ಗಿರೀಶ್ ಕಾರ್ನಾಡ್ ನಿರ್ದೇಶನದ ಪ್ರಮುಖ ಸಿನಿಮಾಗಳ ಪಟ್ಟಿ
Recommended Video
ಖ್ಯಾತ ಸಾಹಿತಿ, ಮೇರು ನಾಟಕಕಾರ, ಹೆಸರಾಂತ ನಟ, ನಿರ್ದೇಶಕ, ಗಿರೀಶ್ ಕಾರ್ನಾಡ್ ಇಂದು (ಜೂನ್ 10) ವಿಧಿವಶರಾಗಿದ್ದಾರೆ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮತ್ತೊಬ್ಬ ಸಾಹಿತಿ ಇಹಲೋಕ ತ್ಯಜಿಸಿದ್ದಾರೆ.
ಕಾರ್ನಾಡರಿಗೆ ಸಾಹಿತ್ಯ ಹಾಗೂ ನಾಟಕದ ಜೊತೆಗೆ ಸಿನಿಮಾ ಕ್ಷೇತ್ರದ ಬಗ್ಗೆ ಹೆಚ್ಚು ಒಲವು ಇತ್ತು. ತಮ್ಮ ನಾಟಕಗಳನ್ನು ಸಿನಿಮಾ ರೂಪಕ್ಕೆ ತರುವುದರ ಜೊತೆಗೆ ಚಿತ್ರ ನಿರ್ದೇಶನದಲ್ಲಿಯೂ ಗೆದ್ದು ತೋರಿಸಿದರು.
ಗಿರೀಶ್ ಕಾರ್ನಾಡ್ ಅಗಲುವಿಕೆಗೆ ಹಿರಿಯ ಸಾಹಿತಿಗಳ ಸಂತಾಪ
ಸಾಹಸ ಸಿಂಹ ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ಸಿ ಆರ್ ಸಿಂಹ ರಂತಹ ಮೇರು ನಟರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದ ಖ್ಯಾತಿ ಕಾರ್ನಾಡರಿಗೆ ಸಲ್ಲುತ್ತದೆ. ಜೊತೆಗೆ ಕುವೆಂಪು, ತೇಜಸ್ವಿ, ಭೈರಪ್ಪ ನವರ ಕೃತಿಗಳಿಗೆ ದೃಶ್ಯ ರೂಪ ನೀಡಿದವರು ಕೂಡ ಕಾರ್ನಾಡರೇ.
ಅಂದಹಾಗೆ, ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದ ಪ್ರಮುಖ ಸಿನಿಮಾಗಳ ಪಟ್ಟಿ ಹೀಗಿದೆ...

'ವಂಶವೃಕ್ಷ' (1971)
1971 ರಲ್ಲಿ ಬಂದ 'ವಂಶವೃಕ್ಷ' ಸಿನಿಮಾ ಗಿರೀಶ್ ಕಾರ್ನಾಡ್ ಪಾಲಿಗೆ ಮರೆಯದ ಸಿನಿಮಾ. ಯಾಕೆಂದರೆ, ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಈ ಸಿನಿಮಾದ ಮತ್ತೊಂದು ವಿಶೇಷ ನಟ ವಿಷ್ಣುವರ್ಧನ್ ಮೊದಲ ಬಾರಿಗೆ ಕನ್ನಡಿಗರ ಮುಂದೆ ಬಂದಿದ್ದು. ಸಾಹಸ ಸಿಂಹ ವಿಷ್ಣುವರ್ಧನ್ ರಿಗೆ ಮೊದಲು ಈ ಚಿತ್ರದ ಮೂಲಕ ಅವಕಾಶ ನೀಡಿದ್ದು, ಗಿರೀಶ್ ಕಾರ್ನಾಡ್.

ತಬ್ಬಲಿ ನೀನಾದೆ ಮಗನೇ (1977)
'ತಬ್ಬಲಿ ನೀನಾದೆ ಮಗನೇ' ಎಸ್ ಎಲ್ ಭೈರಪ್ಪನವರ ಕಾದಂಬರಿ. ಈ ಕಾದಂಬರಿಯನ್ನು ಆಧಾರವಾಗಿ ಇಟ್ಟುಕೊಂಡು ಗಿರೀಶ್ ಕಾರ್ನಾಡ್ ಸಿನಿಮಾ ಮಾಡಿದ್ದರು. 1977 ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಮತ್ತೊಬ್ಬ ಶ್ರೇಷ್ಠ ನಾಟಕಗಾರ ಬಿ ವಿ ಕಾರಂತ್ ಕೂಡ ಈ ಚಿತ್ರದ ನಿರ್ದೇಶನದಲ್ಲಿ ಕೈ ಜೋಡಿಸಿದ್ದರು. ಬಾಲಿವುಡ್ ನಟ ನಸೀರುದ್ದೀನ್ ಷಾ ಈ ಚಿತ್ರದಲ್ಲಿ ನಟಿಸಿದ್ದರು.

ಒಂದಾನೊಂದು ಕಾಲದಲ್ಲಿ (1978)
'ಒಂದಾನೊಂದು ಕಾಲದಲ್ಲಿ' ಶಂಕರ್ ನಾಗ್ ನಟನೆಯ ಮೊದಲ ಸಿನಿಮಾವಾಗಿತ್ತು. ಗಿರೀಶ್ ಕಾರ್ನಾಡ್ ನಿರ್ದೇಶನದ ಬೆಸ್ಟ್ ಚಿತ್ರಗಳ ಪೈಕಿ ಇದು ಕೂಡ ಒಂದಾಗಿತ್ತು. ಖ್ಯಾತ ಗಾಯಕಿ ಕವಿತಾ ಕೃಷ್ಣಮೂರ್ತಿ ಕೆರಿಯರ್ ಸಹ ಈ ಚಿತ್ರದ ಮೂಲಕವೇ ಶುರು ಆಗಿತ್ತು. 1978 ರಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಿದೆ.

ಕಾನೂರು ಹೆಗ್ಗಡತಿ (1999)
ಕುವೆಂಪು ರವರ 'ಕಾನೂರು ಸುಬ್ಬಮ್ಮ ಹೆಗ್ಗಡತಿ' ಕಾದಂಬರಿಗೆ ಸಿನಿಮಾ ರೂಪ ನೀಡಿದವರು ಸಹ ಕಾರ್ನಾಡರೆ. ಈ ಚಿತ್ರದ ನಿರ್ದೇಶನ ಜೊತೆಗೆ ಚಂದ್ರೇ ಗೌಡ ಪಾತ್ರದಲ್ಲಿಯೂ ಅವರು ನಟಿಸಿದ್ದರು. ಸುಬ್ಬಮ್ಮನಾಗಿ ತಾರ ಕಾಣಿಸಿಕೊಂಡಿದ್ದರು. ಈ ಚಿತ್ರ 1999 ರಲ್ಲಿ ಬಿಡುಗಡೆಯಾಗಿತ್ತು.

ಕಾಡು (1973)
'ಕಾಡು' ಸಿನಿಮಾವನ್ನು ಗಿರೀಶ್ ಕಾರ್ನಾಡ್ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದರು. 1973 ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ರಾಷ್ಟ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿ ಬಂದವು. ಮಾಸ್ಟರ್ ಜಿ ಎಸ್ ನಟರಾಜ್ ಸಿನಿಮಾದಲ್ಲಿ ನಟಿಸಿದ್ದರು.

'ಚಿದಂಬರ ರಹಸ್ಯ' ಧಾರಾವಾಹಿ
ಸಾಹಿತಿ ಪೂರ್ಣಚಂದ್ರ ತೇಜಸ್ವಿ ರವರ 'ಚಿದಂಬರ ರಹಸ್ಯ' ಕಾದಂಬರಿಯನ್ನು ಕಾರ್ನಾಡರು ದೃಶ್ಯ ರೂಪಕ್ಕೆ ತಂದರು. 'ಚಿದಂಬರ ರಹಸ್ಯ' ಧಾರಾವಾಹಿ ನಿರ್ದೇಶನ ಮಾಡುವ ಮೂಲಕ ಮನೆ ಮನೆಗೆ ಈ ಕಥೆಯನ್ನು ತಲುಪಿಸಿದರು. ದೂರದರ್ಶನದಲ್ಲಿ ಈ ಧಾರಾವಾಹಿ ಪ್ರಸಾರ ಆಗುತ್ತಿತ್ತು.

ಹಿಂದಿ ಸಿನಿಮಾಗಳ ನಿರ್ದೇಶನ
ಹಿಂದಿ ಚಿತ್ರರಂಗದ ಜೊತೆಗೆ ಗಿರೀಶ್ ಕಾರ್ನಾಡರಿಗೆ ಒಳ್ಳೆಯ ನಂಟು ಇತ್ತು. ಆ ಕಾಲದಲ್ಲಿಯೇ ಅವರು ಬಾಲಿವುಡ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ಗೋಧೂಳಿ, ಉತ್ಸವ್, ಚೆಲುವಿ (ಡಬ್) ಅವರ ನಿರ್ದೇಶಕದ ಪ್ರಮುಖ ಹಿಂದಿ ಸಿನಿಮಾಗಳು. 'ಉತ್ಸವ್' ಸಿನಿಮಾವನ್ನು ಶಶಿ ಕಪೂರ್ ನಿರ್ಮಾಣ ಮಾಡಿದ್ದರು. ಶಂಕರ್ ನಾಗ್ ಈ ಚಿತ್ರದ ನಾಯಕನಾಗಿದ್ದರು.


Click it and Unblock the Notifications











