ಆಗಸ್ಟ್ 14 ರಿಂದ ಎಲ್ಲರ ಬಾಯಲ್ಲೂ 'ದೊಡ್ಮನೆ ಹುಡುಗ'ನ ಗುಣಗಾನ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ದೊಡ್ಮನೆ ಹುಡುಗ' ಚಿತ್ರ ಬಿಡುಗಡೆಗೆ ತಯಾರಾಗಿದೆ. ಇದೀಗ ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಆಗಸ್ಟ್ 14 ರಂದು ಹಾಡುಗಳು ಬಿಡುಗಡೆ ಆಗಲಿವೆ.
ಅಂದಹಾಗೆ ಈ ಬಾರಿ ವಿಶೇಷವಾಗಿ 'ದೊಡ್ಮನೆ ಹುಡುಗ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ವಾಮಿ ಅವರ ಅಮೃತ ಹಸ್ತದಲ್ಲಿ 'ದೊಡ್ಮನೆ ಹುಡುಗ'ನ ಹಾಡುಗಳು ಲೋಕಾರ್ಪಣೆಗೊಳ್ಳಲಿವೆ.[ಅಪ್ಪು-ದೀಪು: ಆಗಸ್ಟ್ ನಲ್ಲಿ ಬಾಕ್ಸಾಫೀಸ್ ಕದನ.?]

ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಅವರ ಕೈಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿಸಬೇಕೆಂದು ಚಿತ್ರತಂಡದವರು ಆಸೆ ಪಟ್ಟಿದ್ದರು. ಅದರಂತೆ ಇದೀಗ ಸಿದ್ದಗಂಗಾ ಮಠದಲ್ಲಿ ಆಡಿಯೋ ರಿಲೀಸ್ ಅಗಲಿದ್ದು, ಇಡೀ ಚಿತ್ರತಂಡದವರು ಪಾಲ್ಗೊಳ್ಳಲಿದ್ದಾರೆ.
ಈ ಮೊದಲು ಶ್ರೀಮುರಳಿ ಅವರ 'ರಥಾವರ' ಚಿತ್ರದ ಆಡಿಯೋ ಕೂಡ ಸಿದ್ದಗಂಗಾ ಮಠದಲ್ಲಿ ರಿಲೀಸ್ ಆಗಿತ್ತು. ಜೊತೆಗೆ ಆ ಸಿನಿಮಾ ಕೂಡ ಯಶಸ್ಸು ಗಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಬಾರಿ 'ದೊಡ್ಮನೆ ಹುಡುಗ'ನ ಸರದಿ.['ದೊಡ್ಮನೆ ಹುಡುಗ' ಚಿತ್ರದಲ್ಲಿ ಪುನೀತ್ ಜೊತೆ ಶಿವರಾಜ್ ಕುಮಾರ್.?]

'ಜಾಕಿ', 'ಅಣ್ಣಾಬಾಂಡ್' ಚಿತ್ರಗಳ ನಂತರ ಮತ್ತೆ ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಎಲ್ಲರಲ್ಲೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಲ್ಲದೇ 'ಅಭಿಮಾನಿಗಳೇ ನಮ್ಮನೇ ದೇವರು' ಹಾಡು ಕೂಡ ಫೇಮಸ್ ಆಗಿರೋದ್ರಿಂದ ಆಡಿಯೋ ರಿಲೀಸ್ ಗೆ ಅಭಿಮಾನಿಗಳು ಕಾದಿದ್ದಾರೆ.

ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿ 'ಹುಡುಗರು' ಚಿತ್ರದ ನಂತರ ಮತ್ತೆ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ.
ಇನ್ನುಳಿದಂತೆ ನಟ ರೆಬೆಲ್ ಸ್ಟಾರ್ ಅಂಬರೀಶ್, ನಟಿ ಸುಮಲತಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ರಂಗಾಯಣ ರಘು, ಕೃಷ್ಣ ಅಲಿಯಾಸ್ ಸುನೀಲ್ ನಾಗಪ್ಪ, ರವಿಶಂಕರ್, ಅವಿನಾಶ್ ಸೇರಿದಂತೆ ಹಲವು ಘಟಾನುಘಟಿಗಳು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.[ದೊಡ್ಮನೆ 'ಅಪ್ಪು'ವನ್ನು ಅಪ್ಪಿಕೊಂಡ ಅಭಿಮಾನಿ ದೇವರುಗಳು]

ಆಗಸ್ಟ್ 14 ರಂದು ಚಿತ್ರದ ಆಡಿಯೋ ರಿಲೀಸ್ ಮಾಡಿ, ಈ ತಿಂಗಳಾಂತ್ಯಕ್ಕೆ ಸಿನಿಮಾವನ್ನು ತೆರೆ ಮೇಲೆ ತರಲು ದುನಿಯಾ ಸೂರಿ ಅವರು ಯೋಜನೆ ಹಾಕಿಕೊಂಡಿದ್ದಾರೆ.


Click it and Unblock the Notifications











