ವಿಷ್ಣುವರ್ಧನ್ ಸ್ಮಾರಕ ಡಿಸೆಂಬರ್ 17ಕ್ಕೆ ಲೋಕಾರ್ಪಣೆ: ವಿಶೇಷತೆ ಏನು ಗೊತ್ತೆ?
ಹಲವು ಎಡರು-ತೊಡರುಗಳ ಬಳಿಕ ಕೊನೆಗೂ ದಿವಂಗತ ನಟ ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ.
ಮೈಸೂರಿನಲ್ಲಿ ಐದು ಎಕರೆ ಜಾಗದಲ್ಲಿ ನಿರ್ಮಿಸಲಾಗಿರುವ ವಿಷ್ಣುವರ್ಧನ್ ಸ್ಮಾರಕ ಡಿಸೆಂಬರ್ 17 ರಂದು ಲೋಕಾರ್ಪಣೆಗೊಳ್ಳಲಿದೆ. ಹಲವು ವಿಶೇಷ ಕಾರ್ಯಕ್ರಮಗಳನ್ನು ಅಂದಿನ ದಿನ ಹಮ್ಮಿಕೊಳ್ಳಲಾಗಿದೆ.
ಲೋಕಾರ್ಪಣೆ ಕಾರ್ಯಕ್ರಮ ಹಾಗೂ ವಿಷ್ಣುವರ್ಧನ್ ಸ್ಮಾರಕದ ವಿಶೇಷತೆಗಳ ಬಗ್ಗೆ ಫಿಲ್ಮಿಬೀಟ್ ಕನ್ನಡದೊಂದಿಗೆ ಮಾತನಾಡಿರುವ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್, ಡಿಸೆಂಬರ್ 17 ರಂದು ಸಿಎಂ ಬಸವರಾಜ ಬೊಮ್ಮಾಯಿಯವರು ಸ್ಮಾರಕದ ಲೋಕಾರ್ಪಣೆ ಮಾಡಲಿದ್ದಾರೆ ಎಂದಿದ್ದಾರೆ.

ಆ ದಿನ ಪೂಜಾ ಕಾರ್ಯಕ್ರಮದ ಜೊತೆಗೆ ಹಲವು ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಭಿಮಾನಿಗಳೇ ಆಯೋಜಿಸಿರುವ ಹಲವು ಕಾರ್ಯಕ್ರಮಗಳು ಅಂದು ನಡೆಯಲಿವೆ. ಅಂದು ಇಡೀ ದಿನ ಅಭಿಮಾನಿಗಳೊಟ್ಟಿಗೆ ವಿಷ್ಣುವರ್ಧನ್ ಕುಟುಂಬ ಸಮಯ ಕಳೆಯಲಿದೆ ಎಂದಿದ್ದಾರೆ ಅನಿರುದ್ಧ್.
ಮೈಸೂರು ತಾಲ್ಲೂಕು ಹಾಲಾಳು ಗ್ರಾಮದ ಬಳಿ ಸುಮಾರು 5 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ. ಸ್ಮಾರಕ ನಿರ್ಮಾಣಕ್ಕೆ 11 ಕೋಟಿ ಹಣ ಖರ್ಚು ಮಾಡಲಾಗಿದೆ. ವಿಷ್ಣುವರ್ಧನ್ ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ ಸುಮಾರು 600 ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ವಿಷ್ಣುವರ್ಧನ್ ಬಳಸಿದ್ದ ವಿಭೂತಿ ಬಳಸಿ ಅವರ 20 ಅಡಿ ಎತ್ತರದ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ. ವಿಷ್ಣುವರ್ಧನ್ ಬಳಸುತ್ತಿದ್ದ ಟೋಪಿ, ಕೈ ಕಡಗ, ಓದುತ್ತಿದ್ದ ಪುಸ್ತಕಗಳು, ಅವರ ಸಿನಿಮಾದ ಛಾಯಾಚಿತ್ರಗಳು, ವಿಡಿಯೋ ತುಣುಕುಗಳು ಇನ್ನಿತರ ವಸ್ತುಗಳನ್ನು ಒಳಗೊಂಡ ಸಂಗ್ರಹಾಲಯವೊಂದನ್ನು ಸ್ಥಾಪಿಸಲಾಗಿದೆ.
ಸಿನಿಮಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರಕದ ಒಳಗೆ ಎರಡು ತರಬೇತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ನಾಟಕ, ಸಿನಿಮಾ ಪ್ರದರ್ಶನಕ್ಕೆ ಅನುವಾಗಲೆಂದು ಒಂದು ಆಡಿಟೋರಿಯಮ್, ವಿಶ್ರಾಂತಿ ಗೃಹ, ಒಂದು ಕ್ಯಾಂಟೀನ್, ಶೌಚಾಲಯ ನಿರ್ಮಿಸಲಾಗಿದೆ. ಐದು ಎಕರೆ ಜಾಗಕ್ಕೆ ಕಾಂಪೌಂಡ್ ಅಳವಡಿಸಲಾಗಿದ್ದು, ಕುಡಿಯುವ ನೀರು ಹಾಗೂ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಸಹ ಮಾಡಲಾಗಿದೆ.
ಇನ್ನುಳಿದ ಜಾಗದಲ್ಲಿ ಪುಣೆಯ ಎಫ್ಟಿಐಐಯ ಬ್ರ್ಯಾಂಚ್ ಮಾಡಲು ಪ್ರಯತ್ನಗಳು ನಡೆದಿವೆ. ಅದು ಸಾಕರಗೊಂಡರೆ ಸ್ಮಾರಕದ ಉಳಿದ ಜಾಗದಲ್ಲಿ ಪ್ರತಿಷ್ಠಿತ ಸಿನಿಮಾ ಇನ್ಸ್ಟಿಟ್ಯೂಟ್ ನಿರ್ಮಾಣವಾಗಲಿದೆ.
ವಿಷ್ಣುವರ್ಧನ್ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಬೇಕು ಎಂದಾಗಿತ್ತು. ಆದರೆ ಸ್ಟುಡಿಯೋ ಕಾನೂನಾತ್ಮಕ ಸಮಸ್ಯೆಗಳು ಎದುರಾಯಿತು. ಆ ಬಳಿಕ ಕೆಂಗೇರಿಯ ಮೈಲಸಂದ್ರ ಬಳಿ ಸ್ಥಳ ನೀಡಿತು. ಆದರೆ ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದರಿಂದ ಅಲ್ಲಿಯೂ ಕಾನೂನು ಸಮಸ್ಯೆ ಎದುರಾಯಿತು. ಸರ್ಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಿದ ವಿಷ್ಣುವರ್ಧನ್ ಕುಟುಂಬದವರು ಮೈಸೂರಿನಲ್ಲಿ ಸ್ಥಳ ಮಂಜೂರು ಮಾಡಿಸಿಕೊಂಡು ಈಗ ಸ್ಮಾರಕ ನಿರ್ಮಾಣ ಮಾಡಲಾಗಿದೆ. ವಿಷ್ಣುವರ್ಧನ್ ಕುಟುಂಬದವರ ಹಲವು ವರ್ಷದ ಹೋರಾಟದ ಬಳಿಕ ಈಗ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ.


Click it and Unblock the Notifications











