ಕಿಟ್ಟಿ ಜತೆ ಲೂಸಿಯಾ ಗರ್ಲ್ ಶ್ರುತಿ ಸವಾರಿ
ನಿರ್ದೇಶಕ ಪವನ್ ಕುಮಾರ್ ಅವರ ಲೂಸಿಯಾ ಚಿತ್ರದ ಹೊಸ ಪ್ರತಿಭೆ ಶ್ರುತಿ ಹರಿಹರನ್ ಅವರ ಸ್ಯಾಂಡಲ್ ವುಡ್ ಸವಾರಿ ನಿಧಾನಗತಿಯಲ್ಲಿ ಸಾಗಿದೆ. ಲೂಸಿಯಾ ಭರ್ಜರಿ ಯಶಸ್ಸಿನ ನಂತರ ನರ್ತನಪಟು ಶ್ರುತಿಗೆ ಭರಪೂರ ಅವಕಾಶಗಳು ಬರುತ್ತವೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಶ್ರುತಿ ಆಫರ್ ಗಳನ್ನು ಅಳೆದು ತೂಗಿ ಒಪ್ಪಿಕೊಳ್ಳುವುದರಿಂದ ಈಗ ಕೊನೆಗೂ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟುಹಾಕಿದ ನಿರ್ದೇಶಕ ಜೇಕಬ್ ವರ್ಗೀಸ್ ಅವರ ನಿರ್ಮಾಣ ಕಮ್ ನಿರ್ದೇಶನದ ಹೊಸ ಚಿತ್ರ ಸವಾರಿ -2ಗೆ ಶ್ರುತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸವಾರಿ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿದ್ದರೆ, ಅಬ್ಬಾಸ್, ಗಿರೀಶ್ ಕಾರ್ನಾಡ್, ಸಾಧು ಕೋಕಿಲ, ಕರಣ್ ರಾವ್ ಮುಂತಾದವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಸದ್ದು ಮಾಡಿತ್ತು.
ಈ ಚಿತ್ರ ಸವಾರಿ ಚಿತ್ರದ ಭಾಗ 2 ಅಲ್ಲವಂತೆ. ಇದು ಬೇರೆ ಕಥೆ ಹೊಂದಿದೆ ಎನ್ನುತ್ತಾರೆ ಬಹುಪರಾಕ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಕಿಟ್ಟಿ. ರಮ್ಯಾ ಜತೆ ಎಂದೆಂದಿಗೂ ಚಿತ್ರ ಹಳ್ಳ ಹಿಡಿದ ಮೇಲೆ ಪಾರೂ w/o ದೇವದಾಸ್, ಅಣಜಿ ನಾಗರಾಜ್ ಅವರ ಒಂದು ಚಿತ್ರ, ಪ್ರವೀಣ್ ನಾಯಕ್ ನಿರ್ದೇಶನದ ಶಂಕರ ಚಿತ್ರ ಕಿಟ್ಟಿ ಕೈಲಿದೆ.

ಲೂಸಿಯಾ ನಂತರ ದ್ಯಾವ್ರೇಯಲ್ಲಿ ಕಾಣಿಸಿಕೊಂಡಿದ್ದ ಶ್ರುತಿಗೆ ರಾಟೆ ಚಿತ್ರದಲ್ಲಿ ಒಳ್ಳೆ ಪಾತ್ರವಿದೆಯಂತೆ. ಈ ನಡುವೆ ತಮಿಳು ಚಿತ್ರವೊಂದರ ಕರೆ ಬಂದಿತ್ತು. ಆದರೆ, ಯಾಕೋ ಪ್ರಾಜೆಕ್ಟ್ ಮುಂದುವರೆಯದೆ ವಿಳಂಬವಾಗಿದೆ. ಈ ನಡುವೆ ಜೇಕಬ್ ಅವರು ನನಗೆ ಸವಾರಿ 2 ಕಥೆ ಹೇಳಿದರು. ಜೇಕಬ್ ಅವರಂಥ ಪ್ರತಿಭಾವಂತ ಚಿತ್ರದಲ್ಲಿ ನಟಿಸುವ ಅವಕಾಶ ತಪ್ಪಿಸಿಕೊಳ್ಳಲು ಸಾಧ್ಯವೇ, ಹಾಗಾಗಿ ತಕ್ಷಣವೇ ಒಪ್ಪಿಕೊಂಡೆ ಎಂದು ಶ್ರುತಿ ಹೇಳಿದ್ದಾರೆ.
ಸವಾರಿ ಕಥೆ ಎಲ್ಲಿ ಮುಗಿಯುತ್ತೋ ಅಲ್ಲಿಂದ ಸವಾರಿ 2 ಆರಂಭವಾಗುತ್ತದಂತೆ ಹೀಗಾಗಿ ಇದು ಸಂಪೂರ್ಣ ಹೊಸ ಕಥೆ ಎಂದಿದ್ದಾರೆ. ನನ್ನ ಪಾತ್ರದ ಬಗ್ಗೆ ಈಗಲೇ ಹೇಳಲಾರೆ. ಶ್ರೀನಗರ ಕಿಟ್ಟಿ ಅವರ ಜತೆ ನಟಿಸುತ್ತಿರುವುದು ಥ್ರಿಲ್ಲಿಂಗ್ ಆಗಿದೆ ಎಂದು ಶ್ರುತಿ ಖುಷಿಯಿಂದ ಕಣ್ಣು ಮಿಟುಕಿಸಿದ್ದಾರೆ.
ಇತ್ತ ಭಾರತದ ಚಿತ್ರರಂಗವನ್ನು ಸೂಜಿಗಲ್ಲಿನಂತೆ ಸೆಳೆದಿದ್ದಷ್ಟೇ ಅಲ್ಲದೇ, ಬಾಲಿವುಡ್ ಮಂದಿ ಹೀಗೂ ಚಿತ್ರ ಮಾಡಬಹುದಾ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಪ್ರೇಕ್ಷಕರೇ ಪ್ರಭುಗಳು ಎಂಬ ಕಾಲದಲ್ಲಿ ಸಾರ್ವಜನಿಕರೇ ಬಂಡವಾಳ ಹೂಡಿಕೆ ಮಾಡುವ ಮೂಲಕ ಹುಟ್ಟಿಕೊಂಡ ಲೂಸಿಯಾ ಎಂಬ ಕನಸು ಈಗ ತಮಿಳು, ತೆಲುಗು ಚಿತ್ರಗಳಲ್ಲೂ ನನಸಾಗುವ ಸುದ್ದಿ ಜತೆಗೆ ಹಿಂದಿಗೂ ರಿಮೇಕ್ ಆಗುತ್ತಿದೆ.


Click it and Unblock the Notifications











