ಬದುಕಿನ ಹೊಸ ಅಧ್ಯಾಯ ಆರಂಭಿಸಿದ ಕವಿರಾಜ್
ಕನ್ನಡ ಚಿತ್ರರಂಗದ ಜನಪ್ರಿಯ ಗೀತಸಾಹಿನಿ ಕವಿರಾಜ್ ಅವರ ಮದುವೆ ಮೇ.11ರಂದು ಕುಪ್ಪಳಿಯಲ್ಲಿ ಸರಳ, ಸುಂದರವಾಗಿ ನೆರವೇರಿದ್ದು ಗೊತ್ತೇ ಇದೆ. ಕನ್ನಡ ಚಿತ್ರರಂಗದ ಹಲವು ತಾರೆಗಳು ಮದುವೆ ಸಮಾರಂಭಕ್ಕೆ ಆಗಮಿಸಿ ನೂತನ ದಂಪತಿಗಳನ್ನು ಹರಸಿದರು.
ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿರುವ ರಾಜೇಶ್ವರಿ ಅವರನ್ನು ಕವಿರಾಜ್ ವರಿಸಿದ್ದಾರೆ. ಇದು ಲವ್ ಮ್ಯಾರೇಜಾ ಎಂದು ಕವಿರಾಜ್ ಅವರನ್ನು ಕೇಳಿದ್ದಕ್ಕೆ ಅವರು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದಿದ್ದರು. ತಮ್ಮ ಮದುವೆ ಬಳಿಕ ಪ್ರತಿಕ್ರಿಯಿಸಿರುವ ಕವಿರಾಜ್ ಅವರು ಒಂದು ಸಣ್ಣ ಸಂದೇಶ ರವಾನಿಸಿದ್ದಾರೆ. [ಚಿತ್ರಗೀತೆಗಳ ಮಹಾರಾಜ ಕವಿರಾಜ್ ಸಂದರ್ಶನ]

"ಬದುಕಿನ ಹೊಸ ಅಧ್ಯಾಯದ ಆರಂಭ. ಮೇ 11 ರಂದು ರಾಷ್ಟ್ರಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ವಿಧಾನದಲ್ಲಿ ಅವರ ಜನ್ಮಸ್ಥಳ ಕುಪ್ಪಳ್ಳಿಯಲ್ಲಿ ಗೆಳತಿ ರಾಜೇಶ್ವರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇನೆ. ಶುಭ ಹಾರೈಸಿದ ಹಿತೈಷಿಗಳಿಗೆಲ್ಲ ಹೃತ್ಪೂರ್ವಕ ಧನ್ಯವಾದ."
ಪ್ರೇಮ್ ನಿರ್ದೇಶನದ 'ಕರಿಯ' (2003) ಚಿತ್ರದ "ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ.." ಎಂಬ ಗೀತೆಯ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಕವಿರಾಜ್ ಅನತಿಕಾಲದಲ್ಲೇ ಖ್ಯಾತಿಯ ಉತ್ತುಂಗಕ್ಕೆ ತಲುಪಿದರು. ಅವರ ಲೇಖನಿಯಿಂದ ಪದೇಪದೇ ಗುನುಗುವಂತಹ ಹಲವಾರು ಗೀತೆಗಳು ಹೊರಹೊಮ್ಮಿವೆ.
ಕಣಕಣದೇ ಶಾರದೆ (ಆಪ್ತಮಿತ್ರ), ಜಿನುಜಿನುಗೋ ಜೇನಾ ಹನಿ (ಕಂಠಿ), ಸೂರ್ಯ ತಂಪು ಸೂಸು, ಗಾಳಿ ಮೆಲ್ಲ ಬೀಸು (ಸಿದ್ದು), ಗಗನವೆ ಬಾಗಿ (ಸಂಜು ವೆಡ್ಸ್ ಗೀತ), ನೀ ಓಡಿ ಬಂದಾಗ (ಶಿವ), ಪತ್ರ ಬರೆಯಲಾ ಚಿತ್ರ ಬಿಡಿಸಲಾ...(ಅರಮನೆ), ಮೊದಮೊದಲು ಭುವಿಗಿಳಿದಾ ಮಳೆ ಹನಿಯು...(ಯಶವಂತ್) ಮುಂತಾದವು. (ಒನ್ಇಂಡಿಯಾ ಕನ್ನಡ)


Click it and Unblock the Notifications











