ವಿಷ್ಣುವರ್ಧನ್ ರವರ 'ನಾಗರಹಾವು' ಚಿತ್ರಕ್ಕೆ ತಮಿಳುನಾಡಿನಲ್ಲಿ ಬ್ರೇಕ್
ಕಾವೇರಿ ನದಿ ನೀರು ವಿವಾದದ ಹಿನ್ನಲೆ, ಡಾ.ವಿಷ್ಣುವರ್ಧನ್ ಅವರ ನಾಗರಹಾವು 'ಚಿತ್ರಕ್ಕೆ' ತಮಿಳು ನಾಡಿನಲ್ಲಿ ಬ್ರೇಕ್ ಬಿದ್ದಿದೆ. ನಾಗರಹಾವಿನ ತಮಿಳು ಅವತರಣಿಕೆಯ 'ಶಿವನಾಗಂ' ಚಿತ್ರ ತಮಿಳುನಾಡಿನಲ್ಲಿ ರದ್ದಾಗಿದೆ.
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 201ನೇ ಚಿತ್ರ 'ನಾಗರಹಾವು' ರಾಜ್ಯಾದ್ಯಂತ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರಕಿದೆ. ಆದ್ರೆ, ತಮಿಳುನಾಡಿನಲ್ಲಿ ತೆರೆಕಾಣಬೇಕಿದ್ದ 'ಶಿವನಾಗಂ' ಚಿತ್ರದ ಪ್ರದರ್ಶನ ರದ್ದಾಗಿದೆ. ಕಾರಣ 'ಕಾವೇರಿ ವಿವಾದ'.!
'ನಾಗರಹಾವು' ಚಿತ್ರ ತಮಿಳಿನಲ್ಲಿ 'ಶಿವನಾಗಂ' ಹೆಸರಿನಲ್ಲಿ ಡಬ್ ಆಗಿದ್ದು, ಇಂದು ತಮಿಳುನಾಡಿನಾದ್ಯಂತ 180 ಟಾಕೀಸ್ ನಲ್ಲಿ ಚಿತ್ರ ಪ್ರದರ್ಶನವಾಗಬೇಕಿತ್ತು. ಆದ್ರೆ, ಉಭಯ ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯದ ಹಿನ್ನಲೆ, ಕೆಲವು ತಮಿಳು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ತಮಿಳುನಾಡಿನಲ್ಲಿ 'ಶಿವನಾಗಂ' ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲಾಗಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವಾರದಿಂದ ತಮಿಳುನಾಡಿನಲ್ಲಿ 'ನಾಗರಹಾವು' ಚಿತ್ರ ಪ್ರದರ್ಶನ ನಿಷೇಧಿಸಬೇಕೆಂದು ತಮಿಳು ಸಂಘಟನೆಗಳು ಒತ್ತಡ ಹೇರಿದ್ದವು. ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ರವರು ಅಲ್ಲಿನ ವಿತರಕರ ಜೊತೆ ಮಾತಾನಾಡಿದ್ದರು. ಪರಿಣಾಮ, ತಮಿಳುನಾಡಿನ ವಿತರಕರು ಸಿನಿಮಾವನ್ನ ರಿಲೀಸ್ ಮಾಡುವ ಭರವಸೆ ನೀಡಿದ್ದರು. ಆದರಂತೆ, ಇಂದು ಚೆನ್ನೈನ ಅಶೋಕ್ ನಗರದಲ್ಲಿರುವ ಉದಯ್ ಚಿತ್ರಮಂದಿರದಲ್ಲಿ 'ಶಿವನಾಗಂ' ಸಿನಿಮಾ ಪ್ರದರ್ಶನವಾಗ್ಬೇಕಿತ್ತು. ಇದನ್ನು ತಿಳಿದ ಕೂಡಲೆ ತಮಿಳು ಸಂಘಟನೆಗಳು ಚಿತ್ರಮಂದಿರ ಎದುರು ಧರಣಿ ನಡೆಸಿದವು. ಹೀಗಾಗಿ, 'ಶಿವನಾಗಂ' ಚಿತ್ರದ ಪ್ರದರ್ಶನಕ್ಕೆ ಸದ್ಯ ಚೆನ್ನೈ ನಗರದಲ್ಲಿ ಬ್ರೇಕ್ ಬಿದ್ದಿದೆ.['ನಾಗರಹಾವು' ರಿಲೀಸ್: ಅಭಿಮಾನಿಗಳಿಂದ ಭರ್ಜರಿ ಸ್ವಾಗತ ]
'ಶಿವನಾಗಂ' ಚಿತ್ರವನ್ನ ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಡಾ.ವಿಷ್ಣುವರ್ಧನ್, ರಮ್ಯಾ, ದರ್ಶನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಕನ್ನಡದಲ್ಲಿ 'ನಾಗರಹಾವು' ಆಗಿ ತೆರೆಕಂಡಿರುವ ಈ ಸಿನಿಮಾ ತೆಲುಗಿನಲ್ಲಿ 'ನಾಗಭರಣಂ' ಹಾಗೂ ತಮಿಳಿನಲ್ಲಿ 'ಶಿವನಾಗಂ' ಎಂಬ ಶೀರ್ಷಿಕೆ ಅಡಿ ರೆಡಿಯಾಗಿತ್ತು.


Click it and Unblock the Notifications











