ಶೇಷಾದ್ರಿ ಮುಂದಿನ ಚಿತ್ರ 'ವಿದಾಯ'ಕ್ಕೆ ಗ್ರೀನ್ ಸಿಗ್ನಲ್
ಪರ್ಯಾಯ ಚಿತ್ರಗಳ ನಿರ್ದೇಶಕ ಪಿ ಶೇಷಾದ್ರಿ ಅವರ ಮುಂದಿನ ಚಿತ್ರ ಯಾವುದು? ಈ ಭಾರಿ ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಏನು? ಎಂಬ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಶೇಷಾದ್ರಿ ಅವರು ತಮ್ಮ ಮುಂದಿನ ಚಿತ್ರಕ್ಕೆ 'ವಿದಾಯ' ಎಂದು ಹೆಸರಿಟ್ಟಿದ್ದಾರೆ.
ಈ ಭಾರಿಯೂ ಅವರ ನಿರ್ದೇಶನದ ಚಿತ್ರಕ್ಕೆ ಬಂಡವಾಳ ತೊಡಗಿಸುತ್ತಿರುವವರು ಖ್ಯಾತ ನಿರ್ಮಾಪಕ ಬಸಂತಕುಮಾರ್ ಪಾಟೀಲ್. ಅಕ್ಟೋಬರ್ 22ರಂದು ವಿದಾಯ ಚಿತ್ರಕ್ಕೆ ಮುಹೂರ್ತ. ದೀಪಾವಳಿಯ ಹಬ್ಬದ ಸಂಭ್ರದಲ್ಲಿ ಚಿತ್ರ ಸೆಟ್ಟೇರುತ್ತಿದೆ. [ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ವಿಶೇಷ ಸಂದರ್ಶನ]

ಇಷ್ಟಕ್ಕೂ 'ವಿದಾಯ' ಚಿತ್ರದ ಕಥಾವಸ್ತು ಏನು ಎಂಬ ಬಗ್ಗೆ ಬಸಂತಕುಮಾರ್ ಪಾಟೀಲ್ ಅವರಾಗಲಿ, ಶೇಷಾದ್ರಿ ಅವರಾಗಲಿ ಸುಳಿವು ಬಿಟ್ಟುಕೊಟ್ಟಿಲ್ಲ. ಶೇಷಾದ್ರಿ ಅವರೊಂದಿಗೆ ಕೆಲಸ ಮಾಡುವುದೇ ಸಂತೋಷದ ವಿಚಾರ ಎನ್ನುತ್ತಾರೆ ಬಸಂತಕುಮಾರ್ ಪಾಟೀಲ್. ಪಾತ್ರವರ್ಗ, ತಾಂತ್ರಿಕ ಬಳಗದಲ್ಲಿ ಯಾರೆಲ್ಲಾ ಇರುತ್ತಾರೆ ಇನ್ನಷ್ಟೇ ಗೊತ್ತಾಗಬೇಕು.
ಸತತ ಎಂಟು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಅಪರೂಪದ ಸಾಧನೆ ಶೇಷಾದ್ರಿ ಅವರದು. ಶೇಷಾದ್ರಿಯ ಮೊದಲ ಚಿತ್ರ 'ಮುನ್ನುಡಿ', 2000 ಇಸವಿಯಲ್ಲಿ ತೆರೆಗೆ ಬಂದ ಈ ಚಿತ್ರ ಅವರಿಗೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ನಂತರ 'ಅತಿಥಿ' (2001), 'ಬೇರು' (2004), 'ತುತ್ತೂರಿ' (2005), 'ವಿಮುಕ್ತಿ' (2008) ಮತ್ತು 'ಬೆಟ್ಟದ ಜೀವ' (2010), 'ಭಾರತ್ ಸ್ಟೋರ್ಸ್' (2012) ಹಾಗೂ 'ಡಿಸೆಂಬರ್ 1' (2014). (ಫಿಲ್ಮಿಬೀಟ್ ಕನ್ನಡ)


Click it and Unblock the Notifications











