ಚಿತ್ರೋದ್ಯಮದ ಮೂಗಿಗೆ ತುಪ್ಪ ಸವರಿದ ಸಿದ್ದು ಬಜೆಟ್
ಈ ಬಾರಿಯ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ಆಯವ್ಯಯ ಪತ್ರವನ್ನು ಮಂಡಿಸಿದರು. ಈ ಬಾರಿಯ ಯೋಜನಾ ಗಾತ್ರ 1 ಲಕ್ಷ 38 ಸಾವಿರ ಕೋಟಿ.
ಕನ್ನಡ ಚಿತ್ರೋದ್ಯಮ ಎಂದಿನಂತೆ ಈ ಬಾರಿಯ ಬಜೆಟ್ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಅದಕ್ಕೆ ಕಾರಣ ಚಿತ್ರರಂಗಕ್ಕೆ ಸೇರಿದ ಇಬ್ಬರು ಕಲಾವಿದರು ಕ್ಯಾಬಿನಟ್ ದರ್ಜೆ ಸಚಿವರಾಗಿರುವುದು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹಾಗೂ ವಸತಿ ಸಚಿವ ಅಂಬರೀಶ್ ಸಚಿವರಾಗಿರುವ ಕಾರಣ ಚಿತ್ರೋದ್ಯಮ ನಿರೀಕ್ಷೆಗಳು ಬಹಳಷ್ಟಿದ್ದವು.

ಆದರೆ ಈ ಬಾರಿಯ ಬಜೆಟ್ ಚಿತ್ರರಂಗದ ಆಸೆಗಳಿಗೆ ತಣ್ಣೀರೆರಚಿದೆ. ಚಿತ್ರರಂಗದ ಸಮಸ್ಯೆಗಳು ಒಂದೆರಡಲ್ಲ. ಚಿತ್ರಮಂದಿರಗಳ ಸಮಸ್ಯೆ, ಮೂಲಸೌಲಭ್ಯಗಳ ಕೊರತೆ, ಸ್ಟುಡಿಯೋಗಳ ಅಭಿವೃದ್ಧಿ, ಕಲಾವಿದರು ಕಾರ್ಮಿಕರ ಸಮಸ್ಯೆಗಳು ಹೀಗೆ ಲೆಕ್ಕವಿಲ್ಲದಷ್ಟು ಸಮಸ್ಯೆಗಳಿವೆ.
ಈ ಬಾರಿಯ ಬಜೆಟ್ ಅಂಶಗಳನ್ನು ಗಮನಿಸಿದರೆ ಚಿತ್ರೋದ್ಯಮದ ಮೂಗಿಗೆ ತುಪ್ಪ ಸವರಿರುವುದು ಗೊತ್ತಾಗುತ್ತದೆ. ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಹಾಗೂ ಚಲನಚಿತ್ರ ವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ರು.10 ಕೋಟಿ ನಿಗದಿಪಡಿಸಲಾಗಿದೆ.
ಬೆಂಗಳೂರಿನ ಹೆಸರಘಟ್ಟದಲ್ಲಿ ಅತ್ಯಾಧುನಿಕ ಮಾದರಿಯ ಚಿತ್ರನಗರಿ ನಿರ್ಮಾಣಕ್ಕೆ ಕ್ರಮ. ಕಿರುಚಿತ್ರಗಳ ಉತ್ತೇಜನಕ್ಕೆ ವಾರ್ಷಿಕ ಪ್ರಶಸ್ತಿ. ಇವಿಷ್ಟು ಈ ಬಾರಿಯ ಬಜೆಟ್ ನಲ್ಲಿ ನೀಡಿರುವ ಕೊಡುಗೆಗಳು. (ಒನ್ಇಂಡಿಯಾ ಕನ್ನಡ)


Click it and Unblock the Notifications











