ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಸುದೀಪ್- ಪ್ರಿಯಾ ಸುದೀಪ್ ದಂಪತಿ
ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದ್ದು, ಸುದೀಪ್ ಮಾತ್ರ ಕಳೆದರೆಡು ದಿನಗಳಿಂದ ಅಭಿಮಾನಿಗಳ ಕೈಗೆ ಸಿಗಲಿಲ್ಲ. ದುಬೈ ಪ್ರೀಮಿಯರ್ ಶೋಗೆ ಹೋಗಿ ಬಂದ ಬೆನ್ನಲ್ಲೇ ಕಿಚ್ಚ ದೆಹಲಿಗೆ ತೆರಳಿದ್ದರು. ಸದ್ಯ ದೆಹಲಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿ ಭೇಟಿ ಮಾಡಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅವರಿಗೆ ಸಾಥ್ ಕೊಟ್ಟಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾ ಸುದೀಪ್ ಅಭಿಮಾನಿಗಳಿ ಮನರಂಜನೆಯ ರಸದೌತಣ ಉಣಬಡಿಸ್ತಿದೆ. ಅದರಲ್ಲೂ ತ್ರೀಡಿ ವರ್ಷನ್ ಸಖತ್ ಮಜಾ ಕೊಡ್ತಿದೆ. ಮೊದಲ ದಿನವೇ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ನಿರೀಕ್ಷೆ ಇದೆ. ಅಭಿಮಾನಿಗಳು ರಾಜ್ಯಾದ್ಯಂತ ಥಿಯೇಟರ್ಗಳಲ್ಲಿ ಹಬ್ಬದ ರೀತಿ ರೋಣನನ್ನು ಬರಮಾಡಿಕೊಂಡಿದ್ದರು. ಸಾಮಾನ್ಯವಾಗಿ ಸ್ಟಾರ್ಗಳು ಅಭಿಮಾನಿಗಳ ಜೊತೆ ಥಿಯೇಟರ್ಗಳಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡ್ತಾರೆ. ಆದರೆ ಮಂಗಳವಾರ ಬೆಂಗಳೂರಿನ ಲುಲು ಮಾಲ್ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಭಾಗಿಯಾಗಿದ್ದ ಸುದೀಪ್ ನೇರವಾಗಿ ದುಬೈಗೆ ಫ್ಲೈಟ್ ಏರಿದ್ದರು. ಅಲ್ಲಿಂದ ವಾಪಸ್ ಬಂದು ನಿನ್ನೆ(ಜುಲೈ.28) ದೆಹಲಿಯಲ್ಲಿ ಸಂಸದರಿಗೆ ಏರ್ಪಡಿಸಿದ್ದ 'ವಿಕ್ರಾಂತ್ ರೋಣ' ಚಿತ್ರದ ವಿಶೇಷ ಪ್ರದರ್ಶನಕ್ಕೆ ಪತ್ನಿ ಸಮೇತ ಹೋಗಿದ್ದರು.
'ವಿಕ್ರಾಂತ್ ರೋಣ' ಸಿನಿಮಾ ವಿಶೇಷ ಪ್ರದರ್ಶನದ ನಂತರ ನೂತನವಾಗಿ ರಾಜ್ಯ ಸಭೆಗೆ ಆಯ್ಕೆ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸುದೀಪ್ ದಂಪತಿಗಳು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ರಾಜ್ಯ ಸಭೆಗೆ ಆಯ್ಕೆ ಆಗಿರುವ ವೀರೇಂದ್ರ ಹೆಗ್ಗಡೆಯವರಿಗೆ ಸುದೀಪ್ ದಂಪತಿ ಅಭಿನಂದನೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಸುದೀಪ್ ದಂಪತಿ ಸಾಕಷ್ಟು ಬಾರಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದರು. 2018ರಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲಿ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸುದೀಪ್ ದಂಪತಿ ಭಾಗಿ ಆಗಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು.

ಶೀಘ್ರದಲ್ಲೇ ಸುದೀಪ್- ಫ್ಯಾನ್ಸ್ ಭೇಟಿ
ಎಲ್ಲೆಡೆ 'ವಿಕ್ರಾಂತ್ ರೋಣ' ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಚಿತ್ರತಂಡಕ್ಕೆ ಖುಷಿ ತಂದಿದೆ. ಸಿನಿಮಾ ರಿಲೀಸ್ ಸಂಭ್ರಮದಲ್ಲಿ ನೆಚ್ಚಿನ ನಟನನ್ನು ಭೇಟಿಯಾಗಲು ಸಾಧ್ಯವಾಗದ್ದಕ್ಕೆ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಶೀಘ್ರದಲ್ಲೇ ಸುದೀಪ್ ಅಭಿಮಾನಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಸಿನಿಮಾ ನೋಡಿ ಪ್ರಿಯಾ ಸುದೀಪ್ ಏನಂದ್ರು?
ಸುದೀಪ್ ಅನುಪಸ್ಥಿತಿಯಲ್ಲಿ ನಿನ್ನೆ ನಗರದ ಊವರ್ಶಿ ಥಿಯೇಟರ್ನಲ್ಲಿ ಪತ್ನಿ ಪ್ರಿಯಾ ಸುದೀಪ್ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾ, 'ನಾನು ಪ್ರತಿ ಸಿನಿಮಾವನ್ನು ಅಭಿಮಾನಿಗಳ ಜೊತೆ ನೋಡಿದ್ದೀನಿ. ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಪ್ರತಿ ಸೀನ್ ಸೂಪರ್ ಆಗಿ ಬಂದಿದೆ' ಎಂದು ಪತಿಯ ನಟನೆಯನ್ನು ಮೆಚ್ಚಿಕೊಂಡಿದ್ದರು.

'ರೋಣ'ನ ಆರ್ಭಟಕ್ಕೆ'ಕೆಜಿಎಫ್-2' ದಾಖಲೆ ಉಡೀಸ್
ಬಹಳ ದೊಡ್ಡಮಟ್ಟದಲ್ಲಿ'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನ ದೇಶಾದ್ಯಂತ ಮಲ್ಟಿಫ್ಲೆಕ್ಸ್ಗಳಲ್ಲಿ ಚಿತ್ರಕ್ಕೆ 1047 ಕನ್ನಡ ಶೋಗಳು ಸಿಕ್ಕಿತ್ತು. 'ಕೆಜಿಎಫ್-2'ಚಿತ್ರಕ್ಕೆ 913 ಶೋಗಳಷ್ಟೆ ದಕ್ಕಿತ್ತು. ಹಾಗಾಗಿ ಇದೊಂದು ವಿಚಾರದಲ್ಲಿ ರಾಕಿ ಭಾಯ್ ದಾಖಲೆಯನ್ನು ಮುರಿದು ರೋಣ ಸದ್ದು ಮಾಡಿದ್ದಾನೆ.

'ವಿಕ್ರಾಂತ್ ರೋಣ' ಪೈರಸಿ
ದೊಡ್ಡದೊಡ್ಡ ಸಿನಿಮಾಗಳಿಗೆ ಪೈರಸಿ ದೊಡ್ಡ ಪೆಟ್ಟು ಕೊಡ್ತಿದೆ. 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಆನ್ಲೈನ್ನಲ್ಲಿ ಲೀಕ್ ಆಗಿದೆ. ಚಿತ್ರತಂಡ ಎಷ್ಟೇ ಎಚ್ಚರಿಕೆ ವಹಿಸಿದರೂ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಇನ್ನು ವೀಕೆಂಡ್ನಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.


Click it and Unblock the Notifications











