ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಿಚ್ಚ ಸುದೀಪ್ ಹಾಗೂ ಕುಟುಂಬ
ನಟ ಕಿಚ್ಚ ಸುದೀಪ್ ಹಾಗೂ ಕುಟುಂಬಸ್ಥರು ಇಂದು ಪ್ರಸಿದ್ಧ ಧಾರ್ಮಿಕ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು. ಕಿಚ್ಚ ಸುದೀಪ್ ಜೊತೆಗೆ ಪತ್ನಿ ಪ್ರಿಯಾ ಸುದೀಪ್ ಹಾಗೂ ಇತರರು ಇದ್ದರು.
ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದಲ್ಲಿ ಆಶ್ಲೇಷ ,ನಾಗಪ್ರತಿಷ್ಟೆ ಪೂಜೆ ಮಾಡಿಸಿ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದರು. ಜೊತೆಗೆ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದವನ್ನು ಸುದೀಪ್ ಹಾಗೂ ಕುಟುಂಬ ಪಡೆಯಿತು.
ಸುದೀಪ್ ಅವರ ಮಹಾತ್ವಾಕಾಂಕ್ಷೆಯ ಸಿನಿಮಾ 'ವಿಕ್ರಾಂತ್ ರೋಣ'ದ ಬಿಡುಗಡೆ ದಿನಾಂಕ ಪ್ರಕಟಿಸಿದ ಬೆನ್ನಲ್ಲೆ ಸುದೀಪ್ ದೇವಾಲಯಕ್ಕೆ ಭೇಟಿ ನೀಡಿರುವುದು ವಿಶೇಷ. ಕೆಲವು ದಿನಗಳ ಹಿಂದಷ್ಟೆ ನಟ ದರ್ಶನ್ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು.

ಸೆಪ್ಟೆಂಬರ್ ತಿಂಗಳಲ್ಲಿ ಸುದೀಪ್ ಕುಟುಂಬ ಸಮೇತರಾಗಿ ಚನ್ನಪಟ್ಟಣ ಕಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಸುದೀಪ್ ಅಭಿಮಾನಿಗಳು ಅಂದು ವಿಗ್ರಹವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅದಕ್ಕೂ ಮುನ್ನಾ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಶ್ವದಲ್ಲೇ ಅತಿ ಎತ್ತರದ 68 ಅಡಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹದ ದರ್ಶನ ಪಡೆದು ತಾಯಿಗೆ ಚಿತ್ರನಟ ಸುದೀಪ್ ವಿಶೇಷ ಪೂಜೆ ಸಲ್ಲಿಸಿದ್ದರು.
ಅದಕ್ಕೂ ಮುನ್ನಾ ಮೈಸೂರಿನ ಚಾಮುಂಡಿ ದೇವಾಲಯಕ್ಕೆ ಕಿಚ್ಚ ಸುದೀಪ್ ಭೇಟಿ ನೀಡಿದ್ದರು. ಕೊರೊನಾ ಹಾಗೂ ಇತರ ಕಾರಣಗಳಿಂದ ಬಿಡುವಾಗಿದ್ದ ಸುದೀಪ್ ಈ ಕೆಲವು ತಿಂಗಳಲ್ಲಿ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಸ್ವತಃ ಸುದೀಪ್ ಅವರಿಗೆ ಅವರ ಅಭಿಮಾನಿಗಳು ದೇವಾಲಯ ಕಟ್ಟಿದ್ದಾರೆ. ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ದೇವಸ್ಥಾನ ನಿರ್ಮಿಸಲಾಗಿದೆ. ಮೂರು ತಿಂಗಳ ಅವಧಿಯಲ್ಲಿ ಈ ದೇವಾಲಯದ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಸುದೀಪ್ ಅವರ ಪುತ್ಥಳಿಯನ್ನು ದೇವಾಲಯದಲ್ಲಿ ಇಡಲಾಗಿದ್ದು ನಿತ್ಯ ಪೂಜೆ ನಡೆಯುತ್ತಿದೆ. ಸುದೀಪ್ ಪುತ್ಥಳಿಯ ಎದುರು ಪುನೀತ್ ರಾಜ್ಕುಮಾರ್ ಭಾವ ಚಿತ್ರವನ್ನೂ ಇರಿಸಿ ಅಭಿಮಾನಿಗಳು ಪೂಜೆ ಮಾಡಿದ್ದಾರೆ.
ಸುದೀಪ್ ನಟನೆಯ 'ಕೋಟಿಗೊಬ್ಬ 3' ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿ ಹಿಟ್ ಆಗಿದೆ. ಸಿನಿಮಾ ಈಗಾಗಲೇ ಅಮೆಜಾನ್ ಪ್ರೈಂಗೂ ಬಂದಿದೆ. ಸುದೀಪ್ ಸ್ವತಃ ಬಹಳ ನಿರೀಕ್ಷೆ ಇರಿಸಿರುವ ಸಿನಿಮಾ 'ವಿಕ್ರಾಂತ್ ರೋಣ' ಫೆಬ್ರವರಿ 24 ಕ್ಕೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಆ ಬಳಿಕ ಸಲ್ಮಾನ್ ಖಾನ್ಗಾಗಿ ಹೊಸ ಸಿನಿಮಾವೊಂದನ್ನು ಸುದೀಪ್ ನಿರ್ದೇಶನ ಮಾಡಲಿದ್ದಾರೆ.


Click it and Unblock the Notifications











