'ಕ್ರಾಂತಿ' ಕೆಫೆ ಆರಂಭಿಸಿದ ಬೆಂಗಾಲಿ ಹುಡುಗ: ಈತನ ಆಸೆ ಈಡೇರಿಸುತ್ತಾರಾ ನಟ ದರ್ಶನ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ ಎಷ್ಟು ದೊಡ್ಡದು ಅನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ದೇಶ ವಿದೇಶಗಳಲ್ಲಿ ಬಾಕ್ಸಾಫೀಸ್ ಸುಲ್ತಾನ್ಗೆ ಅಭಿಮಾನಿಗಳಿದ್ದಾರೆ. ಇನ್ನು ಸ್ಯಾಂಡಲ್ವುಡ್ನಲ್ಲಿ ಮಾಸ್ ಫ್ಯಾನ್ ಫಾಲೋಯಿಂಗ್ ಇರುವ ನಟ ಎನ್ನುವ ಖ್ಯಾತಿ ಇದೆ. ಪಶ್ಚಿಮ ಬಂಗಾಳ ಮೂಲದ ದರ್ಶನ್ ಅಭಿಮಾನಿಯೊಬ್ಬರು ನೆಚ್ಚಿನ ನಟನ ಸಿನಿಮಾ ಹೆಸರಲ್ಲೇ ಕೆಫೆ ನಡೆಸುತ್ತಿದ್ದಾರೆ.
ಸಿನಿಮಾಗಿರೋ ಶಕ್ತಿನೇ ಅಂಥಾದ್ದು. ಭಾಷೆ ಗೊತ್ತಿಲ್ಲದವರನ್ನು ಕೂಡ ಸೆಳೆಯುವ ತಾಖತ್ತು ಈ ಮಾಧ್ಯಮಕ್ಕಿದೆ. ಕನ್ನಡ ನಟರಿಗೆ ಹೊರ ದೇಶಗಳಲ್ಲಿ ಹೊರ ರಾಜ್ಯಗಳಲ್ಲಿ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ. ಇನ್ನು ಹೊರ ರಾಜ್ಯಗಳಿಂದ ಸಾಕಷ್ಟು ಜನ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲೇ ನೆಲೆಸಿ ಕನ್ನಡ ಕಲಿತು ವ್ಯವಹರಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಿಂದ 13 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ವಿವೇಕ್ ಎಂಬ ವ್ಯಕ್ತಿ ಈಗ 'ಕ್ರಾಂತಿ ಕೆಫೆ' ಆರಂಭಿಸಿದ್ದಾರೆ. ಸಿನಿಮಾಗಳಲ್ಲಿ ದರ್ಶನ್ ಮಾಸ್ ಡೈಲಾಗ್ಸ್, ಆಕ್ಷನ್, ಆಕ್ಟಿಂಗ್ ನೋಡಿ ದೊಡ್ಡ ಅಭಿಮಾನಿ ಆಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿರುವ ವಿವೇಕ್, ನೆಚ್ಚಿನ ನಟನ ಸಿನಿಮಾ ಟೈಟಲ್ನ ತಮ್ಮ ಹೋಟೆಲ್ಗೆ ಇಟ್ಟಿದ್ದಾರೆ. ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನ ಮುಂಭಾಗದಲ್ಲಿ 'ಕ್ರಾಂತಿ ಕೆಫೆ' ಇದೆ.

ಬೆಂಗಾಲಿ ಹುಡುಗನ ಬಾಯಲ್ಲಿ ದರ್ಶನ್ ಡೈಲಾಗ್
ಇಲ್ಲೇ ಹುಟ್ಟಿ ಬೆಳೆದವರು ಕನ್ನಡ ಮಾತನಾಡಲು ಹಿಂದು ಮುಂದು ನೋಡುತ್ತಾರೆ. ಹಿಂದಿ, ಇಂಗ್ಲೀಷ್ ಮಾತನಾಡುವುದೇ ಹೆಚ್ಚುಗಾರಿಕೆ ಎಂದುಕೊಂಡಿದ್ದಾರೆ. ಇನ್ನು ಹೊರರಾಜ್ಯಗಳಿಂದ ಬಂದು ವರ್ಷಗಳ ಕಾಲ ಇಲ್ಲಿ ನೆಲೆಸಿದ್ದರೂ 'ಕನ್ನಡ್' ಗೊತ್ತಿಲ್ಲ ಎನ್ನುತ್ತಾರೆ. ಆದರೆ ದರ್ಶನ್ ಅಭಿಮಾನಿ ವಿವೇಕ್ ಕನ್ನಡ ಕಲಿತಿದ್ದಾರೆ. ಕನ್ನಡದಲ್ಲಿ ಹೋಟೆಲ್ನಲ್ಲಿ ವ್ಯವಹರಿಸುತ್ತಾರೆ. ಇನ್ನು ದರ್ಶನ್ ನಟನೆಯ 'ಯಜಮಾನ' ಚಿತ್ರದ ಡೈಲಾಗ್ ಕೂಡ ಹೇಳ್ತಾರೆ.

ನೆಚ್ಚಿನ ನಟನನ್ನು ಭೇಟಿ ಮಾಡುವ ಆಸೆ
ಕನ್ನಡ ಕಲಿತಿರುವ ವಿವೇಕ್ಗೆ ದರ್ಶನ್ ಸಿನಿಮಾಗಳು ಅಂದರೆ ಅಚ್ಚು ಮೆಚ್ಚು. "ಡಿ ಬಾಸ್ ಪಿಕ್ಚರ್ ಬರ್ತಿದೆ. ಅವರ ಫ್ಯಾನ್ ನಾನು, ಅವರ ಸಿನಿಮಾಗಳನ್ನು ನೋಡ್ತೀನಿ. ತುಂಬಾ ಇಷ್ಟ. ಅದಕ್ಕೆ ಕೆಫೆಗೆ ಆ ಹೆಸರು ಇಟ್ಟಿದ್ದೀನಿ. ಅವರನ್ನು ಒಮ್ಮೆ ಭೇಟಿ ಮಾಡಿದರೇ ಸಾಕು, ಅವರೊಟ್ಟಿಗೆ ಒಂದು ಫೋಟೊ ಸಿಕ್ಕಿದ್ರೆ ಸಾಕು, ಬೇರೆ ಏನು ಬೇಕಾಗಿಲ್ಲ. ಅವರ ಹೆಸರಿನಲ್ಲಿ ಹೋಟೆಲ್ ನಡೆಸ್ತಿದ್ದೀನಿ, ಅವರು ದೇವರೇ ಆಗಿಬಿಟ್ಟಿದ್ದಾರೆ. ತುಂಬಾ ಚೆನ್ನಾಗಿ ಬ್ಯುಸಿನೆಸ್ ಆಗ್ತಿದೆ. ದರ್ಶನ್ ಫ್ಯಾನ್ಸ್ ಬರ್ತಾರೆ. ಅಷ್ಟು ಸಾಕು"

ನನ್ನಂತ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ
"ದರ್ಶನ್ ಅವ್ರ ಫ್ಯಾನ್ಸ್ ತುಂಬಾ ಬರ್ತಾರೆ. ಅಷ್ಟು ಸಾಕು. ನಾನು ಇನ್ನು ದರ್ಶನ್ ಅವ್ರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಭೇಟಿ ಆಗುವ ಆಸೆ ಇದೆ. ಅವರಿಗೆ ಸಮಯ ಸಿಗೋದಿಲ್ಲ ಅಲ್ವಾ, ನನ್ನನ್ನು ಭೇಟಿ ಮಾಡಲು. ನನ್ನಂಥ ಸಾಕಷ್ಟು ಜನ ಫ್ಯಾನ್ಸ್ ಅವರಿಗೆ ಇದ್ದಾರೆ. ಲಕ್ಷಾಂತರ ಜನ ಫ್ಯಾನ್ಸ್ ಇದ್ದಾರೆ" ಎಂದು ವಿವೇಕ್ ಹೇಳಿದ್ದಾರೆ.

ರಾಜ್ಯೋತ್ಸವಕ್ಕೆ ದರ್ಶನ್ 'ಕ್ರಾಂತಿ'
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಶೈಲಜಾ ನಾಗ್ ಮತ್ತು ಬಿ. ಸುರೇಶ ದಂಪತಿ ನಿರ್ಮಾಣದ ಈ ಚಿತ್ರವನ್ನು ರಾಜ್ಯೋತ್ಸವದ ಸಂಭ್ರಮದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಇನ್ನು ಈಗಾಗಲೇ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡುತ್ತಾ ಬರ್ತಿದ್ದಾರೆ.


Click it and Unblock the Notifications











