ತಿರುಮಲದಲ್ಲಿ ಅಜಿತ್, ಸಂಕಟ ಬಂದಾಗ ವೆಂಕಟನ ಸ್ಮರಣೆ
ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ', ವಿಕ್ರಮ್ ನಟನೆಯ 'ಐ' ಹಾಗೂ ವಿಜಯ್ ಅವರ 'ಕತ್ತಿ' ಚಿತ್ರದ ದಾಖಲೆಯನ್ನು ಅಜಿತ್ ಕುಮಾರ್ ಅವರ ಹೊಚ್ಚ ಹೊಸ ಚಿತ್ರದ ಟೀಸರ್ ಧೂಳಿಪಟ ಮಾಡಿದ ಸುದ್ದಿ ಎಲ್ಲರಿಗೂ ಗೊತ್ತೇ ಇದೆ.
ಈ ಚಿತ್ರ ಫೆಬ್ರವರಿ 5 ರಂದು ಬಿಡುಗಡೆಗೆ ಸಿದ್ಧವಾಗಿದೆ. ಅದರೆ, ಬಿಡುಗಡೆಗೂ ಮುನ್ನ ಬಾಲಗ್ರಹ ಪೀಡೆ ಅನುಭವಿಸುತ್ತಿದೆ. ಅಜಿತ್ ಚಿತ್ರಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇದೇ ಸಮಯಕ್ಕೆ ಅಜಿತ್ ಅವರು ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ಬಂದಿರುವುದು ವಿಶೇಷವಾಗಿದೆ.
ಎನ್ನೈ ಅರಿಂದಾಲ್ ಚಿತ್ರ ಪ್ರದರ್ಶಿಸಿದರೆ ಚಿತ್ರಮಂದಿರವನ್ನು ಧೂಳಿಪಟ ಮಾಡುವುದಾಗಿ ಚೆನ್ನೈನ ಉಧಯಂ ಚಿತ್ರಮಂದಿರಕ್ಕೆ ಬೆದರಿಕೆ ಪತ್ರ ಬಂದಿದೆ.ಇದಲ್ಲದೆ ಇನ್ನೂ ಏಳೆಂಟು ಚಿತ್ರಮಂದಿರಕ್ಕೂ ಇದೇ ರೀತಿ ಬೆದರಿಕೆ ಪತ್ರ ರವಾನೆಯಾಗಿದೆ. [ಲಿಂಗಾ ದಾಖಲೆ ಪಕ್ಕಕ್ಕೆ ಸರಿಸಿದ ಅಜಿತ್ ಟೀಸರ್]
ಅಜಿತ್ ಅವರಿಗೂ ಜೀವ ಬೆದರಿಕೆ ಒಡ್ಡಲಾಗಿದೆ. ಕಾಕತಾಳೀಯ ಎಂಬಂತೆ ಇದೇ ಸಮಯಕ್ಕೆ ಅಜಿತ್ ಅವರು ಪೋಷಕರ ಜೊತೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಸಂಕಟ ಪರಿಹಾರಕ್ಕಾಗಿ ಪ್ರಾರ್ಥಿಸಿದ ಘಟನೆ ನಡೆದಿದೆ. ಅಜಿತ್ ಅವರ ತಿರುಪತಿ ಭೇಟಿ ಚಿತ್ರಗಳು ಇಲ್ಲಿವೆ ನೋಡಿ

ಬಹುನಿರೀಕ್ಷಿತ ಚಿತ್ರ ಎನ್ನೈ ಅರಿಂದಾಲ್
ಎ.ಎಂ ರತ್ನಂ ನಿರ್ಮಾಣದ ಎನ್ನೈ ಅರಿಂದಾಲ್ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೌತಮ್ ಮೆನನ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಅಜಿತ್ ಅವರ ಜೊತೆಗೆ ತ್ರೀಷಾ ಕೃಷ್ಣನ್, ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.ಅಜಿತ್ ಅವರು ಮೂರು ವಿಭಿನ್ನ ಶೇಡ್ ಗಳಿರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅರುಣ್ ವಿಜಯ್ ಸಿಕ್ಸ್ ಪ್ಯಾಕ್ ಬೆಳೆಸಿಕೊಂಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ತಮಿಳು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ, ಗೌತಮ್ -ಹ್ಯಾರೀಸ್ ಜಯರಾಜ್ ಜೋಡಿ ಮತ್ತೆ ಒಂದಾಗಿರುವುದು ಕೂಡಾ ಚಿತ್ರಪ್ರೇಮಿಗಳ ಕಾತುರಕ್ಕೆ ಕಾರಣವಾಗಿದೆ.

ಅಭಿಮಾನಿಗಳ ಜೊತೆ ಅರ್ಚಕರೂ ಸೇರಿಕೊಂಡರು
ಅಜಿತ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳಷ್ಟೇ ಅಲ್ಲ ದೇಗುಲದ ಅರ್ಚಕರು ಕೂಡಾ ಜೊತೆಗೂಡಿದರು. ಫೋಟೊ ತೆಗೆದ ನಂತರ ಪತ್ರಕರ್ತರು ಅಜಿತ್ ಜೊತೆ ಪೋಸ್ ನೀಡಿದರು. ಶ್ವೇತವಸ್ತ್ರಧಾರಿಯಾಗಿದ್ದ ಅಜಿತ್ ಅವರು ತಾಳ್ಮೆಯಿಂದ ಎಲ್ಲರ ಜೊತೆ ಕಲೆತು ಬೆರೆತರು.

ಅಜಿತ್ ಕುಮಾರ್ ಚಿತ್ರಕ್ಕೆ ಬಾಂಬ್ ಬೆದರಿಕೆ ಏಕೆ?
ಇದು ವ್ಯವಸ್ಥಿತ ಪಿತೂರಿ ಇರಬಹುದು ಎಂದು ಕಾಲಿವುಡ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ರಜನಿಕಾಂತ್ ಅಭಿನಯದ ಲಿಂಗಾ ಚಿತ್ರ, ವಿಜಯ್ ಅಭಿನಯದ ಕತ್ತಿ ಚಿತ್ರಕ್ಕೂ ಇದೇ ರೀತಿ ವಿಘ್ನ ಎದುರಾಗಿತ್ತು. ಬೇರೆ ಬೇರೆ ಕಾರಣಕ್ಕೆ ಕೋರ್ಟ್ ಕಚೇರಿ ಅಲೆದಾಟ ನಡೆದಿತ್ತು.
ಆದ್ರೆ, ಸಾಮಾನ್ಯವಾಗಿ ಅಜಿತ್ ಚಿತ್ರಕ್ಕೆ ವಿಘ್ನಗಳು ಎದುರಾಗಿದ್ದು ಕಡಿಮೆ. ಹೀಗಾಗಿ ಬಿಗ್ ಬಜೆಟ್ ಸ್ಟಾರ್ ಗಳಿರುವ ಚಿತ್ರಕ್ಕೆ ಇದೇ ರೀತಿ ಬೆದರಿಕೆ ಬಂದರೆ ಏನು ಮಾಡುವುದು ಎಂಬ ಚಿಂತೆ ತಲೆದೋರಿದೆ.

ಅಜಿತ್ ಜೊತೆಗೆ ಅವರ ಪೋಷಕರು ಬಂದಿದ್ರು
ತಿರುಮಲ ತಿರುಪತಿ ದೇಗುಲಕ್ಕೆ ಅಜಿತ್ ಅವರ ಜೊತೆಗೆ ಅವರ ಪೋಷಕರು, ಆಪ್ತರು ಬಂದಿದ್ದರು. ದರ್ಶನದ ನಂತರ ಟಿಟಿಡಿ ವತಿಯಿಂದ ವೆಂಕಟೇಶ್ವರ ಸ್ವಾಮಿಯ ಚಿತ್ರ, ಸ್ಮರಣಿಕೆ ನೀಡಿ ಅತಿಥಿಗಳನ್ನು ಗೌರವಿಸಲಾಯಿತು.

ಅಭಿಮಾನಿಗಳ ಜೊತೆ ಬೆರೆತ ಅಜಿತ್
ತಿರುಪತಿಯಲ್ಲಿ ಅಭಿಮಾನಿಗಳ ಜೊತೆ ಬೆರೆತ ಅಜಿತ್ ಅವರಿಗೆ ಆಂಧ್ರಪ್ರದೇಶದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅಜಿತ್ ಅವರು ತಿರುಪತಿಗೆ ಬಂದ ವಿಷಯ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಮಾತ್ರ ಪ್ರಸಾರವಾಯಿತು. ತಕ್ಷಣವೇ ನೂರಾರು ಅಭಿಮಾನಿಗಳು ತಿರುಮಲದತ್ತ ಧಾವಿಸಿ ಬಂದರು. ಆದರೆ, ದೇಗುಲದಲ್ಲಿ ಕೆಲಕಾಲ ಇದ್ದ ಅಜಿತ್ ಅವರು ಚೆನ್ನೈಗೆ ಮರಳಿದರು.

ಎನ್ನೈ ಅರಿಂದಾಲ್ ಚಿತ್ರದ ಸ್ಟಿಲ್
ಎನ್ನೈ ಅರಿಂದಾಲ್ ಚಿತ್ರದ ಸ್ಥಿರ ಚಿತ್ರ ನೋಡಿ

ಅನುಷ್ಕಾ ಜೊತೆಯಲ್ಲಿ ಅಜಿತ್
ಅನುಷ್ಕಾ ಶೆಟ್ಟಿ ಜೊತೆಯಲ್ಲಿ ಅಜಿತ್ ನಟಿಸುತ್ತಿರುವುದು ವಿಶೇಷ. ಅದರೆ, ದೊಡ್ಡ ತಾರಾಗಣವಿದ್ದರೂ ಇದು ಗೌತಮ್ ಮೆನನ್ ಚಿತ್ರ ಎಂದು ಜನ ಚಿತ್ರಕ್ಕೆ ಬರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಅಜಿತ್ ಚಿತ್ರದ ಮೇಲೆ ಕಾಲಿವುಡ್ ನಿರೀಕ್ಷೆ
ಸೂಪರ್ ಸ್ಟಾರ್ ರಜನಿ ಇದ್ದರೂ ಲಿಂಗಾ ಚಿತ್ರ ಗಳಿಕೆಯಲ್ಲಿ ಮೋಸ ಮಾಡಿದೆ. ಬಹು ನಿರೀಕ್ಷಿತ ಶಂಕರ್ ನಿರ್ದೇಶನದ ವಿಕ್ರಮ್ ವಿಶಿಷ್ಟ ನಟನೆಯ ಐ ಚಿತ್ರ ನಿರೀಕ್ಷಿತ ಲಾಭ ತರುತ್ತಿಲ್ಲ. ವಿಜಯ್ ಅವರ ಕತ್ತಿ ಚಿತ್ರ ಮಾಸ್ ಗಿಂತ ಕ್ಲಾಸ್ ಜನರಿಗೆ ಹಿಡಿಸಿದೆ. ಹೀಗಾಗಿ ಅಜಿತ್ ಅವರ ಎನ್ನೈ ಅರಿಂದಾಲ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.ವೀರಂ, ಆರಂಭಂ ನಂತೆ ಈ ಚಿತ್ರವೂ ತಮಿಳು ಚಿತ್ರರಂಗಕ್ಕೆ ಹೊಸ ದಿಸೆ ತೋರಿಸಬಲ್ಲದೇ ಕಾದು ನೋಡಬೇಕಿದೆ.


Click it and Unblock the Notifications











