ಲಾಕ್ಡೌನ್ ಆದ್ಮೇಲೆ ಮೊದಲ ಚಿತ್ರ: 'ಕಲಿವೀರ'ನಿಂದ ಗಾಂಧಿನಗರದಲ್ಲಿ ಕಲರವ
ಕಳೆದ ಏಪ್ರಿಲ್ ತಿಂಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಕೊರೊನಾ ವೈರಸ್ ಎರಡನೇ ಅಲೆಯನ್ನು ನಿಯಂತ್ರಿಸುವ ಕಾರಣಕ್ಕಾಗಿ ಲಾಕ್ಡೌನ್ ಜಾರಿ ಮಾಡಿದ್ದರು. ಏಪ್ರಿಲ್ನಿಂದ ರಾಜ್ಯದಲ್ಲಿ ಚಿತ್ರಮಂದಿರಗಳು ಸಂಪೂರ್ಣವಾಗಿ ಮುಚ್ಚಿದ್ದವು. ಸುಮಾರು ಮೂರು ತಿಂಗಳ ಬಳಿಕ ಮತ್ತೆ ಥಿಯೇಟರ್ಗಳು ಓಪನ್ ಮಾಡಲು ಸರ್ಕಾರ ಅನುಮತಿ ಕೊಟ್ಟಿತ್ತು.
Recommended Video
ಜುಲೈ 19 ರಿಂದ ಶೇಕಡಾ 50 ರಷ್ಟು ಪ್ರೇಕ್ಷಕರೊಂದಿಗೆ ಸಿನಿಮಾ ಹಾಲ್ಗಳು ಕಾರ್ಯಾರಂಭ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಎರಡು ವಾರ ಮುಗಿದರೂ ಯಾವುದೇ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿಲ್ಲ. ಸ್ಟಾರ್ ನಟರ ನಿರೀಕ್ಷೆಯ ಚಿತ್ರಗಳೆಲ್ಲವೂ ಆಗಸ್ಟ್ನಿಂದ ಪ್ರೇಕ್ಷಕರೆದುರು ಬರಲಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೊಡ್ಡ ಚಿತ್ರಗಳು ಎಂಟ್ರಿಯಾಗಲಿದೆ.
ಸ್ಟಾರ್ ನಟರ ಸಿನಿಮಾಗಳಿಗೂ ಮುಂಚೆ ಈಗ ಕಲಿವೀರನ ಪ್ರವೇಶವಾಗುತ್ತಿದೆ. ಹೌದು, ಎರಡನೇ ಲಾಕ್ಡೌನ್ ಆದ್ಮೇಲೆ ಮೊದಲ ಹೊಸ ಚಿತ್ರ ಥಿಯೇಟರ್ಗೆ ಬರ್ತಿದೆ. ಆಗಸ್ಟ್ 6ನೇ ತಾರೀಖು ಕಲಿವೀರ ಸಿನಿಮಾ ರಿಲೀಸ್ ಅಗುತ್ತಿದ್ದು, ಬಹಳ ತಿಂಗಳ ನಂತರ ಚಿತ್ರಮಂದಿರಕ್ಕೆ ಬರುತ್ತಿರುವ ಮೊದಲ ಸಿನಿಮಾ ಎನ್ನುವ ಕಾರಣಕ್ಕೆ ವಿಶೇಷವಾಗಿ ಗಮನ ಸೆಳೆಯುತ್ತಿದೆ.

'ಕನ್ನಡ ದೇಶದೋಳ್' ಚಿತ್ರ ನಿರ್ದೇಶಿಸಿದ್ದ ಅವಿ, ಈಗ ಕಲಿವೀರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉತ್ತರ ಕರ್ನಾಟಕ ಮೂಲದ ಏಕಲವ್ಯ ಈ ಚಿತ್ರದ ನಾಯಕ. ಕಲಿವೀರ ಔಟ್ ಅಂಡ್ ಔಟ್ ಆಕ್ಷನ್ ಮನರಂಜನಾ ಪ್ಯಾಕೇಜ್ ಆಗಿದ್ದು, ಈ ಪ್ರಾಜೆಕ್ಟ್ಗಾಗಿ ನಟ ಏಕಲವ್ಯ ಕಲರಿಯಪಟ್ಟು, ಯೋಗ, ಮಾರ್ಷಲ್ ಅರ್ಟ್ಸ್ ತರಬೇತಿ ಪಡೆದುಕೊಂಡಿದ್ದಾರೆ.
ಕಲಿವೀರ ಚಿತ್ರದ ಕಥಾಹಂದರ
ನಾಯಕ ಕಲಿ ಆದಿವಾಸಿ ಜನಾಂಗದವನು, ತನ್ನ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ಸಿಡಿದು ದ್ವೇಷ ತೀರಿಸಿಕೊಳ್ಳುವ ರೋಚಕ ಕಥಾ ಹಂದರ ಹೊಂದಿರುವ ಕಥೆ ಕಲಿವೀರ. ಭಾರತದ ಮೇಲೆ ಶತಮಾನಗಳ ಕಾಲ ನಿರಂತರವಾಗಿ ದೌರ್ಜನ್ಯ, ದಾಳಿ ಮಾಡಿದ ರಾಷ್ಟ್ರೀಯ, ಅಂತರರಾಷ್ಟ್ರೀಯ ಕುಖ್ಯಾತಿಯ ಈ ಸಮಾಜದ ದುಷ್ಪ ಶಕ್ತಿಗಳನ್ನು ಮೆಟ್ಟಿನಿಂತು ಆದಿವಾಸಿ ಕಲಿ ವೀರಾವೇಶದಿಂದ ಹೋರಾಡಿ ಅವರನ್ನು ಮಟ್ಟ ಹಾಕಿ ಹೇಗೆ ಕಲಿವೀರನಾಗುತ್ತಾನೆ. ಎಂಬುದು ಕಲಿವೀರ ಚಿತ್ರದಲ್ಲಿ ಕಾಣಬಹುದು. ಕಲಿಯುಗದ ವೀರನನ್ನು 'ತಂದಿರ' ಎಂದು ಬಿಂಬಿಸಲಾಗಿದೆ.
'ಕಲಿವೀರ' ಸಿನಿಮಾದಲ್ಲಿ ಪಾವನಗೌಡ, ಚಿರಶ್ರಿ ಅಂಚನ್ ನಾಯಕಿಯಾಗಿ ನಟಿಸಿದ್ದಾರೆ. ತಬಲ ನಾಣಿ, ಟಿಎಸ್ ನಾಗಾಭರಣ, ಡ್ಯಾನಿ ಕುಟ್ಟಪ್ಪ, ಅನಿತಾ ಭಟ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಜ್ಯೋತಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗಿದ್ದು, ವಿ ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಎರಡು ಚಿತ್ರಗಳು ರಿಲೀಸ್
ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ ತಿಂಗಳಲ್ಲಿ ಸಿನಿಮಾ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಸಲಗ' ಬಿಡುಗಡೆಯಾಗುತ್ತಿದೆ. ಡಾಲಿ ಧನಂಜಯ್, ಸಂಜನಾ ಆನಂದ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ.
ರಾಜ್ ಮೊಮ್ಮಗಳ ಚಿತ್ರ 'ನಿನ್ನ ಸನಿಹಕೆ'
ಡಾ ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಪ್ರಪ್ರಥಮ ಬಾರಿಗೆ ನಟಿಸಿರುವ 'ನಿನ್ನ ಸನಿಹಕೆ' ಚಿತ್ರವೂ ವರಮಹಾಲಕ್ಷ್ಮಿ ಹಬ್ಬದ ದಿನವೇ ರಿಲೀಸ್ ಆಗುತ್ತಿದೆ. ನಟ ಸೂರಜ್ ಗೌಡ ಈ ಚಿತ್ರ ನಿರ್ದೇಶಿಸಿ, ನಾಯಕನಾಗಿ ಅಭಿನಯಿಸಿದ್ದಾರೆ.

ಸೆಪ್ಟೆಂಬರ್ 10ಕ್ಕೆ ಭಜರಂಗಿ 2
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿರುವ ಭಜರಂಗಿ 2 ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರ್ತಿದೆ. ಹರ್ಷ ನಿರ್ದೇಶನದ ಈ ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಿಸಿದ್ದಾರೆ.
ಈ ಸಿನಿಮಾಗೂ ಮುಂಚೆ ಸುದೀಪ್ ನಟನೆಯ ಕೋಟಿಗೊಬ್ಬ 3 ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಇದುವರೆಗೂ ರಿಲೀಸ್ ಬಗ್ಗೆ ಅಧಿಕೃತವಾಗಿ ದಿನಾಂಕ ಪ್ರಕಟ ಮಾಡಿಲ್ಲ.


Click it and Unblock the Notifications











