'ಮದಗಜ' ನಿರ್ದೇಶಕ ಮಹೇಶ್ ಕುಮಾರ್ಗೆ ಸಂತೋಷಂ ಬೆಸ್ಟ್ ಡೈರೆಕ್ಟರ್ ಅವಾರ್ಡ್!
ಕನ್ನಡದ ಯುವ ನಿರ್ದೇಶಕರ ಸಾಲಿನಲ್ಲಿ ಯುವ ನಿರ್ದೇಶಕ ಮಹೇಶ್ ಕುಮಾರ್ ಕೂಡ ಇದ್ದಾರೆ. ಮಹೇಶ್ ಕುಮಾರ್ ನಿರ್ದೇಶಿಸಿದ ಎರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಯಶಸ್ಸಿನ ರುಚಿಯನ್ನು ಸವಿಯುತ್ತಿರುವ ಮಹೇಶ್ ಕುಮಾರ್ ಸದ್ಯ ಮೂರನೇ ಸಿನಿಮಾದ ತಯಾರಿಯಲ್ಲಿದ್ದಾರೆ.
ಮಹೇಶ್ ಕುಮಾರ್ ಕನ್ನಡ ಚಿತ್ರರಂಗದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ಗೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಮೂರನೇ ಸಿನಿಮಾವನ್ನೇ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಮಾಡೋಕೆ ಸಜ್ಜಾಗಿರೋದ್ರಿಂದ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಮಹೇಶ್ ಕುಮಾರ್ಗೆ ಅತ್ಯುತ್ತಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತೆಲುಗು ಚಿತ್ರರಂಗದ ಪ್ರತಿಷ್ಠಿತ ಸಂತೋಷಂ ಸಿನಿಮಾ ಪ್ರಶಸ್ತಿ ಮಹೇಶ್ ಮುಡಿಗೇರಿದೆ. 'ಮದಗಜ' ಸಿನಿಮಾದ ನಿರ್ದೇಶನಕ್ಕಾಗಿ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಯನ್ನು ಮಹೇಶ್ ಬಾಚಿಕೊಂಡಿದ್ದಾರೆ.

ಕನ್ನಡ ಚಿತ್ರಗಳಿಗೆ 'ಸಂತೋಷಂ' ಪ್ರಶಸ್ತಿ
ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ ಸಂಬಂಧಿ ಸಂತೋಷಂ ಸುರೇಶ್ ಎಂಬುವವರು ಆಯೋಚನೆ ಮಾಡುತ್ತಾರೆ. ಕಳೆದ ಎರಡು ದಶಕಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕನ್ನಡ ಸಿನಿಮಾಗಳಿಗೂ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದಾರೆ. " ಸಂತೋಷಂ ಫಿಲ್ಮ್ ಅವಾರ್ಡ್ ಅಂತ 21 ವರ್ಷದಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಮೂರು ವರ್ಷದಿಂದ ಕನ್ನಡದವರೂ ನೀಡುತ್ತಿದ್ದಾರೆ. ಬರೀ ತೆಲುಗು, ತಮಿಳು ಚಿತ್ರರಂಗಕ್ಕೆ ಕೊಡುತ್ತಿದ್ದರು. ಈಗ ಕನ್ನಡದವರನ್ನೂ ಸೇರಿಸಿಕೊಂಡಿದ್ದಾರೆ." ಎನ್ನುತ್ತಾರೆ 'ಮದಗಜ' ಮಹೇಶ್.

ಮಹೇಶ್ಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್
ಮಹೇಶ್ ಕುಮಾರ್ಗೆ 'ಮದಗಜ' ಚಿತ್ರದ ನಿರ್ದೇಶನಕ್ಕಾಗಿ ಸಂತೋಷಂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೌರವಿಸಲಾಗಿದೆ. 'ಅಯೋಗ್ಯ' ಸಿನಿಮಾಗಾಗಿ ಸೈಮಾ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್ ಸಿಕ್ಕಿತ್ತು. ಈಗ ಎರಡನೇ ಪ್ರಶಸ್ತಿ ಮಹೇಶ್ಗೆ ಸಿಕ್ಕಿದೆ. "ಇಲ್ಲಿ ನನಗೆ ಅತ್ಯುತ್ತಮ ನಿರ್ದೇಶಕ ಮದಗಜ. ಹರಿಸಂತುಗೆ 'ಬೈಟು ಲವ್' ಸಿನಿಮಾಗಾಗಿ ಕ್ರಿಟಿಕ್ಸ್ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ, ಶಿವು ಕೆ ಆರ್ ಪೇಟೆಗೆ 'ಬೈಟು ಲವ್' ಸಿನಿಮಾದ ಹಾಸ್ಯ ಪಾತ್ರಕ್ಕಾಗಿ ಬೆಸ್ಟ್ ಕಾಮಿಡಿಯನ್ ಅವಾರ್ಡ್ ಸಿಕ್ಕಿದೆ. ಇಲ್ಲಿ ಕನ್ನಡ ಸಿನಿಮಾ ಮಂದಿಗೆ ಅತೀವ ಗೌರವ ಸಿಗುತ್ತಿದೆ. ಕನ್ನಡಿಗರನ್ನು ಕರೆಸಿ ಮುಂದಿನ ಸಾಲಿನಲ್ಲಿ ಕೂರಿಸಿ ಗೌರವ ನೀಡುತ್ತಿದ್ದಾರೆ." ಎಂದು ಪ್ರಶಸ್ತಿಯ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

ಮೆಗಾ ಕುಟುಂಬದ ಹಾಜರಿ
"ಮೆಗಾಸ್ಟಾರ್ ಚಿರಂಜೀವಿ ಸಂಬಂಧಿಕರಿಂದ ಸಂತೋಷಂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯುತ್ತೆ. ದೊಡ್ಡ ಕಾರ್ಯಕ್ರಮ ಹಾಗೂ ದೊಡ್ಡ ಮಟ್ಟದ ಪ್ರಶಸ್ತಿ ಅಲ್ಲಿ. ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್ ಎಲ್ಲರೂ ಬಂದಿದ್ದರು. ಅವರ ಕುಟುಂಬದವರೆಲ್ಲಾ ಬಂದಿದ್ದರು. ಯಾಕಂದ್ರೆ, ಮೆಗಾ ಕುಟುಂಬದ ಸಂಬಂಧಿಕರೇ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು." ಅಂತಾರೆ ಮಹೇಶ್.

ಅಭಿಷೇಕ್ ಅಂಬರೀಶ್ ಜೊತೆ ಸಿನಿಮಾ
"ಈ ವರ್ಷ ಮುಗೀತು. ಮುಂದಿನ ವರ್ಷ ಇನ್ನೂ 10 ಸಿನಿಮಾಗಳು ಸದ್ದು ಮಾಡುವುದಕ್ಕೆ ರೆಡಿಯಾಗಿದೆ ಎಂದು ವೇದಿಕೆ ಮೇಲೆ ಹೇಳಿ ಬಂದಿದ್ದೀನಿ. ಸದ್ಯ ಅಭಿಷೇಕ್ ಅಂಬರೀಶ್ ಅವರೊಂದಿಗೆ ನನ್ನ ಮುಂದಿನ ಸಿನಿಮಾದ ತಯಾರಿಯಲ್ಲಿದ್ದೇನೆ. ಸದ್ಯ ನಮಗೆ ಬೇರೆ ಚಿತ್ರರಂಗದ ಕಲಾವಿದರೂ ಬೇಕಾಗಿದ್ದಾರೆ. ಅವರ ಡೇಟ್ಗಳನ್ನು ನಾನು ಮ್ಯಾನೇಜ್ ಮಾಡುತ್ತಿದ್ದೇನೆ. ಮುಂದಿನ ವರ್ಷ ಸಿನಿಮಾ ಸೆಟ್ಟೇರುತ್ತೆ." ಎಂದು ಪ್ರಶಸ್ತಿ ಪಡೆದ ಖುಷಿಯಲ್ಲಿ ಮದಗಜ ನಿರ್ದೇಶಕ ಮಹೇಶ್ ಹೇಳಿದ್ದಾರೆ.


Click it and Unblock the Notifications











