ಅನಂತ್ ನಾಗ್, ಶಿವಣ್ಣರಿಗೆ ಪದ್ಮ ಪ್ರಶಸ್ತಿ ಯಾಕಿಲ್ಲ?, ನಿರ್ದೇಶಕರ ಪ್ರಶ್ನೆ
ಪದ್ಮ ಪ್ರಶಸ್ತಿ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಬೇಸರ ವ್ಯಕ್ತವಾಗಿದೆ. ಬಾಲಿವುಡ್ ಚಿತ್ರರಂಗಕ್ಕೆ ನೀಡುವ ಪ್ರಾಮುಖ್ಯತೆಯನ್ನು ದಕ್ಷಿಣ ಭಾರತದ ಚಿತ್ರರಂಗಕ್ಕೆ ನೀಡುವುದಿಲ್ಲ ಎನ್ನುವುದು ಅಸಮಾಧಾನಕ್ಕೆ ಕಾರಣವಾಗಿದೆ.
ನಿನ್ನೆ ಗಣರಾಜ್ಯೋತ್ಸವದ ವಿಶೇಷವಾಗಿ ಘೋಷಣೆಯಾದ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ನಾಲ್ಕು ಬಾಲಿವುಡ್ ಗಣ್ಯರ ಹೆಸರು ಇದೆ. ನಟಿ ಕಂಗನಾ ರಣಾವತ್, ನಿರ್ಮಾಪಕಿ ಏಕ್ತ ಕಪೂರ್, ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್, ಗಾಯಕ ಅದ್ನಾನ್ ಸಮಿ ಈ ನಾಲ್ವರಿಗೆ ಪ್ರಶಸ್ತಿ ಸಿಕ್ಕಿದೆ.
ಈ ಬಗ್ಗೆ ಶಿವರಾಜ್ ಕುಮಾರ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಸೆಂಚುರಿ ಸ್ಟಾರ್ ಸಾಧನೆಯನ್ನು ಕೇಂದ್ರ ಸರ್ಕಾರ ಗಮನಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.
ಪ್ರಶಸ್ತಿಗಳ ವಿಚಾರದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಹಾಗೂ ಕನ್ನಡದ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ಕನ್ನಡದ ಕೆಲವು ನಿರ್ದೇಶಕರು ಧ್ವನಿ ಎತ್ತಿದ್ದಾರೆ.

ಸಿಂಪಲ್ ಆಗಿ ಪ್ರಶ್ನೆ ಕೇಳಿದ ಸುನಿ
''ಕಂಗನಾ ರಣಾವತ್ ಅವರಿಗೆ ಪದ್ಮಶ್ರೀ ಬಂದಿರುವುದಕ್ಕೆ ನನ್ನ ಅಪಸ್ವರವಿಲ್ಲ ಆದರೆ, ಅನಂತನಾಗ್ ಹಾಗೂ ಡಾ ಶಿವರಾಜ್ ಕುಮಾರ್ ರಂತಹ ಸರ್ವಶ್ರೇಷ್ಠ ಕಲಾವಿದರು ಹಾಗೂ ಇನ್ನುಳಿದ ಚಿತ್ರರಂಗದ ಹಿರಿಯ ಕಲಾವಿದರಿಗೆ ಮನ್ನಣೆ, ಆದ್ಯತೆ ಕೊಡದೆ, ದಕ್ಷಿಣಭಾರತದ ಚಿತ್ರರಂಗವನ್ನು ಕಡೆಗಣಿಸಿ ಬರೀ ಬಾಲಿವುಡ್ ಮಂದಿಗೆ ಮಾತ್ರ ಮಣೆ ಹಾಕುತ್ತಿರುವುದು ಬೇಸರದ ವಿಷಯ.'' ಎಂದು ನಿರ್ದೇಶಕ ಸುನಿ ಟ್ವೀಟ್ ಮಾಡಿದ್ದಾರೆ.

ಪವನ್ ಒಡೆಯರ್ ಬೆಂಬಲ
ನಿರ್ದೇಶಕ ಸುನಿ ಮಾತಿಗೆ ಮತ್ತೊಬ್ಬ ನಿರ್ದೇಶಕ ಪವನ್ ಒಡೆಯರ್ ಬೆಂಬಲ ನೀಡಿದ್ದಾರೆ. ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಪವನ್ ಒಡೆಯರ್ ಮಾತನಾಡಿದ್ದಾರೆ. ನಟ ಅನಂತ್ ನಾಗ್ ಹಾಗೂ ಶಿವರಾಜ್ ಕುಮಾರ್ ರಂತಹ ಕಲಾವಿದರಿಗೆ ಎಂದೋ ಪದ್ಮ ಪ್ರಶಸ್ತಿ ನೀಡಬೇಕಾಗಿತ್ತು. ಆದರೆ, ಇದುವರೆಗೆ ಅವರಿಗೆ ಪ್ರಶಸ್ತಿ ಬರದೆ ಇರುವುದು ಬೇಸರದ ಸಂಗತಿ ಎಂದಿದ್ದಾರೆ.

ಚಿತ್ರರಂಗ ಎಂದರೆ ಬಾಲಿವುಡ್ ಮಾತ್ರವಲ್ಲ
''ಅನಂತ್ ನಾಗ್ ಸರ್ ಲಿವಿಂಗ್ ಲೆಜೆಂಡ್. ಅವರ ವರ್ಸಟೈಲ್ ನಟನೆ, ಇಂದಿಗೂ ಅವರು ನಿರ್ವಹಿಸುತ್ತಿರುವ ಪಾತ್ರಗಳು ಅದ್ಭುತ. ಶಿವಣ್ಣ ಸಹ ಸಿನಿಮಾ ಹಾಗೂ ತಮ್ಮ ಸಾಮಾಜಿಕ ಕೆಲಸದ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಇಂಡಿಯಾನ್ ಸಿನಿಮಾಗೆ ದಕ್ಷಿಣ ಭಾರತದ ಕೊಡುಗೆ ಬಹಳ ದೊಡ್ಡದಿದೆ. ಇಲ್ಲಿಯೂ ಎಷ್ಟೊಂದು ಪ್ರತಿಭಾವಂತರು ಇದ್ದಾರೆ. ಆದರೆ, ಪ್ರಶಸ್ತಿಗಳ ವಿಚಾರದಲ್ಲಿ ಇದನ್ನು ಗುರುತಿಸುವುದಿಲ್ಲ. ಚಿತ್ರರಂಗ ಎಂದರೆ, ಬಾಲಿವುಡ್ ಮಾತ್ರವಲ್ಲ.'' ಎಂದು ಪವನ್ ಒಡೆಯರ್ ಹೇಳಿಕೆ ನೀಡಿದ್ದಾರೆ.

ತಾರತಮ್ಯ ಎದ್ದು ಕಾಣುತ್ತಿದೆ
ಪ್ರಶಸ್ತಿಗಳ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ, ಅದು ಎದ್ದು ಕಾಣುತ್ತಿದೆ ಎಂದು ಪವನ್ ಒಡೆಯರ್ ಹೇಳಿದ್ದಾರೆ. ಸುನಿ ಮಾತಿಗೆ ಪವನ್ ಒಡೆಯರ್ ಬೆಂಬಲ ನೀಡಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್ ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.


Click it and Unblock the Notifications











