ಸಮಾಜ ಹಾಗೂ ಸಾಮಾಜಿಕ ಜಾಲತಾಣದಲ್ಲಿ 'ಕ್ರಾಂತಿ' ಸೃಷ್ಟಿಸಿದ 'ಪಬ್ಲಿಕ್ ಟಾಯ್ಲೆಟ್'
ಟಿಕ್ಟಾಕ್, ಫೇಸ್ಬುಕ್, ಲೈಕ್, ಕಾಮೆಂಟ್ ಎಂಬ ಈ ಸೋಶಿಯಲ್ ಮೀಡಿಯಾ ಕಾಲದಲ್ಲಿ ಯಾವುದೇ ವಿಡಿಯೋ, ಫೋಟೋ ಸಿಕ್ಕರೂ ಕ್ಷಣಮಾತ್ರಕ್ಕೆ ವೈರಲ್ ಆಗಿಬಿಡುತ್ತೆ. ಕನಿಷ್ಠ ಅದು ತಪ್ಪಾ ಅಥವಾ ಸರಿನಾ ಎಂಬ ಆಲೋಚನೆ ಸಹ ಇರಲ್ಲ. ಆ ಕ್ಷಣಕ್ಕೆ ಅದು ಖುಷಿ ಎನಿಸಿದರೂ ಅದರ ಪರಿಣಾಮ ದೊಡ್ಡದು ಎಂಬ ಮುಂದಾಲೋಚನೆ ಇರಲ್ಲ.
ಇಂತಹ ನೈಜ ಘಟನೆಯೊಂದನ್ನು ಆಧರಿಸಿ ತಯಾರಿಸಿರುವ 'ಪಬ್ಲಿಕ್ ಟಾಯ್ಲೆಟ್' ಎಂಬ ಕಿರುಚಿತ್ರ ಈಗ ಸಮಾಜದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿ ಸೃಷ್ಟಿಸಿದೆ. ಈ ಕಿರುಚಿತ್ರ ನೋಡಿ ತಮ್ಮನ್ನ ತಾವೇ ಪ್ರಶ್ನಿಸಿಕೊಳ್ಳುತ್ತಿರುವ ಘಟನೆಗಳು ಸಾಕ್ಷಿಯಾಗಿವೆ. ಮತ್ತೊಮ್ಮೆ ಇಂತಹ ಅನಾಹುತಕ್ಕೆ ನಾನು ಕಾರಣವಾಗಬಾರದು ಎಂಬ ಪಶ್ಚಾತ್ತಾಪ ಭಾವನೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲಾತಾಣದಲ್ಲಿ ಒಂದು ಮಹಿಳೆಯ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕ ಶೌಚಾಲಯದಲ್ಲಿ ಗಂಡಸೊಬ್ಬನ ಜೊತೆ ಲೈಂಗಿಕವಾಗಿ ತೊಡಗಿಕೊಂಡಿದ್ದಾಗ ಕೆಲವು ವ್ಯಕ್ತಿಗಳು ವಿಡಿಯೋ ಮಾಡಿದ್ದರು. ಆ ವಿಡಿಯೋವನ್ನು ಫೇಸ್ಬುಕ್ನಲ್ಲಿ ಸಹ ಪೋಸ್ಟ್ ಮಾಡಿದ್ದರು. ಅಲ್ಲಿಂದ ಈ ವಿಡಿಯೋ ಶರವೇಗದಲ್ಲಿ ವೈರಲ್ ಆಗಿತ್ತು. ಟ್ರೋಲ್ ಪೇಜ್ಗಳು, ಟಿಕ್ಟಾಕ್ ಪ್ರತಿಭೆಗಳು ''ಯಾಕಣ್ಣೋ, ಯಾಕಣ್ಣೋ'' ಎಂದು ಟ್ರೆಂಡ್ ಮಾಡಿದ್ದರು. ಆ ಕ್ಷಣಕ್ಕೆ ಈ ವಿಡಿಯೋ ಮನರಂಜನೆಯ ಕೇಂದ್ರಬಿಂದು ಆಗಿತ್ತು.

ಈ ಘಟನೆಯನ್ನು ಆಧರಿಸಿ ನಾಗೇಶ್ ಹೆಬ್ಬೂರ್ ''ಪಬ್ಲಿಕ್ ಟಾಯ್ಲೆಟ್'' ಎಂಬ ಕಿರುಚಿತ್ರ ನಿರ್ದೇಶಿಸಿ ತೆರೆಗೆ ತಂದಿದ್ದಾರೆ. ಭಾನವಿ ಕ್ಯಾಪ್ಚರ್ಸ್ ಯ್ಯೂಟ್ಯೂಬ್ ಚಾನಲ್ನಲ್ಲಿ ಕಿರುಚಿತ್ರ ಬಿಡುಗಡೆಯಾಗಿದ್ದು, ಬಹಳ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಕಿರುಚಿತ್ರಕ್ಕೆ ಬಂದಿರುವ ಕೆಲವು ಕಾಮೆಂಟ್ಗಳ ಆಯ್ಕೆ ಇಲ್ಲಿದೆ...
- ಈಗಿನ ಕಾಲದಲ್ಲಿ ಮೊಬೈಲ್ ಪ್ರಪಂಚ ಅಂದುಕೊಂಡು ಯುವಜನತೆ ದಾರಿ ತಪ್ಪುತ್ತಿದ್ದಾರೆ. ಆದ್ರೆ ಒಂದು ಕ್ಷಣ ಅವರ ಮನಸಾಕ್ಷಿಗೆ ಇದು ಮುಟ್ಟುತ್ತೆ...
- ಕೇವಲ ಕ್ಷಣದ ಖುಷಿಗಾಗಿ ಇದನ್ನ ಶೇರ್ ಮಾಡಿ ತಿಳಿದೋ ತಿಳಿಯದೆಯೋ ನಾವು ಇದರಲ್ಲಿ ಪಾಲುಗಾರರಗಿದ್ದೇವೆಂಬುದು ನಾಚಿಗೇಡಿನ ಸಂಗತಿ.
- ಇವತ್ತಿನ ಯುವ ಜನತೆ ಲೈಕ್ಸ್, ಕಾಮೆಂಟ್ಗಾಗಿ ಯೋಚನೆ ಮಾಡ್ದೆ, ಕ್ಷಣಕ್ಕೆ ಮಜಾ ತಗೋಳಕ್ಕೆ ಈ ರೀತಿ ಮಾಡ್ತಾರೆ,,,ಅದರ ಪರಿಣಾಮ ತುಂಬಾ ದೊಡ್ಡದು....
- ಒಂದು ಹೆಣ್ಣಿನ ವೈಯಕ್ತಿಕ ಜೀವನದ ಬಗ್ಗೆ ಅಪಪ್ರಚಾರ ಮಾಡುವವರು ಈ ಶಾರ್ಟ್ ಸಿನಿಮಾ ನೋಡಲೇಬೇಕು...
- ಇಂದಿನ ಸೈಬರ್ ಯುಗಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರ...
- ಒಂದಂತು ತಿಳಿತ್ತು, ಯಾವ ಹೆಣ್ಣಿನ ಬಗ್ಗೆನು ಮಾತಾಡುವ ಮುನ್ನ ಸಾವಿರ ಸಾರಿ ಯೋಚನೆ ಮಾಡಿ ಮಾತಾಡಿ....
- ನೀಚ ಮನಸ್ಥಿತಿಗಳ ನಡುವೆ ಈ ಗಲೀಜು ಬದುಕು...... ಅದ್ಬುತ ಮನವರಿಕೆಯ ಪ್ರಯತ್ನ
- ಸಮಾಜದ ಎಲ್ಲ ವಿಕೃತ ಮನಗಳಿಗೆ ಕಪಾಳಕ್ಕೆ ಬಾರಿಸಿದಂತಿದೆ....

ಕಳೆದ ಹತ್ತು ವರ್ಷದಿಂದ ಇಂಡಸ್ಟ್ರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ನಾಗೇಶ್ ಹೆಬ್ಬೂರ್, ಕಿರುಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಬಳಿ ಆರು ವರ್ಷ ಕೆಲಸ ಮಾಡಿದ್ದಾರೆ. ಬುದ್ದಿವಂತ 2, ಇನ್ಸ್ಪೆಕ್ಟರ್ ವಿಕ್ರಂ, ಗ್ರಾಮಾಯಣ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿದ್ದರು.
'ನಾನು ತುಮಕೂರಿನ ಜಿಲ್ಲೆಯವನು, ಆ ಮಹಿಳೆಯೂ ಅದೇ ಜಿಲ್ಲೆ. ಆಗಲೇ ನನಗೆ ಆ ಘಟನೆ ಬಹಳ ಕಾಡಿತ್ತು. ಎಲ್ಲರಿಗೂ ಅ ಮಹಿಳೆ ಕಥೆ ಗೊತ್ತಿತ್ತು. ಬೇರೆ ಏನಾದರೂ ವಿಷಯ ಬೇಕು ಎನಿಸಿದಾಗ ವಿಡಿಯೋ ಚಿತ್ರಕರಿಸಿದ ವ್ಯಕ್ತಿಯನ್ನ ಗಮನದಲ್ಲಿಟ್ಟುಕೊಂಡು ಸ್ಕ್ರಿಪ್ಟ್ ಮಾಡಿದೆ. ನಾನು ಆ ಜಾಗದಲ್ಲಿ ಇದ್ದಿದ್ದರೆ ಎಂಬುದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕತೆ ಮಾಡಿದೆ. ಕಿರುಚಿತ್ರಕ್ಕೆ ಸಿಕ್ಕಿರುವ ಬೆಂಬಲ ನಿಜಕ್ಕೂ ಖುಷಿ ಕೊಟ್ಟಿದೆ'' ಎಂದು ನಿರ್ದೇಶಕ ನಾಗೇಶ್ ಹೆಬ್ಬೂರ್ ಸಂತಸ ಹಂಚಿಕೊಂಡಿದ್ದಾರೆ.

''ಹತ್ತು ವರ್ಷದಿಂದ ಇದ್ದರೂ ನಿರ್ಮಾಪಕ ಸಿಕ್ಕಿಲ್ಲ. ಹಾಗಾಗಿ, ವಿಶ್ಯೂಲ್ ಆಗಿ ನಾನು ಸಾಬೀತಾಗಬೇಕಿತ್ತು. ಈ ಚಿತ್ರದಿಂದ ನಿರ್ಮಾಪಕ ಸಿಗಬಹುದು ಎಂಬ ಉದ್ದೇಶದಿಂದ ಆರಂಭಿಸಿದೆ. ಕಥೆ ಮುಗಿತಾ ಇದ್ದಂತೆ, ಇದು ಜನರ ನಡುವೆ ಚರ್ಚೆಯಾಗಬೇಕು. ಯಾರೋ ಒಬ್ಬ ನಾನು ತಪ್ಪು ಮಾಡಿದೆ. ಟ್ರೋಲ್ ಮಾಡಬಾರದಿತ್ತು ಅಂತ ಅನಿಸಿದರೆ ನಾನು ಗೆದ್ದೆ ಎಂಬ ಭಾವನೆ ಇತ್ತು. ಈಗ ರೆಸ್ಪಾನ್ಸ್ ನೋಡ್ತಿದ್ರೆ ಅದು ಈಡೇರಿದೆ'' ಎಂದು ನಾಗೇಶ್ ಖುಚಿಯಾಗಿದ್ದಾರೆ.
ಭಾನವಿ ಕ್ಯಾಪ್ಚರ್ಸ್ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಾಗೇಶ್ ಹೆಬ್ಬೂರ್ ನಿರ್ದೇಶಿಸಿದ್ದಾರೆ. ಅಭಿಷೇಕ್ ಕೆ ಕಾಸರಗೋಡು ಛಾಯಾಗ್ರಹಣ, ವರ್ಷವರ್ಧನ್ ರಾಜ್ ಸಂಗೀತ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸಂಪತ್, ಶ್ವೇತಾ ಶ್ರೀನಿವಾಸ್, ಕಾರ್ತಿ ಸೌಂದರಮ್, ಮಾಂತೇಶ್ ಹಿರೇಮಠ್, ನಿಂಗರಾಜ್ ಮಂಡ್ಯ, ಶ್ರೀಕಾಂತ್ ಜಿ ಕಶ್ಯಪ್, ಚಂದ್ರಪ್ರಭ, ಪುನೀತ್, ಅಥ್ರೇಯ ರಾಜ್, ಭಾನು ಪ್ರಕಾಶ್, ಪವಿತ್ರಾ, ಆನಂದ್ ಹೆಬ್ಬೂರ್, ಕತ್ವಿಕ್ ಸೇರಿದಂತೆ ಇತರರೆ ನಟಿಸಿದ್ದಾರೆ.


Click it and Unblock the Notifications











