'ವಿಷ್ಣು ಸ್ಮಾರಕ' ನಿರ್ಮಾಣಕ್ಕೆ ಮೈಸೂರಿನಲ್ಲೂ ಭೂ-ವಿವಾದ
ದಿವಂಗತ ನಟ ಡಾ.ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣಕ್ಕೆ ಹಲವು ವಿಘ್ನಗಳು ಎದುರಾಗುತ್ತಲೇ ಇದೆ. ಒಂದರ ಹಿಂದೆ ಮತ್ತೊಂದರಂತೆ ವಿವಾದಗಳು ವಿಷ್ಣು ಸ್ಮಾರಕವನ್ನ ಬೆನ್ನತ್ತುತಲೇ ಇದೆ.
ಇತ್ತೀಚೆಗಷ್ಟೇ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ಅವರು, ಡಿಸೆಂಬರ್ 6ರಂದು ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದ್ದು, ಮುಖ್ಯ ಮಂತ್ರಿಗಳು ಶಿಲಾನ್ಯಾಸ ಮಾಡಲಿದ್ದಾರೆ ಎಂದು ಸ್ವಷ್ಟಪಡಿಸಿದ್ದರು. ಆದ್ರೆ, ಶಿಲಾನ್ಯಾಸ ಮಾಡುವ ಮುಂಚೆನೆ ವಿಷ್ಣು ಸ್ಮಾರಕಕ್ಕೆ ಮತ್ತೊಂದು ಭೂ ಕಂಟಕ ಎದುರಾಗಿದೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಬಾಲಕೃಷ್ಣ ಕುಟುಂಬದವರ ಆಂತರಿಕ ಸಮಸ್ಯೆಯಿಂದ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಇನ್ನೂ ಅಭಿಮಾನ್ ಸ್ಟುಡಿಯೋ ಪಕ್ಕದಲ್ಲೇ ಮತ್ತೊಂದು ಜಾಗವನ್ನ ಸೂಚಿಸಿದ ಸರ್ಕಾರ, ಅದು ಅರಣ್ಯ ಪ್ರದೇಶ ಎಂಬ ಕಾರಣಕ್ಕೆ ಅಲ್ಲಿಯೂ ಸ್ಮಾರಕ ನಿರ್ಮಾಣ ಆಗಲೇ ಇಲ್ಲ.[ಡಿಸೆಂಬರ್ 6 ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಶಿಲಾನ್ಯಾಸ]
ಈ ಸಮಸ್ಯೆಗಳೇ ಬೇಡ ಅಂತ ನಟಿ ಭಾರತಿ ವಿಷ್ಣುವರ್ಧನ್ ಅವರು, ಸ್ಮಾರಕವನ್ನ ಮೈಸೂರಿಗೆ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದ ಪರಿಣಾಮ, ಸರ್ಕಾರ ಕೂಡ ಒಪ್ಪಿಗೆ ನೀಡಿ, ಮೈಸೂರಿನಲ್ಲಿ ಸ್ಮಾರಕ ಶಿಲಾನ್ಯಾಸಕ್ಕೆ ದಿನಾಂಕ ಕೂಡ ನಿಗದಿ ಮಾಡಿದೆ. ಈ ಮಧ್ಯೆ ಮೈಸೂರಿನಲ್ಲಿ ಸೂಚಿಸಿರುವ ಜಾಗಕ್ಕೂ ಭೂ-ವಿವಾದ ಅಂಟಿಕೊಂಡಿದ್ದು, ವಿಷ್ಣು ಸ್ಮಾರಕ ಮತ್ತೆ ಕಗ್ಗಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಂದೆ ಓದಿ.....

ವಿಷ್ಣು ಸ್ಮಾರಕಕ್ಕೆ ಮೈಸೂರಿನಲ್ಲೂ ಅಡ್ಡಿ
ಸತತ ಸಮಸ್ಯೆಗಳಿಂದ ಕಂಗೆಟ್ಟಿದ್ದ ಭಾರತಿ ವಿಷ್ಣುವರ್ಧನ್ ಹಾಗೂ ಅವರ ಕುಟುಂಬ ವರ್ಗದವರು, ವಿಷ್ಣು ಸ್ಮಾರಕವನ್ನ ಮೈಸೂರಿನಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದರು. ಆದ್ರೆ, ಈಗ ಅಲ್ಲಿಯೂ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ.

ಸ್ಮಾರಕ ಜಾಗಕ್ಕೆ ಭೂ-ವಿವಾದ
ವಿಷ್ಣು ಸ್ಮಾರಕಕ್ಕಾಗಿ ಮೈಸೂರಿನ ಇಲವಾಲದಲ್ಲಿ ಸರ್ಕಾರ ಸೂಚಿಸಿರುವ 5 ಎಕೆರೆ ಜಾಗ, ಈಗ ಭೂ ವಿವಾದಕ್ಕೆ ಸಿಲುಕಿದೆ. ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಸೂಚಿಸಿದ್ದ, ಭೂಮಿಯನ್ನ ಸ್ಮಾರಕ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಕೊಡಲ್ಲ ಎಂದು ಭೂಮಿಯ ಮಾಲೀಕರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಭೂ ಮಾಲೀಕನ ಬಳಿ ದಾಖಲೆ ಇದೆ
1932ರ ದಾಖಲೆಗಳ ಪ್ರಕಾರ ಹಾಲಿ ಸಾಗುವಳಿ ಮಾಡುತ್ತಿರುವ ಹನುಮನಾಯಕ ಅವರ ಹೆಸರಿನಲ್ಲಿ 6.19 ಎಕರೆ ಜಮೀನಿದ್ದು, ಇದಕ್ಕೆ ಪೂರಕವಾಗಿ 1970 ರಿಂದ ಕಂದಾಯ ಪಾವತಿಸಿರುವ ದಾಖಲೆಯೂ ಇದೆ. ಬರವಣಿಗೆಯ ಫಸಲು ಪಹಣಿ, ಇವರೇ ಭೂ ಮಾಲಿಕರು ಎಂದು ಪರಿಗಣಿಸಿ ಅರಣ್ಯ ಇಲಾಖೆ ಸಸಿಗಳನ್ನು ನೀಡಿದೆ. ಈಗ ಸರ್ಕಾರ ಇವರ ಜಮೀನಿಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ನಿಗದಿಪಡಿಸಿದೆ ಎನ್ನಲಾಗಿದೆ.

ಭೂ ಮಾಲೀಕರ ಅಳಲು
''ನಮ್ಮ ತಾತನ ಕಾಲದಿಂದಲೂ ಈ ಜಮೀನು ಉಳುಮೆ ಮಾಡುತ್ತಾ ಬಂದಿದ್ದು, ಇದೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಈಗ ಇಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ನಮ್ಮ ಕುಟುಂಬದವರನ್ನು ಸಮಾಧಿ ಮಾಡಲು ಸರ್ಕಾರ ಮುಂದಾಗಿದೆ. ನಮ್ಮ ಬದುಕು ಕಸಿದುಕೊಳ್ಳಲು ಬಿಡುವುದಿಲ್ಲ. ಸ್ಮಾರಕಕ್ಕೆ ಬೇರೆ ಜಾಗ ನೀಡಲಿ. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎನ್ನುತ್ತಿದ್ದಾರೆ ಹನುಮನಾಯಕರ ಮೊಮ್ಮಗ''.

ಇದು ಸರ್ಕಾರದ ಗಮನಕ್ಕೆ ಬರಲಿಲ್ಲವೇ!
ಸ್ಮಾರಕ ನಿರ್ಮಾಣಕ್ಕಾಗಿ ಹಲವು ತಿಂಗಳುಗಳ ಮುಂಚೆಯೇ ಆ ಜಾಗವನ್ನ ಸರ್ಕಾರ ಸೂಚಿಸಿದೆ. ಆದ್ರೆ, ಆ ಜಾಗದ ಬಗ್ಗೆ ಇದುವರೆಗೂ ಜಿಲ್ಲಾಡಳಿತ ದಾಖಲೆಗಳ ಪರಿಶೀಲನೆ ಮಾಡಲಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಿ.ರಂದೀಪ್, ದಾಖಲೆ ಪ್ರಕಾರ ಹಾಲಾಳು ಸರ್ವೆ ನಂ.8ರಲ್ಲಿ ಖರಾಬು ಎಂದು ಗುರುತಿಸಿರುವ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲು ಪ್ರಕ್ರಿಯೆ ಆರಂಭಗೊಂಡಿದೆ. ಅವರು ಅನುಭೋಗದಲ್ಲಿರುವ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

ಮುಂದೆ ಏನು?
ಭೂ ಮಾಲೀಕರು ಎಂದು ಹೇಳಲಾಗುತ್ತಿರುವ ಅನುಭೋಗದಾರರು ಸ್ಮಾರಕ ನಿರ್ಮಾಣವನ್ನ ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಡಿಸೆಂಬರ್ 6 ರಂದು ಮುಖ್ಯಮಂತ್ರಿಗಳು ಸ್ಮಾರಕ ನಿರ್ಮಾಣಕ್ಕೆ ನಿಗಿದಿಪಡಿಸಿರುವ ಜಾಗದಲ್ಲಿ ಶಿಲಾನ್ಯಾಸ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ, ವಿಷ್ಣು ಸ್ಮಾರಕ ಕಾರ್ಯ ಯಾವುದೇ ಅಡ್ಡಿ, ಆತಂಕವಿಲ್ಲದೆ ನೆರವೇರುತ್ತ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.


Click it and Unblock the Notifications











