'ಕುರುಕ್ಷೇತ್ರ' ಸಿನಿಮಾಗೆ ಪ್ಲಸ್ ಆಗಿದ್ದೇನು? ಮೈನಸ್ ಆಗಿದ್ದೇನು..?
Recommended Video
'ಕುರುಕ್ಷೇತ್ರ' ಸಿನಿಮಾ ಬಹುಪಾಲು ಜನರ ನಿರೀಕ್ಷೆಗೆ ತಕ್ಕ ಹಾಗೆ ಇದೆ. ನಿನ್ನೆ (ಶುಕ್ರವಾರ) ಬಿಡುಗಡೆಯಾದ ಸಿನಿಮಾಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿ ಬಂದ ಜನರ ಮಾತುಗಳು, ಮತ್ತಷ್ಟು ಜನರನ್ನು ಚಿತ್ರತಂಡಕ್ಕೆ ಹೋಗುವ ಹಾಗೆ ಮಾಡುತ್ತಿದೆ.
ಒಂದು ಸಿನಿಮಾ ಎಂದ ಮೇಲೆ ಪ್ಲಸ್ ಹಾಗೂ ಮೈನಸ್ ಎರಡೂ ಅಂಶಗಳು ಇರುತ್ತದೆ. ಎಷ್ಟೇ ಜಾಗರೂಕತೆ ಇಂದ ಸಿನಿಮಾ ಮಾಡಿದರೂ ಸಣ್ಣ ಪುಟ್ಟ ತಪ್ಪುಗಳು ಆಗುತ್ತದೆ. ಅದೇ ರೀತಿ 'ಕುರುಕ್ಷೇತ್ರ' ಸಿನಿಮಾದಲ್ಲಿ ಕೂಡ ಅನೇಕ ಒಳ್ಳೆಯ ಅಂಶಗಳನ್ನು ಹೊಂದಿದ್ದರೂ, ಕೆಲವು ಅಂಶಗಳು ಬೇಸರ ಉಂಟು ಮಾಡುತ್ತದೆ.
ಖುಷಿಯ ವಿಷಯ ಏನೆಂದರೆ, ಸಿನಿಮಾದಲ್ಲಿ ಮೈನಸ್ ಪಾಯಿಂಟ್ಸ್ ಗಳಿಗಿಂತ, ಪ್ಲಸ್ ಪಾಯಿಂಟ್ಸ್ ಗಳೆ ಹೆಚ್ಚಾಗಿವೆ. ಕಲಾವಿದರ ನಟನೆ ಮತ್ತು ನಿರ್ಮಾಪಕರ ಸಾಹಸ ಸಿನಿಮಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ.

ಪ್ಲಸ್ : ದುರ್ಯೋಧನ ಅಂದ್ರೆ ದರ್ಶನ್
'ಕುರುಕ್ಷೇತ್ರ' ಸಿನಿಮಾ ನೋಡಿದ ಮೇಲೆ ಅನೇಕರು ದರ್ಶನ್ ಬದಲಿಗೆ ಬೇರೆ ಯಾರನ್ನು ದುರ್ಯೋಧನ ಪಾತ್ರದಲ್ಲಿ ಊಹಿಸಲು ಸಾಧ್ಯ ಇಲ್ಲ. ಆ ಮಟ್ಟಿಗೆ ದರ್ಶನ್ ದುರ್ಯೋಧನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ನಟನೆ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ದರ್ಶನ್ ಇಲ್ಲಿ ಒಬ್ಬ ಸ್ಟಾರ್ ಎನ್ನುವುದಕ್ಕಿಂತ, ಒಂದು ಪಾತ್ರವಾಗಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಕಲಾವಿದರ ನಟನೆಯೇ ಹೈಲೈಟ್
'ಕುರುಕ್ಷೇತ್ರ'ದ ಮಹಾ ಪಾತ್ರಗಳಿಗೆ ಬಹುತೇಕ ಎಲ್ಲ ಕಲಾವಿದರೂ ನ್ಯಾಯ ಒದಗಿಸಿದ್ದಾರೆ. ಅದರಲ್ಲಿಯೂ ಅರ್ಜುನ್ ಸರ್ಜಾ ಕರ್ಣನಾಗಿ, ಕೃಷ್ಣನಾಗಿ ರವಿಚಂದ್ರನ್, ಬೀಷ್ಮ ಅಂಬರೀಶ್, ಶಕುನಿ ರವಿಶಂಕರ್, ಯುದ್ಧದ ಸನ್ನಿವೇಶಗಳಲ್ಲಿ ನಿಖಿಲ್ ಕುಮಾರ್ ಸಾಹಸ ಸಿನಿಮಾ ಪ್ರಮುಖ ಅಂಶಗಳಾಗಿದೆ. ಈ ಕಲಾವಿದರ ಅನುಭವ ಸಿನಿಮಾ ಸಹಾಯ ಆಗಿದೆ.

ಇದು ನಿರ್ಮಾಪಕನ ಸಿನಿಮಾ
ಕೆಲವು ಚಿತ್ರಗಳು ನಟರ ಸಿನಿಮಾಗಳಾದರೆ, ಇನ್ನು ಕೆಲವು ನಿರ್ದೇಶಕರ ಸಿನಿಮಾ ಆಗಿರುತ್ತದೆ. ಆದರೆ, 'ಕುರುಕ್ಷೇತ್ರ' ಸಿನಿಮಾ ಪಕ್ಕಾ ನಿರ್ಮಾಪಕರ ಸಿನಿಮಾ, ಅಷ್ಟೊಂದು ಕಲಾವಿದರನ್ನು ಸೇರಿಸಿ, ಅಷ್ಟೊಂದು ದೊಡ್ಡ ಸಿನಿಮಾ ಮಾಡಿರುವ ಮುನಿರತ್ನ ಸಾಹಸ ಮೆಚ್ಚಬೇಕು. ಚಿತ್ರಕ್ಕೆ ಬೇಕಾದ ಅದ್ದೂರಿ ತನ, ಶ್ರೀಮಂತಿಕೆ ಅವರು ಒದಗಿಸಿದ್ದಾರೆ.

ಕ್ಯಾಮರಾ, ಸಂಗೀತ, ಗ್ರಾಫಿಕ್ಸ್
ಸಿನಿಮಾದ ಮೇಕಿಂಗ್, ಜಯ್ ವಿನ್ಸೆಂಟ್ ಕ್ಯಾಮರಾ ವರ್ಕ್ ತುಂಬ ಚೆನ್ನಾಗಿದೆ. ಹರಿಕೃಷ್ಣ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. ಹಾಡುಗಳ ಜೊತೆಗೆ ಹಿನ್ನಲೆ ಸಂಗೀತ ಚಿತ್ರದ ಪವರ್ ಹೆಚ್ಚು ಮಾಡಿದೆ. ಕನ್ನಡದಲ್ಲಿ ಈ ಹಿಂದೆ ಯಾವ ಸಿನಿಮಾಗೂ ಈ ಮಟ್ಟಿಗೆ ಗ್ರಾಫಿಕ್ಸ್ ಕೆಲಸ ಮಾಡಿಲ್ಲ ಅನಿಸುತ್ತದೆ.

ಮೈನಸ್ : ಕೆಲವು ಕಡೆ ಕಿರಿಕಿರಿ ಎನ್ನಿಸುವ 3D
ಸಿನಿಮಾ 3D ವರ್ಷನ್ ಚೆನ್ನಾಗಿದೆ. ಆದರೆ, ಕೆಲವೊಂದು ದೃಶ್ಯಗಳಲ್ಲಿ ಇನ್ನು ಸರಿಯಾದ ಗ್ರಾಫಿಕ್ಸ್ ಕೆಲಸ ಆಗಬೇಕಾಗಿತ್ತು. 2D ಗಿಂತ 3D ವರ್ಷನ್ ಗಳೆ ಎಲ್ಲ ಕಡೆ ಬಿಡುಗಡೆ ಆಗಿದೆ. ಹೀಗಾಗಿ, ಕೆಲವು ಸಿಂಗಲ್ ಸ್ಕ್ರೀನ್ ಗಳಲ್ಲಿ 3D ಅಷ್ಟೊಂದು ಪರಿಣಾಮಕಾರಿ ಎನಿಸುವುದಿಲ್ಲ. ಇದೆಲ್ಲ ಸಿನಿಮಾದ ಮೇಲೆ ಪರಿಣಾಮ ಬೀಳುತ್ತದೆ. ಇನ್ನೊಂದು ಕಡೆ 2D ಯಲ್ಲಿಯೇ ಸಿನಿಮಾ ಇನ್ನಷ್ಟು ಆಪ್ತ ಆಗುತ್ತದೆ.

ಅನಗತ್ಯ ಎನಿಸುವ ನಿಖಿಲ್ ಹಾಡು
ಸಿನಿಮಾದ ಕೆಲವು ಅಂಶಗಳು ಅನಗತ್ಯ ಅನಿಸುತ್ತದೆ. ಅದರಲ್ಲಿಯೂ ನಟ ನಿಖಿಲ್ ಕುಮಾರ್ ಹಾಡು ಬೇಕಿತ್ತಾ ಎಂಬ ಪ್ರಶ್ನೆ ಬರುತ್ತದೆ. ಸೆಕೆಂಡ್ ಹಾಫ್ ನಲ್ಲಿ ಒಂದು ಹಾಡು ಇರಲಿ ಎಂಬ ಕಾರಣಕ್ಕೆ ಅಭಿಮನ್ಯು ಹಾಡನ್ನು ಹಾಕಿದ ಹಾಗಿದೆ. ನಿಖಿಲ್ ಬಾಯಿನಲ್ಲಿ ಬರುವ ಕೆಲ ಸಂಭಾಷಣೆಗಳೂ ಓವರ್ ಅನಿಸುತ್ತದೆ. ಇದರಿಂದ ಗಂಭೀರ ಮಾತುಗಳಿಗೂ ಜನ ನಗುತ್ತಾರೆ.

ಕನ್ನಡದ ಕಲಾವಿದರು ಇರಬೇಕಿತ್ತು
ಸಿನಿಮಾದಲ್ಲಿ ಕೆಲವು ಪರಭಾಷೆಯ ಕಲಾವಿದರು ನಟಿಸಿದ್ದಾರೆ. ಆದರೆ, ಆ ಪಾತ್ರಗಳಿಗೆ ಕನ್ನಡದ ನಟರೆ ಇದ್ದಿದ್ದರೆ, ಆ ಪಾತ್ರ ಇನ್ನಷ್ಟು ಹತ್ತಿರ ಆಗುತ್ತಿತ್ತು. ಅರ್ಜುನ ಪಾತ್ರದಲ್ಲಿ ಸೋನು ಸೂದ್ ತಮ್ಮ ಪಾತ್ರವನ್ನು ಸರಿಯಾಗಿ ಬಳಸಿಕೊಂಡಿಲ್ಲ. ದುಶ್ಯಾಸನ ಸೇರಿದಂತೆ ಕೆಲವು ಪಾತ್ರಗಳ ಕಲಾವಿದರಲ್ಲಿ ಅನುಭವದ ಕೊರತೆ ಕಾಣುತ್ತಿದೆ. ಅಲ್ಲಲ್ಲಿ ಕೆಲ ಕಲಾವಿದರ ಉಚ್ಚಾರಣೆ ತಪ್ಪಾಗಿ ಆಗಿದೆ.

ಬೇರೆ ಸಿನಿಮಾಗಳಿಗೆ ಹೋಲಿಕೆ ಮಾಡಬೇಡಿ
'ಕುರುಕ್ಷೇತ್ರ' ಚಿತ್ರ ಟೆಕ್ನಿಕಲಿ ಚೆನ್ನಾಗಿದೆ ಇದೆ. ಆದರೆ, ಬೇರೆ ಭಾಷೆಯ ದೊಡ್ಡ ಸಿನಿಮಾಗೆ ಹೋಲಿಕೆ ಮಾಡಿದರೆ, ಇನ್ನಷ್ಟು ಸುಧಾರಿಸಬೇಕು. ಆದರೆ, ಕನ್ನಡದ ಮಟ್ಟಿಗೆ ಇದೊಂದು ದೊಡ್ಡ ಸಾಹಸ. ಮುಂಚೆಯೇ ಹೇಳಿದ ಹಾಗೆ, 'ಕುರುಕ್ಷೇತ್ರ'ದಲ್ಲಿ ತಪ್ಪುಗಳು ಕಡಿಮೆ, ಮೆಚ್ಚಿಕೊಳ್ಳಬೇಕಾದ ಅಂಶಗಳೆ ಹೆಚ್ಚಿವೆ.


Click it and Unblock the Notifications











