಲ್ಲಿ ನಡೆದಿತ್ತು. ಆದರೆ ಈ ಮದುವೆಗೆ ಸುತರಾಂ ಒಪ್ಪಿಗೆ ಸೂಚಿಸಿರಲಿಲ್ಲ. ಸುರೇಂದ್ರನೊಂದಿಗೆ ಮದ್ವೆ ಬೇಡವೇ ಬೇಡ ಎಂಬುದು ಹೇಮಶ್ರೀ ತೆಗೆದುಕೊಂಡಿದ್ದ ನಿಲುವಾಗಿತ್ತು. ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಬಂದ ಹೇಮಶ್ರೀ, ಅದೇ ವಾಹನದಲ್ಲೇ ಕುಳಿತು 'ಜನಶ್ರೀ ನ್ಯೂಸ್ ಚಾನೆಲ್' ಜತೆ ಸಾದ್ಯಂತವಾಗಿ ಹೇಮಶ್ರೀ ತಮ್ಮ ಗೋಳಿನ ಕಥೆಯನ್ನು ತೋಡಿಕೊಂಡಿದ್ದರು.
ಸುರೇಂದ್ರಬಾಬು ಕಡೆಯಿಂದ ಜೀವ ಭಯದಿಂದ ಕಂಗೆಟ್ಟಿದ್ದ ಹೇಮಶ್ರೀ, ಈಗ್ಗೆ ಕೆಲವೇ ದಿನಗಳ ಹಿಂದೆ ಡಿಸಿಪಿ ರವೀಕಾಂತೇ ಗೌಡರನ್ನು ಭೇಟಿ ಮಾಡಿ ನನ್ನನ್ನು ಉಳಿಸಿಕೊಳ್ಳಿ ಎಂದು ಅಲವತ್ತುಕೊಂಡಿದ್ದರು. ವಿವಾಹ ವಿಚ್ಛೇದನಕ್ಕೆ ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ ಸುರೇಂದ್ರ ವಿಚ್ಛೇದನಕ್ಕೆ ನಿರಾಕರಿಸಿದ್ದ. ಅದೇ ವಿಷಯವಾಗಿ ಮಾತನಾಡಿ, ಒಪ್ಪಿಸಲು ಹೇಮಶ್ರೀಯನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದ ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಲ್ಲಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸುರೇಂದ್ರ ಇತ್ತೀಚೆಗೆ ಹೇಮಶ್ರೀಗಾಗಿ 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಕೊಟ್ಟಿದ್ದ. ಆದರೆ ಹೇಮಶ್ರೀ ತಾಯಿ ಲೀಲಾವತಿ ಅದನ್ನು ತಮ್ಮ ಸೇಫ್ ಲಾಕರುಗಳಲ್ಲಿ ಭದ್ರವಾಗಿರಿಸಿದ್ದರು ಎನ್ನಲಾಗಿದೆ. ಜತೆಗೆ, ಚೆನ್ನಮ್ಮನ ಅಚ್ಚುಕಟ್ಟೆ ಪ್ರದೇಶದಲ್ಲಿರುವ ಲೀಲಾವತಿಯ ಮನೆಯನ್ನು ಇತ್ತೀಚೆಗೆ 30 ಲಕ್ಷ ರೂ. ಖರ್ಚು ಮಾಡಿ, ನವೀಕರಿಸಿದ್ದರು ಎಂದು ತಿಳಿದುಬಂದಿದೆ.


Click it and Unblock the Notifications











