ಕನ್ನಡ ಕಷ್ಟವಾದರೂ, ಇಷ್ಟವಾಗುತ್ತೆ: ಮಲ್ಲೂ ನಟಿ
ಮಾಣಿಕ್ಯ ಚಿತ್ರದ ಯಶಸ್ಸಿನ ನಂತರ ಮಲೆಯಾಳಂ ಚಿತ್ರ 'ದೃಶ್ಯಂ' ರಿಮೇಕ್ ನಲ್ಲಿ ಕನಸುಗಾರ ರವಿಚಂದ್ರನ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ದೃಶ್ಯಂ ಮೂಲ ಚಿತ್ರದ ಪ್ರಮುಖ ಪಾತ್ರಧಾರಿ ಆಶಾ ಶರತ್ ಅವರು ಕನ್ನಡದಲ್ಲೂ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಕನ್ನಡ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸಿನಿಮಾ ಪ್ರೇಮಿ ರೈತನೊಬ್ಬ ಒಂದು ಅಪಾಯದ ಸನ್ನಿವೇಶದಿಂದ ತನ್ನ ಮಡದಿ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದೇ 'ದೃಶ್ಯಂ' ಚಿತ್ರದ ಕಥಾವಸ್ತು. ರೈತನ ಮಗಳೊಬ್ಬರ ಚಿತ್ರವನ್ನು ಪೊಲೀಸ್ ಅಧಿಕಾರಿಣಿ ಮಗ ಕದ್ದು ಚಿತ್ರಿಸಿರುತ್ತಾನೆ. ನಂತರ ಬ್ಲಾಕ್ ಮೇಲ್ ಮಾಡಲು ಬಂದವನನ್ನು ರೈತನ ಮಗಳು, ಪತ್ನಿ ಕೊಂದು ಹಾಕುತ್ತಾರೆ. ನಾಯಕ(ರವಿಚಂದ್ರನ್) ಶವವನ್ನು ಬಚ್ಚಿಟ್ಟು ಕುಟುಂಬವನ್ನು ವಿಹಾರಕ್ಕೆ ಕರೆದುಕೊಂಡು ಹೋಗುತ್ತಾನೆ. ತನಿಖೆ ನಡೆಸುವ ಅಧಿಕಾರಿ(ಆಶಾ ಶರತ್) ಗೆ ಕೊನೆಯ ತನಕ ಸುಳಿವು ಸಿಗುವುದಿಲ್ಲ. ಅಂತಿಮವಾಗಿ ಶವವನ್ನು ಪೊಲೀಸ್ ಠಾಣೆಯಲ್ಲೇ ಹುದುಗಿಸಿದ್ದೆ ಎಂದು ನಾಯಕ ಹೇಳುತ್ತಾನೆ. ಥ್ರಿಲ್ಲಿಂಗ್ ಸನ್ನಿವೇಶಗಳನ್ನು ಒಳಗೊಂಡ ಈ ಚಿತ್ರವನ್ನು ಕನ್ನಡಕ್ಕೆ ಪಿ. ವಾಸು ತಂದಿದ್ದಾರೆ.
ದೃಶ್ಯಂ ಚಿತ್ರದ ಕನ್ನಡ ರಿಮೇಕ್ ಗೆ ಇನ್ನೂ ನಿರ್ದೇಶಕ ಪಿ.ವಾಸು ಅವರು ಹೆಸರಿಟ್ಟಿಲ್ಲ. ಚಿತ್ರವಂತೂ ರೆಡಿಯಾಗಿದೆ. ಕೌಟುಂಬಿಕ ಮೌಲ್ಯ, ತುಂಬು ಕುಟುಂಬದ ಕಥೆಯುಳ್ಳ ಈ ಮಲೆಯಾಳಂನಲ್ಲಿ ಭರ್ಜರಿ ಹಿಟ್ ಆಗಿತ್ತು. 4 ಕೋಟಿ ರು ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 50ಕೋಟಿ ರು ಬಾಚಿತ್ತು. ಮೂಲ ಚಿತ್ರದಲ್ಲಿ ಪೊಲೀಸ್ ಅಧಿಕಾರಿಣಿ ಪಾತ್ರ ಮಾಡಿದ್ದ ಆಶಾ ಶರತ್ ಅವರು ಕನ್ನಡದಲ್ಲೂ ಅದೇ ಪಾತ್ರವನ್ನು ನಿರ್ವಹಿಸಿ, ತಮ್ಮ ಪಾಲಿನ ಶೂಟಿಂಗ್ ಮುಗಿಸಿದ್ದಾರೆ. 'ಕನ್ನಡ ಭಾಷೆ ಮಾತನಾಡಲು ಕಷ್ಟವಾಗುತ್ತೆ, ಆದರೆ, ಇಲ್ಲಿನ ಚಿತ್ರತಂಡ ಹಾಗೂ ಸ್ನೇಹಮಯ ವಾತವಾರಣ ಇಷ್ಟವಾಗುತ್ತದೆ' ಎಂದು ಹೇಳಿದ್ದಾರೆ.

ಆಶಾ ಶರತ್ ಮಲೆಯಾಳಿಗಳ ಅಚ್ಚುಮೆಚ್ಚಿನ ಚೇಚಿ. ಕುಂಕುಮಪೂವು ಸೀರಿಯಲ್ ಮೂಲಕ ಎಲ್ಲರ ಮನಗೆದ್ದಿರುವ ನಟಿ. ದುಬೈನಲ್ಲಿ ನೆಲೆಸಿರುವ ಆಶಾ ಶರತ್ ಕರ್ನಾಟಕ ಕೇರಳ ಗಡಿಭಾಗದ ಕಾಸರಗೋಡಿನ ಪೊಲೀಸ್ ಠಾಣೆಯಿಂದ ಬುಲಾವ್ ಬಂದಿದೆ. ಬಹು ಜನಪ್ರಿಯ ನಟಿ ಆಶಾ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು.
ದುಬೈನಲ್ಲಿ ಕೈರಲಿ ಕಲಾಕೇಂದ್ರದಲ್ಲಿ ಹಾಡು, ನೃತ್ಯ, ಕಲೆ ಎಂದು ತಿಂಗಳು ಪೂರ್ತಿ ಕಾಲ ಕಳೆಯುವ ಆಶಾ, ಬಿಡುವು ಮಾಡಿಕೊಂಡು 8-10 ದಿನ ಕೇರಳಕ್ಕೆ ಬಂದು ಶೂಟಿಂಗ್ ಮುಗಿಸಿಕೊಟ್ಟು ಹೋಗುತ್ತಾರೆ. ನಟಿ, ನೃತ್ಯಗಾರ್ತಿ ಆಶಾ ಶರತ್ ವಂಚನೆ ಮಾಡಲು ಸಮಯ ಎಲ್ಲಿದೆ ಎಂದು ಅಭಿಮಾನಿಗಳು ಹುಬ್ಬೇರಿಸಿ ಪ್ರಶ್ನಿಸಿದ್ದರು. ಅದರಂತೆ ಕೇಸು ಕೂಡಾ ಮುರಿದು ಬಿದ್ದಿತ್ತು.
ಕರ್ಮಯೋಧ, ಫ್ರೈಡೇ, ಗರ್ಭಿಣಿಕಳ್ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಆಶಾ ಅವರು ಮುಂಬರುವ ದೃಶ್ಯಂ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದರು.
ಭರತನಾಟ್ಯ, ಕುಚುಪುಡಿ, ಮೋಹಿನಿಯಾಟ್ಟಂ ಕಲಿತಿರುವ ಆಶಾ 1992ರಲ್ಲಿ ಬನಾರಾಸ್ ನಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆ ವಿಜೇತೆ. ಮದುವೆಯಾದ ಮೇಲೆ ದುಬೈನಲ್ಲಿ ನೆಲೆಸಿದ ಆಶಾ ಅಲ್ಲಿನ ಎಫ್ ಎಂ ವಾಹಿನಿಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಆಶಾ ಅವರ ಕಲಾ ಕೇಂದ್ರದಲ್ಲಿ ವಿವಿಧ ದೇಶಗಳ 3500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಪುತ್ರಿಯರ ಜತೆ ದುಬೈವಾಸಿಯಾಗಿರುವ ಆಶಾ, ಕುಂಕುಮಪೂವು ಜಯಂತಿ ಪಾತ್ರ ಕಂಡು ಅನೇಕ ಜನ ಪ್ರಭಾವಿತರಾಗಿದ್ದಾರೆ.


Click it and Unblock the Notifications











