ಕವಿತಾ ಲಂಕೇಶ್ ಮತ್ತೆ ನಿರ್ದೇಶನ, ಮಾಜಿ ರಾಷ್ಟ್ರಪತಿ ಮೊಮ್ಮಗ ನಿರ್ಮಾಣ!
ಕನ್ನಡದ ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್ ಹೊಸ ಚಿತ್ರವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. 2014ರಲ್ಲಿ ತೆರೆಕಂಡ 'ಕರಿಯ ಕಣ್ ಬಿಟ್ಟ' ಚಿತ್ರದ ನಂತರ ಕವಿತಾ ಲಂಕೇಶ್ ಅವರು ಮತ್ತೆ ಯಾವ ಚಿತ್ರವನ್ನೂ ನಿರ್ದೇಶನ ಮಾಡಿರಲಿಲ್ಲ. ಇದೀಗ 2 ವರ್ಷದ ನಂತರ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ಸುಧೀಕ್ಷಾ ಮೂವೀಸ್ ಲಾಂಛನದ ಅಡಿಯಲ್ಲಿ ಸುಬ್ರಹ್ಮಣ್ಯ ಶರ್ಮಾ ಜಿ ಅವರು ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರಕ್ಕೆ ಈ ಹಿಂದೆ 'ಕೇಸ್ ನಂ 18/7' ಚಿತ್ರದಲ್ಲಿ ನಟಿಸಿದ್ದ ನಿರಂಜನ್ ಕುಮಾರ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಈ ವಿಶೇಷ ಅಂದ್ರೆ, ಸುಧೀಕ್ಷ ಗ್ರೂಪ್ ಆಫ್ ಕಂಪೆನಿಯ ಚೇರ್ ಮನ್ ಆಗಿರುವ ಈ ಚಿತ್ರದ ನಿರ್ಮಾಪಕ ಸುಬ್ರಹ್ಮಣ್ಯ ಶರ್ಮಾ ಜಿ ಅವರು ಭಾರತದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ರ ಮೊಮ್ಮಗ. ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಹೊಂದಿರುವ ಇವರು ವರ್ಷಕ್ಕೊಂದು ಉತ್ತಮ ಸಿನಿಮಾ ನಿರ್ಮಾಣ ಮಾಡುವ ಕನಸಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಇದುವರೆಗೂ ಒಂದಕ್ಕೊಂದು ಭಿನ್ನವಾದ ಸದಭಿರುಚಿಯ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕಿ ಕವಿತಾ ಲಂಕೇಶ್ ಅವರು ನಿರ್ದೇಶನದ ಜೊತೆ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಕೂಡ ಬರೆದಿದ್ದಾರೆ. 'ದೇವರಿ' ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದ ಕವಿತಾ ಲಂಕೇಶ್ ಅವರು, 'ಪ್ರೀತಿ ಪ್ರೇಮ ಪ್ರಣಯ', 'ತನನಂ ತನನಂ', 'ಅವ್ವ', 'ಕ್ರೇಜಿ ಕುಟುಂಬ', 'ಕರಿಯ ಕಣ್ ಬಿಟ್ಟ', ಅಂತಹ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.

ಸದ್ಯ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಲ್ಲಿ ಕವಿತಾ ಲಂಕೇಶ್ ಅವರು ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಒಟ್ಟು 4 ಹಾಡುಗಳಿರಲಿದ್ದು, ಬೆಂಗಳೂರು, ಉತ್ತರ ಕರ್ನಾಟಕ ಮತ್ತು ವಿದೇಶಗಳಲ್ಲಿಯೂ ಈ ಚಿತ್ರದ ಚಿತ್ರೀಕರಣ ನಡೆಯಲಿದೆಯಂತೆ. ಎಲ್ಲ ಅಂದುಕೊಂಡಂತೆ ಆದರೇ, ಮಾರ್ಚ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ದೊರೆಯಲಿದೆ.


Click it and Unblock the Notifications











