ಅಭಿಮಾನಿಗಳಿಗೆ ನಿರಾಸೆ ಮಾಡುತ್ತಿಲ್ಲ ಸುದೀಪ್: ಆನ್ಲೈನ್ನಲ್ಲಿ ಶುಭಾಶಯ ಕೋರಿ
ಸೆಪ್ಟೆಂಬರ್ 2ರಂದು ನಟ ಸುದೀಪ್ ಹುಟ್ಟುಹಬ್ಬ. ಕೋವಿಡ್ ಕಾರಣದಿಂದಾಗಿ ನಟ ಸುದೀಪ್ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅಭಿಮಾನಿಗಳಿಗೆ ನಿರಾಸೆ ಆಗದಿರಲೆಂದು ಆನ್ಲೈನ್ ಮೂಲಕ ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸಲಿದ್ದಾರೆ.
ನಾಳೆ (ಸೆಪ್ಟೆಂಬರ್ 02) ಸಂಜೆ 'ನಿಮ್ಮೊಂದಿಗೆ ನಾನು' ಎಂಬ ವಿಶೇಷ ಆನ್ಲೈನ್ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಟ ಸುದೀಪ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದಾರೆ. ಸುದೀಪ್ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶೋ ಅನ್ನು ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ.
ನಾಳೆ (ಸೆಪ್ಟೆಂಬರ್ 02) ಸಂಜೆ 6 ಗಂಟೆಗೆ ಈ ಆನ್ಲೈನ್ ಕಾರ್ಯಕ್ರಮ ಆರಂಭವಾಗಲಿದ್ದು, ಅಭಿಮಾನಿಗಳು ಆನ್ಲೈನ್ ನಲ್ಲಿಯೇ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಬಹುದಾಗಿದೆ.

ಡಿಜಿಟಲ್ ಒಟಿಟಿ ಫ್ಲಾಟ್ಫಾರ್ಮ್ (Digital_OTT) ಅಧಿಕೃತ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀಪ್ ಲೈವ್ ಬರಲಿದ್ದಾರೆ ಎಂದು ಪ್ರಕಟಿಸಿದೆ. ಸೆಪ್ಟೆಂಬರ್ 2 ರಂದು ಸಂಜೆ 6 ಗಂಟೆಗೆ ಲೈವ್ನಲ್ಲಿ ಸುದೀಪ್ ಜೊತೆ ಮಾತುಕತೆ ಮಾಡಬಹುದು.
ಕೋವಿಡ್ ಇರುವ ಕಾರಣ ನಟ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಮನವಿ ಮಾಡಿರುವ ಸುದೀಪ್, ''ನನ್ನೆಲ್ಲಾ, ಪ್ರೀತಿಯ ಅಭಿಮಾನಿಗಳಿಗೆ ಸ್ನೇಹಿತರಲ್ಲಿ ಮನವಿ. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ ಎಂದು ಕೋರುವ ನಿಮ್ಮ ಕಿಚ್ಚ" ಎಂದು ಪತ್ರ ಬರೆದಿದ್ದಾರೆ. "ಕ್ಷಮೆ ಇರಲಿ, ಮುಂದೆ ಪರಿಸ್ಥಿತಿ ಸುಧಾರಿಸಿದ ಬಳಿಕ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ" ಎಂದಿದ್ದಾರೆ ಸುದೀಪ್. ಕಳೆದ ವರ್ಷವೂ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.
ನಟ ಸುದೀಪ್ಗೆ ಈಗಾಗಲೇ ಹುಟ್ಟುಹಬ್ಬದ ಶುಭಾಶಯಗಳು ಬರಲು ಆರಂಭವಾಗಿವೆ. ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಒಂದು ದಿನ ಮುಂಚಿತವಾಗಿಯೇ ಕೋರಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು ಸುದೀಪ್ ಜೀ. ನಿಮ್ಮ ಸಿನಿಮಾಗೆ ಶುಭಾಶಯಗಳು" ಎಂದು ಸರಳವಾಗಿ ಶುಭಾಶಯ ಹೇಳಿದ್ದಾರೆ ನೀರಜ್ ಚೋಪ್ರಾ. ನೀರಜ್ ವಿಡಿಯೋಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಶೇರ್ ಮಾಡಿ, ಧನ್ಯವಾದಗಳು ಸಹೋದರ ಎಂದು ಹೇಳಿದ್ದಾರೆ. "ಇದು ಅತ್ಯಂತ ಸ್ವೀಟೆಸ್ಟ್. ಧನ್ಯವಾದಗಳು ನನ್ನ ಸಹೋದರ ನೀರಜ್ ಚೋಪ್ರಾ. ನಿಮಗೆ ಯಾವಾಗಲೂ ನನ್ನ ಶುಭಾಶಯಗಳು" ಎಂದು ಹೇಳಿದ್ದಾರೆ.
ಸುದೀಪ್ ಹುಟ್ಟುಹಬ್ಬದ ದಿನ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ಹಾಡೊಂದು ಬಿಡುಗಡೆ ಆಗಲಿದೆ. 'ಕೋಟಿಗೊಬ್ಬ 3' ಸಿನಿಮಾದ ಹಾಡು ಸಹ ಬಿಡುಗಡೆ ಆಗುವ ಸಾಧ್ಯತೆ ಇದೆ. ಜೊತೆಗೆ ಸುದೀಪ್ ನಟನೆಯ ಹೊಸ ಸಿನಿಮಾಗಳ ಘೋಷಣೆ ಸಹ ಆಗಲಿದೆ.
ಸುದೀಪ್ ಹುಟ್ಟುಹಬ್ಬದ ದಿನದಂದು ಅಭಿಮಾನಿ ಸಂಘಗಳು ಹಲವೆಡೆ ಸಮಾಜ ಸೇವಾ ಕಾರ್ಯವನ್ನು ಆಯೋಜಿಸಿವೆ. ರಕ್ತದಾನ ಶಿಬಿರ, ಕೋವಿಡ್ ಲಸಿಕಾ ಶಿಬಿರ, ಅನ್ನ ಸಂತರ್ಪಣೆ ವಿಶೇಷ ಪೂಜೆಗಳನ್ನು ಹಲವೆಡೆ ಆಯೋಜಿಸಲಾಗಿದೆ. ಸುದೀಪ್ ಅವರ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಸಹ ಹಲವು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇನ್ನು ತಮಿಳು ನಿರ್ದೇಶಕ ವಿಕ್ರಂ ಪ್ರಭು ಜೊತೆ ಸುದೀಪ್ ಸಿನಿಮಾ ಮಾಡಲಿದ್ದಾರೆ. ಇತ್ತೀಚಿಗಷ್ಟೆ ವಿಕ್ರಂ ಪ್ರಭು ಬೆಂಗಳೂರಿಗೆ ಆಗಮಿಸಿ ಸುದೀಪ್ ಅವರನ್ನು ಭೇಟಿ ಮಾಡಿದರು. ಬಳಿಕ ಟ್ವಿಟ್ಟರ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದ ಪ್ರಭು, 'ಸದ್ಯದಲ್ಲೇ ಸಿನಿಮಾ ಮಾಡ್ತೇವೆ' ಎಂದು ಪ್ರಕಟಿಸಿದ್ದರು.


Click it and Unblock the Notifications











