ಗಾಯದ ಮೇಲೆ ಬರೆ ಎಳೆದಂತಾಯಿತು ಚಿತ್ರಮಂದಿರ ಮಾಲೀಕರ ಕಥೆ
ಚಿತ್ರಮಂದಿರಗಳು ತೆರೆದಿದ್ದರೂ ಯಾವುದು ದೊಡ್ಡ ಸಿನಿಮಾಗಳು ಬಿಡುಗಡೆಯಾಗಿಲ್ಲ. ಹಳೆ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದರೂ ಪ್ರೇಕ್ಷಕರು ಬರ್ತಿಲ್ಲ. 100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ಕೊಡಬೇಕು, ಆಗಲೇ ಸ್ಟಾರ್ ನಟರ ಸಿನಿಮಾಗಳು ಬರೋದು ಎಂಬ ಲೆಕ್ಕಾಚಾರದಲ್ಲಿದೆ ಚಿತ್ರರಂಗ. ಸದ್ಯದಲ್ಲೇ 100 ಪರ್ಸೆಂಟ್ ಅನುಮತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವು ಸಿನಿಮಾಗಳು ರಿಲೀಸ್ ದಿನಾಂಕ ಘೋಷಣೆ ಮಾಡಿ ಕಾಯುತ್ತಿವೆ.
ಆದ್ರೀಗ, ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರ ನೂತನ ನಿಯಮ ಜಾರಿ ಮಾಡಿದೆ. ಗಡಿರಾಜ್ಯಗಳಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆ ಕಾಣುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಮುಂಜಾಗ್ರತೆ ಕ್ರಮವಾಗಿ ವೀಕೆಂಡ್ ಲಾಕ್ಡೌನ್ ಹಾಗೂ ನೈಟ್ ಕರ್ಫ್ಯೂ ಮೊರೆ ಹೋಗಿದೆ ಸರ್ಕಾರ. ಈ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೈಟ್ ಶೋ ರದ್ದುಗೊಳ್ಳಲಾಗಿದೆ. ಜೊತೆಗೆ ವೀಕೆಂಡ್ ಪ್ರದರ್ಶನವೂ ರದ್ದುಗೊಳ್ಳಲಿದೆ.
ನೈಟ್ ಕರ್ಫ್ಯೂ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಗಡಿ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ತೀರ್ಮಾನಿಸಿದ್ದು, ರಾತ್ರಿ ಕರ್ಫ್ಯೂವನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ.
ಚಿತ್ರಮಂದಿರಗಳಲ್ಲಿ ಮತ್ತೆ ಹೌಸ್ಫುಲ್ ಪ್ರದರ್ಶನ ಕಾಣಬಹುದು ಎಂದು ಕನಸು ಕಾಣುತ್ತಿದ್ದ ನಿರ್ಮಾಪಕರಿಗೆ ಸರ್ಕಾರ ಆದೇಶ ಆಘಾತ ತಂದಿದೆ. ಕೋವಿಡ್ ಮೂರನೇ ಅಲೆ, ಸರ್ಕಾರದ ನಿಯಮಗಳು ಚಿತ್ರರಂಗವನ್ನು ಮತ್ತೆ ಆತಂಕಕ್ಕೆ ದೂಕುವಂತೆ ಮಾಡಿದೆ. ಮುಂದೆ ಓದಿ...

ಗಡಿ ಜಿಲ್ಲೆಗಳಲ್ಲಿ ಎರಡು ದಿನ ಬ್ರೇಕ್
ಗಡಿ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ತೀರ್ಮಾನ ಕೈಗೊಂಡಿರುವ ಹಿನ್ನೆಲೆ, ವೀಕೆಂಡ್ನಲ್ಲಿ ಎರಡು ದಿನ ಚಿತ್ರಮಂದಿರ ಮುಚ್ಚಬೇಕಾಗುತ್ತದೆ. ಜೊತೆಗೆ ಪ್ರತಿದಿನದ ನೈಟ್ ಶೋ ಸಹ ರದ್ದುಗೊಳಿಸಲಾಗುವುದು.

ಕಲಿವೀರ ಚಿತ್ರ ರಿಲೀಸ್
ಆಗಸ್ಟ್ 6 ರಂದು ಕಲಿವೀರ ಸಿನಿಮಾ ಬಿಡುಗಡೆಯಾಗಿದೆ. ಲಾಕ್ಡೌನ್ ತೆರವುಗೊಳಿಸಿದ ನಂತರ ಚಿತ್ರಮಂದಿರಕ್ಕೆ ಬಂದ ಮೊದಲ ಚಿತ್ರ ಇದಾಗಿದ್ದು, ಮೊದಲ ದಿನವೇ ಸರ್ಕಾರ ಶಾಕ್ ಕೊಟ್ಟಿದೆ. ಕಲಿವೀರ ಚಿತ್ರಕ್ಕೆ ನೈರ್ಟ ಶೋ ಮತ್ತು ವೀಕೆಂಡ್ ಕರ್ಫ್ಯೂನಿಂದ ಕಷ್ಟವಾಗಲಿದೆ.

ಗೊಂದಲದಲ್ಲಿ ಸ್ಟಾರ್ ನಟರ ಚಿತ್ರಗಳು
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಸಿನಿಮಾ ಆಗಸ್ಟ್ 20 ರಂದು ಬಿಡುಗಡೆಯಾಗಲಿದೆ. ಅದೇ ದಿನ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾ ನಿನ್ನ ಸನಿಹಕೆ ಥಿಯೇಟರ್ಗೆ ಬರಲಿದೆ. ಆದ್ರೆ, ಕೋವಿಡ್ ಭೀತಿ ಮತ್ತೆ ಚಿತ್ರಮಂದಿರಗಳನ್ನು ಮುಚ್ಚುವಂತೆ ಮಾಡುತ್ತಾ ಎಂಬ ಅನುಮಾನ ಕಾಡ್ತಿದೆ. ಅದರ ಸುಳಿವು ಎನ್ನುವಂತೆ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿ ಮಾಡಿರುವುದು ಚಿಂತೆ ಉಂಟು ಮಾಡಿದೆ.

ಮತ್ತೆ ಸಂಪೂರ್ಣ ಲಾಕ್ಡೌನ್ ಆದ್ರೆ?
ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿದೆ. ಇದು ಕರ್ನಾಟಕದ ಮೇಲೂ ಪರಿಣಾಮ ಬೀರುತ್ತಿದ್ದು, ಸರ್ಕಾರ ಮುನ್ನೆಚ್ಚರಿಕೆ ಕ್ರಮ ಎನ್ನುವಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಸದ್ಯಕ್ಕೆ ಗಡಿ ಜಿಲ್ಲೆಗಳಲ್ಲಿ ಮಾತ್ರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಇತರೆ ಜಿಲ್ಲೆಗಳಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಒಂದು ವೇಳೆ ಮೂರನೇ ಅಲೆ ಹೆಚ್ಚಾದರೆ ಮತ್ತೆ ಲಾಕ್ಡೌನ್ ಅಸ್ತ್ರ ಪ್ರಯೋಗವಾಗುತ್ತದಾ ಎಂಬ ಭಯ ಸಾರ್ವಜನಿಕರನ್ನು ಕಾಡ್ತಿದೆ. ಮತ್ತೆ ಪೂರ್ಣ ಪ್ರಮಾಣದಲ್ಲಿ ಲಾಕ್ಡೌನ್ ಆದರೆ ಚಿತ್ರರಂಗ ಮತ್ತಷ್ಟು ದಿನ ಸ್ತಬ್ದವಾಗಬೇಕಾಗುತ್ತದೆ.


Click it and Unblock the Notifications











