ಅವಶ್ಯಕತೆಗಳನ್ನು ಆಸೆ ಎಂದುಕೊಂಡಿದ್ದು ಸುಚೇಂದ್ರ ಪ್ರಸಾದ್ ಮೂರ್ಖತನ: ಪವಿತ್ರಾ ಲೋಕೇಶ್
ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ವಿವಾಹ ಸುದ್ದಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದ ಕೇಂದ್ರ ಬಿಂದುಗಳಾದ ನರೇಶ್, ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಹಾಗೂ ಸುಚೇಂದ್ರ ಪ್ರಸಾದ್ ಒಬ್ಬರ ಮೇಲೊಬ್ಬರು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇಷ್ಟು ದಿನ ಬಹುತೇಕ ಮೌನಕ್ಕೆ ಶರಣಾಗಿದ್ದ ನಟಿ ಪವಿತ್ರಾ ಲೋಕೇಶ್ ಇದೀಗ ಮಾಧ್ಯಮಗಳ ಮುಂದೆ ಬಂದಿದ್ದು, ನರೇಶ್ರ ಮೂರನೇ ಪತ್ನಿ ರಮ್ಯಾ ರಘುಪತಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅದರ ಜೊತೆಗೆ ತಮ್ಮ ಪತಿ ಸುಚೇಂದ್ರ ಪ್ರಸಾದ್ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೂ ಉತ್ತರಿಸಿದ್ದಾರೆ. ಮಾಧ್ಯಮದೊಟ್ಟಿಗೆ ಮಾತನಾಡಿದ್ದ ಸುಚೇಂದ್ರ ಪ್ರಸಾದ್, ''ಪವಿತ್ರಾ ಲೋಕೇಶ್ಗೆ ಲಾಲಸೆ. ನರೇಶ್ ಜೊತೆ ಸಹ ಇನ್ನೊಂದು ಆರು ತಿಂಗಳಷ್ಟೆ ಇರುತ್ತಾರೆ'' ಎಂದಿದ್ದರು.
Recommended Video


''ಹನ್ನೊಂದು ವರ್ಷ ಜೊತೆಗಿದ್ದ, ನನ್ನನ್ನು ಮದುವೆ ಸಹ ಆಗಿಲ್ಲ ಅವರು''
ಸುಚೇಂದ್ರ ಪ್ರಸಾದ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪವಿತ್ರಾ ಲೋಕೇಶ್, ''ಅವರ ವ್ಯಕ್ತಿತ್ವಕ್ಕೆ, ಅವರ ಓದಿಗೆ, ಪಾಂಡಿತ್ಯಕ್ಕೆ ಗೌರವಕೊಟ್ಟು ನಾನು ಇಷ್ಟು ದಿನ ಸುಮ್ಮನಿದ್ದೆ. ಆದರೆ ಈಗ ಅವರೇ ಮಾತನಾಡಿರುವುದರಿಂದ ಹೇಳುತ್ತಿದ್ದೇನೆ, ಅವರೊಟ್ಟಿಗೆ ನಾನು ಹನ್ನೊಂದು ವರ್ಷ ಇದ್ದೆ. ಕಳೆದ ಐದು ವರ್ಷಗಳಿಂದ ಅವರೊಟ್ಟಿಗೆ ನಾನಿಲ್ಲ. ಅವರು ನನ್ನನ್ನು ಮದುವೆ ಸಹ ಆಗಿಲ್ಲ. ಹಣಕ್ಕಾಗಿಯೇ ನಾನು ಹೀಗೆ ಮಾಡಿದ್ದರೆ, ಅದಕ್ಕೆ ನನಗೆ ಹನ್ನೊಂದು ವರ್ಷ ಬೇಕಾಗಿರಲಿಲ್ಲ. ನಾನು ಅವರೊಟ್ಟಿಗೆ ಇದ್ದಾಗ ಅವರ ಬಳಿ ಏನೂ ಇರಲಿಲ್ಲ. ಆದರೂ ಅವರೊಟ್ಟಿಗೆ ನಾನಿದ್ದೆ'' ಎಂದಿದ್ದಾರೆ.

''ಅವಶ್ಯಕತೆಯನ್ನು ಆಸೆ ಎಂದುಕೊಂಡಿದ್ದು ಅವರ ಮೂರ್ಖತನ''
''ಅವರ ಬಳಿ ಕಾರು, ಮನೆ, ಜೇಬಿನಲ್ಲಿ ಹಣ ಏನೂ ಇರಲಿಲ್ಲ ಆದರೂ ನಾನಿದ್ದೆ. ಹಣಕ್ಕಾಗಿ ಆಸೆಪಟ್ಟಿದ್ದಿದ್ದರೆ ಆ ಸಂಬಂಧ ಒಂದು ವರ್ಷವೂ ಉಳಿಯುತ್ತಿರಲಿಲ್ಲ. ಒಬ್ಬ ವ್ಯಕ್ತಿಗೆ ಒಂದು ಕೆಲಸ ಇರಬೇಕು, ಅವನ ಬಳಿ ತುಸು ಹಣ ಇರಬೇಕು, ಹಣದಿಂದ ಸಮಾಜದಲ್ಲಿ ಎಲ್ಲರೂ ಮೆಚ್ಚುವಂತೆ ಜೀವನ ಮಾಡಬೇಕು. ಹಣವಿಲ್ಲವೆಂದರೆ ಏನು ಮಾಡುವುದು. ನೀನು ಗಂಜಿ ಕುಡಿದುಕೊಂಡು ಜೀವನ ಮಾಡು ಅಂದ್ರೆ ಮಾಡಲಾಗುತ್ತಾ?'' ಎಂದು ಪ್ರಶ್ನೆ ಮಾಡಿದ ಪವಿತ್ರಾ ಲೋಕೇಶ್, ''ನಾನು ಕಲಾವಿದೆ, ನನಗೆ ಆದ ಗುರುತಿದೆ, ನಾನು ರಸ್ತೆಯಲ್ಲಿ ನಡೆದುಕೊಂಡು ಓಡಾಡಲಾಗಲ್ಲ. ನನಗೆ ಕಾರು ಬೇಕು, ಅದು ಅವಶ್ಯಕತೆ, ಅದನ್ನೇ ಅವರು ಆಸೆ ಎಂದುಕೊಂಡರೆ ಅದು ಅವರ ಮೂರ್ಖತನ ಎಂದು ಹೇಳಬೇಕಷ್ಟೆ'' ಎಂದು ಸಿಟ್ಟಿನಿಂದ ಹೇಳಿದರು ಪವಿತ್ರಾ.

ಸುಚೇಂದ್ರ ಪ್ರಸಾದ್ ಬಗ್ಗೆ ಮುಂದೆ ಮಾತನಾಡುವೆ: ಪವಿತ್ರಾ
''ಸುಚೇಂದ್ರ ಪ್ರಸಾದ್ ಬಗ್ಗೆ ಮಾತನಾಡಲು ನಾನು ಮಾಧ್ಯಮಗಳ ಬಳಿ ಬಂದಿಲ್ಲ. ಅವರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ. ರಮ್ಯಾ ರಘುಪತಿ ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಲಷ್ಟೆ ನಾನು ಬಂದಿರುವುದು. ನನ್ನ ವಿರುದ್ಧ ವ್ಯವಸ್ಥಿತ ಮಾನಹಾನಿ ಕಾರ್ಯ ನಡೆಯುತ್ತಿದೆ ಎಂಬ ಕಾರಣಕ್ಕೆ ನಾನು ಮಾಧ್ಯಮಗಳ ಸ್ಪಷ್ಟನೆ ನೀಡುತ್ತಿದ್ದೇನೆ. ಸುಚೇಂದ್ರ ಪ್ರಸಾದ್ ಹಾಗೂ ನನ್ನ ಸಂಬಂಧದ ಬಗ್ಗೆ ಮತ್ತೊಮ್ಮೆ ಮಾತನಾಡುತ್ತೇನೆ'' ಎಂದಿದ್ದಾರೆ ಪವಿತ್ರಾ ಲೋಕೇಶ್.

ಪವಿತ್ರ ಅವರೊಂದಿಗೆ ನನ್ನದು ಪಾಣಿ ಗ್ರಹಣ: ಸುಚೇಂದ್ರ ಪ್ರಸಾದ್
''ಪವಿತ್ರ ಅವರೊಂದಿಗೆ ನನ್ನದು ಪಾಣಿ ಗ್ರಹಣ. ಕೈ ಹಿಡಿದು ನಡೆಯುತ್ತೇನೆ. ನಡೆಸಿಕೊಳ್ಳುತ್ತೇನೆ ಎಂದು ಒಪ್ಪಿಕೊಂಡಿದ್ದು. ಹಾಗಾಗಿ ಕೈ ಹಿಡಿದಿದ್ದನ್ನು ಪಾಲಿಸುವುದು ನನ್ನ ಧರ್ಮ ಎಂದು ಪಾಲಿಸಿದ್ದೇನೆ. ಅವರು ಎಂತಹದ್ದೇ ತೀರ್ಮಾನ. ಯಾವುದೇ ಸಂದರ್ಭದಲ್ಲಿ ಸೌಕರ್ಯ ಎಂದು ಹೇಳುತ್ತಾರೋ ಅದಕ್ಕೆ ನಾನು ಬದ್ಧನಿದ್ದೇನೆ. ಅವರೊಟ್ಟಿಗೆ ಎಂತಹದ್ದೇ ಸ್ಥಿತಿಯಲ್ಲೂ ಪಾಲಿಸಬೇಕಾದ ಧರ್ಮವಿದೆ. ಆ ಧರ್ಮವನ್ನು ನಾನು ಪಾಲಿಸುತ್ತೇನೆ'' ಎಂದಿದ್ದಾರೆ ಸುಚೇಂದ್ರ ಪ್ರಸಾದ್.


Click it and Unblock the Notifications











