'ಜಾಸ್ಮಿನ್-5' ಚಿತ್ರ ಕೇವಲ ವಯಸ್ಕರಿಗೆ ಮಾತ್ರ
ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕಥೆ ಇದು. ದೇಶದ ರಾಜಧಾನಿ ದೆಹಲಿಯಲ್ಲಿ ಡಿಸೆಂಬರ್ 16, 2012ರಂದು ವಿದ್ಯಾರ್ಥಿನಿಯೊಬ್ಬಳನ್ನು ಚಲಿಸುತ್ತಿದ್ದ ಬಸ್ಸಿನಲ್ಲಿ ಆರು ಮಂದಿ ದುಷ್ಕರ್ಮಿಗಳು ಕಬ್ಬಿಣದ ಸರಳಿನಿಂದ ಹೊಡೆದು, ಆ ಬಳಿಕ ಅತ್ಯಾಚಾರ ಮಾಡಿದ ಘಟನೆಯನ್ನು ಪ್ರಜ್ಞಾವಂತ ಸಮಾಜ ಇನ್ನೂ ಮರೆತಿಲ್ಲ.
ಹೆಚ್ಚುಕಡಿಮೆ ಇದೇ ಕಥೆಯನ್ನು ಆಧರಿಸಿ ತೆರೆಗೆ ಬರುತ್ತಿರುವ ಚಿತ್ರ 'ಜಾಸ್ಮಿನ್ 5'. ಕೇವಲ ರೋಚಕ ಘಟನೆಗಳನ್ನಷ್ಟೇ ಇಟ್ಟುಕೊಂಡು ಈ ಚಿತ್ರವನ್ನು ಮಾಡಿಲ್ಲ. ಈ ಚಿತ್ರ ಸಂದೇಶದ ಜೊತೆಗೆ ಅತ್ಯಾಚಾರಿಗಳಿಗೆ ಎಚ್ಚರಿಕೆಯನ್ನೂ ರವಾನಿಸಲಿದೆ ಎನ್ನುತ್ತದೆ ಚಿತ್ರತಂಡ. [ಇಲ್ಲೂ ಬಾಯ್ ಫ್ರೆಂಡ್ ಎದುರೇ ಗ್ಯಾಂಗ್ ರೇಪ್...!]
ಭವ್ಯಾಸ್ಮಿ ಮೂವೀ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ತಯಾರಾಗುತ್ತಿರುವ ದೆಹಲಿಯ ನಿರ್ಭಯ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಜಾಸ್ಮಿನ್-5 ಚಿತ್ರಕ್ಕೆ ಸೆನ್ಸಾರ್ ಮಂಡಳಿ ವೀಕ್ಷಿಸಿ 'ಎ' ಸರ್ಟಿಫಿಕೇಟ್ ನೀಡಿದೆ.ಜಾಸ್ಮಿನ್ 5 ಚಿತ್ರತಂಡ ಹೇಳುವಂತೆ "ನಮ್ಮ ಚಿತ್ರವನ್ನು ದೆಹಲಿಯ ಆ ದೇವತೆಗೆ ಅರ್ಪಿಸುತ್ತಿದ್ದೇವೆ". ದೆಹಲಿ ದೇವತೆಯ ದುರಂತ ಕಥೆ ಎಂಬುದು ಈ ಚಿತ್ರದ ಅಡಿಬರಹ. ಚಿತ್ರವು ಜುಲೈ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂಬ ಮಾತನ್ನು ನಂಬಿದವನು ನಾನು. ಪಾಪಕೃತ್ಯಗಳನ್ನು ಮಾಡಿದವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಬಾರದು. ಅಂಥವರಿಗೆ ಉಗ್ರ ಶಿಕ್ಷೆಯಾಗಬೇಕು ಎಂಬ ಉದ್ದೇಶವಿಟ್ಟುಕೊಂಡು ಈ ಚಿತ್ರದ ಸ್ಕ್ರಿಪ್ಟ್ ಮಾಡಿದ್ದೇನೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು.
ವಿ.ಕೃಷ್ಣ, ಕಥೆಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಪ್ರಸನ್ನಕುಮಾರ್ ಛಾಯಗ್ರಹಣ, ಎಂ.ಸಂಜೀವ್ ಮತ್ತು ಶ್ರೀ ಹರ್ಷ ಸಂಗೀತ, ಹರಿಕೃಷ್ಣ, ಮನು ನೃತ್ಯ ನಿರ್ದೇಶನ ಅಲ್ಟಿಮೆಟ್ ಶಿವು ಸಾಹಸ, ಶ್ರೀಕಾಂತ ಸಂಕಲನ, ಕೃಷ್ಣ ಸಾಹಿತ್ಯವಿದೆ. ಮೋಹನ್, ನವ್ಯ, ಸಂಗೀತ, ಭವ್ಯ, ಅವಿನಾಶ್, ಗಿರಿಜಾ ಲೋಕೇಶ್ ಪದ್ಮಜಾ ರಾವ್, ಹೊನ್ನವಳ್ಳಿ ಕೃಷ್ಣ, ಗೌತಮ್ ಹೇಮಂತ್, ಕಿಶೋರ್ ಶೆಟ್ಟಿ, ಲಕ್ಷ್ಮೀದೇವಮ್ಮ, ಮುರಳಿ, ಪ್ರಕಾಶ್ ಮುಂತಾದವರ ತಾರಾಗಣವಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












