ಇದೇ ಪ್ರಥಮ: ಡಾ ರಾಜ್ ಸಮಾಧಿಗೆ ಲಕ್ಷದೀಪೋತ್ಸವ
ಇದು ಅಭಿಮಾನಿ ದೇವರುಗಳ 'ಅಭಿಮಾನದ' ಪರಾಕಾಷ್ಠೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಕನ್ನಡ ಸೇನೆ ಹೊಸ ಕಾರ್ಯಕ್ರಮಕ್ಕೆ ನಾಂದಿ ಹಾಡಿದೆ.
ಕನ್ನಡ ಸೇನೆಯ ಕರ್ನಾಟಕ ರಾಜ್ಯ ಸಂಘಟನೆ ಬೆಂಗಳೂರು ನಂದಿನಿ ಬಡಾವಣೆಯಲ್ಲಿರುವ ರಾಜ್ ಶಕ್ತಿ ಕೇಂದ್ರದಲ್ಲಿ ಶುಕ್ರವಾರ (ಅ 31) ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಶುಕ್ರವಾರ ಸಂಜೆ ಆರು ಗಂಟೆಗೆ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ಅಣ್ಣಾವ್ರ ಸಮಾಧಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.(ರಾಜ್ ಸ್ಮಾರಕ ಲೋಕಾರ್ಪಣೆಗೆ ಬಿಗ್ ಬಿ, ರಜನಿ, ಚಿರು)
59ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಕನ್ನಡ ಜಾಗೃತಿ ಜ್ಯೋತಿಯ ಮೆರವಣಿಗೆಯನ್ನು ಸಾಲುಮರದ ತಿಮ್ಮಕ್ಕ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ.

ಕೂಡಲಸಂಗಮ ಪೀಠದ ಮೃತ್ಯುಂಜಯ ಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆಂದು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ ಆರ್ ಕುಮಾರ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮೇಯರ್ ಶಾಂತಕುಮಾರಿ, ಉಪಮೇಯರ್ ರಂಗಣ್ಣ, ಶಾಸಕ ಗೋಪಾಲಯ್ಯ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಗಣ್ಯರ ದಂಡೇ ಸೇರಲಿದೆ ಎಂದು ಕುಮಾರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಲಕ್ಷದೀಪೋತ್ಸವದ ಬಗ್ಗೆ : ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಮಾಡದಿದ್ದರೆ ಒಂದು ವರ್ಷದಲ್ಲಿ ಮಾಡಿದ ಪೂಜೆಯು ನಿರರ್ಥಕವೆಂದೂ, ದೀಪಾರಾಧನೆ ಮಾಡಿದರೆ ಸರ್ವಾಭೀಷ್ಟ ಸಿದ್ಧಿಯಾಗುವುದೆಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಹಾಗಾಗಿ, ಸರ್ವ ದೇವಾಲಯಗಳಲ್ಲಿ ಲಕ್ಷದೀಪೋತ್ಸವವು ಪ್ರಸಿದ್ಧವಾಗಿ ನಡೆದುಕೊಂಡು ಬರುತ್ತಿದೆ.
ಇನ್ನೊಂದೆಡೆ, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಎಲ್ಲರನ್ನು ಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಸಂಕೇತವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಶತಮಾನಗಳಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದೂ ಹೇಳಲಾಗಿದೆ.
ಕಾರ್ತಿಕ ಮಾಸ ಶುಕ್ಲ ಪಕ್ಷದ ದ್ವಾದಶಿ (ಉತ್ಥಾನ ದ್ವಾದಶಿ) ದಿನದಂದು ಉಡುಪಿಯಲ್ಲಿ ಲಕ್ಷದೀಪೋತ್ಸವ ಮೊದಲು ಆರಂಭವಾಗುತ್ತದೆ. ನಂತರ ನಾಡಿನ ಇತರ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ.


Click it and Unblock the Notifications











