Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಲಿತರ ಮನೆಗೆ ಹೋಗಿದ್ದ ಪೇಜಾವರ ಶ್ರೀ ಚಿಕನ್ ಕೊಟ್ಟರೆ ತಿನ್ನುತ್ತಿದ್ದರೆ: ಹಂಸಲೇಖ ಪ್ರಶ್ನೆ
ಸಂಗೀತ ನಿರ್ದೇಶಕ ಹಂಸಲೇಖ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿವೆ.
'ಸಮಾನತೆ' ಸಂದೇಶ ನೀಡಲು ದಲಿತರ ಮನೆಗೆ ಮೇಲ್ಜಾತಿಯವರು ಬರುವುದನ್ನು ವಿಮರ್ಶೆಗೊಳಪಡಿಸಿದ ಹಂಸಲೇಖ, ಪೇಜಾವರ ಶ್ರೀಗಳ ವಿಷಯ ಪ್ರಸ್ತಾಪಿಸಿದರು. ಇದು ಈಗ ಚರ್ಚೆಗೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ''ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದು ಹಂಸಲೇಖ ಪ್ರಶ್ನೆ ಮಾಡಿದರು. ದಲಿತರ ಮನೆಗೆ ಮೇಲ್ಜಾತಿಯವರು ಹೋದರೂ ಅಲ್ಲಿಯೂ ಅವರು ಮೇಲ್ಜಾತಿಯವರಾಗಿಯೇ ವರ್ತಿಸುತ್ತಾರೆ ಎಂಬುದನ್ನು ಹಂಸಲೇಖ ತಮಾಷೆ ಧಾಟಿಯಲ್ಲಿ ಹೀಗೆ ಹೇಳಿದರು.
''ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನೊಂದಿಗೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವಿದೆ. ರಂಗಯ್ಯ, ಆ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಸ್ಥಾನದಲ್ಲಿ ಇಟ್ಟು ಗೌರವ ಮಾಡಿದ್ದರೆ ಅದು ರಂಗಯ್ಯನ ತಾಕತ್ತು. ಬೆಳಕು ಇಲ್ಲದಾಗ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುವುದು ಅದೇನು ದೊಡ್ಡ ವಿಷಯ. ಅದು ನಾಟಕ, ಅದು ಬೂಟಾಟಿಕೆ'' ಎಂದಿದ್ದಾರೆ ಹಂಸಲೇಖ.
''ಬಲಿತರು ದಲಿತರ ಮನೆಗೆ ಹೋಗುವುದು ಅದೇನು ದೊಡ್ಡ ವಿಷಯ? ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು, ಊಟ ಹಾಕಬೇಕು, ಕುಡಿಯಲು ಲೋಟ ಕೊಡಬೇಕು ಆ ಲೋಟವನ್ನು ನಾವು ತೊಳೆಯುತ್ತೀವಿ ಎಂದು ಅವರು ಹೇಳಬೇಕು'' ಎಂದಿದ್ದಾರೆ ಹಂಸಲೇಖ.
ಹಂಸಲೇಖ ಅವರ ಮಾತಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಕೆಲವರು ಪರವಾಗಿ, ಕೆಲವರು ವಿರೋಧವಾಗಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಬಿಳಿಗಿರಿ ರಂಗಯ್ಯನ ಬಗ್ಗೆ ಮಾತನಾಡಿದ್ದಕ್ಕೆ ಹಂಸಲೇಖ ಕ್ಷಮೆ ಕೇಳಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದು ಬಹು ದೊಡ್ಡ ಕ್ರಾಂತಿಕಾರಿ ಕಾರ್ಯ ಅದನ್ನು ಗೇಲಿ ಮಾಡಿದ್ದು ಸರಿಯಲ್ಲವೆಂದು ಇನ್ನು ಕೆಲವರು ಹೇಳಿದ್ದಾರೆ. ಹಂಸಲೇಖ ಇರುವುದನ್ನೇ ಹೇಳಿದ್ದಾರೆ ಎಂದು ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.
ಭಗವದ್ಗೀತೆ ಬಗ್ಗೆ ಮಾತನಾಡಿರುವ ಹಂಸಲೇಖ, ''ಭಗವದ್ಗೀತೆ ನಮಗೆ ಎಷ್ಟು ಸಹಾಯ ಮಾಡಿದೆಯೋ ಗೊತ್ತಿಲ್ಲ, ಆದರೆ ಅಂಬೇಡ್ಕರ್ ಕೊಟ್ಟ ಬಡವರ ಗೀತೆ ಸಂವಿಧಾನ ನಮ್ಮನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಗೆ ತಂದಿದೆ ಎಂದಿದ್ದಾರೆ. ನಮ್ಮ ಡೆಮಾಕ್ರಸಿ (ಪ್ರಜಾಪ್ರಭುತ್ವ) ಧರ್ಮಾಕ್ರಸಿ ಆಗುತ್ತದೆಂಬ ಆತಂಕ ಜನಸಾಮಾನ್ಯರಲ್ಲಿ ಇದೆ. ಹಾಗೇನಾದರೂ ಆದರೆ ನಾವು ಮತ್ತೆ ಹಳೆಯ ಕಾಲಕ್ಕೆ ಜಾರುತ್ತೇವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ನಾಶವಾಗುವುದಿಲ್ಲ ಎಂಬ ನಂಬಿಕೆ ಇದೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಎಚ್ಚರದಿಂದ ಕೆಲಸ ಮಾಡಬೇಕು'' ಎಂದಿದ್ದಾರೆ. ಇದರ ಬಗ್ಗೆಯೂ ಕೆಲವರು ಆಕ್ಷೇಪ ಎತ್ತಿದ್ದು, ''ಹಂಸಲೇಖ ಕೇವಲ ಭಗವದ್ಗೀತೆ ಹೆಸರನ್ನೇ ಉಲ್ಲೇಖಿಸಿದ್ದು ಏಕೆ ಧಾರ್ಮಿಕ ಗ್ರಂಥಗಳು ಎನ್ನಬಹುದಿತ್ತಲ್ಲ'' ಎಂದಿದ್ದಾರೆ.