ಪೇಪರ್ ದೋಣಿಯಲ್ಲಿ ನವೀನ್ ಕೃಷ್ಣ ವಿಹಾರ ಶುರು
ಪೇಪರ್ ಮಾರುವ ಹುಡುಗನೊಬ್ಬ ಸಿಕ್ಕಾಪಟ್ಟೆ ಯೋಜನೆ ಹಾಕಿಕೊಂಡು ಅದಕ್ಕೆಲ್ಲಾ ಪರಿಹಾರ ಹುಡುಕುವ ಕಥೆಯಿರುವ ಈ ಪೇಪರ್ ದೋಣಿ ಚಿತ್ರ, ಸಾಕಷ್ಟು ಮೊದಲೇ ತೆರೆಗೆ ಬರಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಬಹಳಷ್ಟು ತಡವಾಗಿ ತೆರೆಗೆ ಬರುತ್ತಿದೆ. ಈ ಚಿತ್ರದ ಬುಡಗಡೆಗೆ ಮಾತ್ರವಲ್ಲದೇ ಕಥೆಗೂ ಸಾಕಷ್ಟು ಪೂರ್ವ ತಯಾರಿ ನಡಿದಿದೆ ಎಂಬುದು ವಿಶೇಷ.
ಇದರಲ್ಲಿ ಭಾರತ ಮಾತ್ರವಲ್ಲದೇ ಪ್ರಪಂಚದ ಸಮಸ್ಯೆಯನ್ನು ಸವಿಸ್ತಾರವಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಪ್ರಪಂಚದಲ್ಲಿ ಎಲ್ಲೆಲ್ಲೋ ಹರಡಿಕೊಂಡಿರುವ ರೈತರಿಗೆ ಲ್ಯಾಪ್ ಟಾಪ್ ಮೂಲಕವೂ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ ಎನ್ನುವುದು ಚಿತ್ರತಂಡದ ಮಾಹಿತಿ.
ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಲ್ಕು ಹಾಡುಗಳನ್ನು ತೋರಿಸಲಾಗಿದೆ. ಅಷ್ಟೇ ಅಲ್ಲದೇ, ನಾಯಕ ನವೀನ್ ಕೃಷ್ಣ 'SOS' ಚಿಹ್ನೆಯಿರುವ ಟೀ ಶರ್ಟ್ ಹಾಕಿಕೊಂಡಿರುವ ಗುಟ್ಟನ್ನು ರಟ್ಟುಮಾಡಲಾಗಿದೆ. ಹಾಡುಗಳು ಮತ್ತು ಕೆಲವು ದೃಶ್ಯಗಳ ಮೂಲಕ ಚಿತ್ರದ ಬಗ್ಗೆ ಕೆಲವು ಮಾಹಿತಿ ಕೊಡಲಾಗಿದೆ. ಚಿತ್ರಕ್ಕೆ ಉಪೇಂದ್ರ ಶೈಲಿಯ ನಿರೂಪಣೆ ಇದೆ ಎನ್ನಲಾಗಿದೆ.
ಇನ್ನು ಈ ಚಿತ್ರದಲ್ಲಿ ನಟ ಆದಿ ಲೋಕೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್, ವಿನಯಾ ಪ್ರಕಾಶ್ ಹಾಗೂ ಸತ್ಯಜಿತ್ ಪ್ರಮುಖ ಪೋಷಕವರ್ಗದಲ್ಲಿದ್ದಾರೆ. ನವೀನ್ ಕೃಷ್ಣರನ್ನು ಈ ಚಿತ್ರ ಕೈಹಿಡಿಯಲಿದೆ ಎಂಬುದು ಬಹಳಷ್ಟು ಜನರ ನಿರೀಕ್ಷೆ. ಆದರೆ ಬಿಡುಗಡೆಯ ನಂತರದ ದಿನಗಳೇ ಇದಕ್ಕೆ ಉತ್ತರ ಹೇಳಬೇಕಷ್ಟೇ. (ಒನ್ ಇಂಡಿಯಾ ಕನ್ನಡ)


Click it and Unblock the Notifications












