ಪ್ರೇಮ್-ಅನೂಪ್ ಭಂಡಾರಿ: ಕಿಚ್ಚ ಆಯ್ಕೆ ಮಾಡಿದ್ದು ಯಾರನ್ನ?
ಅಭಿಮಾನಿಗಳನ್ನು ಭೇಟಿ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಎನ್ನುವುದು ಬಿಟ್ಟರೆ ಕಿಚ್ಚನ ಜನುಮದಿನದ ಸಂಭ್ರಮ ಅದ್ಧೂರಿ ಹಾಗೂ ವಿಶೇಷವಾಗಿ ಜರುಗಿದೆ. ವಿಕ್ರಾಂತ್ ರೋಣ ಟೀಸರ್ ಬಂತು. ಅಭಿಮಾನಿಗಳಿಂದ ಸ್ಪೆಷಲ್ ಹಾಡುಗಳು ರಿಲೀಸ್ ಆದವು. ಇಂಡಸ್ಟ್ರಿಯಿಂದ ಸಾಕಷ್ಟು ಜನರು ಸುದೀಪ್ ಅವರನ್ನು ಭೇಟಿ ಮಾಡಿ ಶುಭಕೋರಿದರು. ಅಭಿಮಾನಿಗಳು ಸಹ ಸುದೀಪ್ ಮನೆ ಬಳಿ ಜಮಾಯಿಸಿದರು. ಅವರನ್ನು ಸಹ ಮಾತನಾಡಿಸಿದ ಸುದೀಪ್ ಈ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಿಕೊಂಡರು.
ಇಷ್ಟೆಲ್ಲಾ ವಿಶೇಷಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ 'ನಿಮ್ಮೊಂದಿಗೆ ನಾನು' ಎಂಬ ಅಡಿಬರಹದಲ್ಲಿ ಲೈವ್ ಬಂದಿದ್ದರು. ನಿರೂಪಕ ಅಕುಲ್ ಬಾಲಾಜಿ ಈ ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಶನದಲ್ಲಿ ತುಂಬಾ ವಿಚಾರಗಳನ್ನು ಅಭಿನಯ ಚಕ್ರವರ್ತಿ ಸುದೀಪ್ ಮಾತನಾಡಿದರು. Rapid Fire ರೌಂಡ್ ಸಹ ಗಮನ ಸೆಳೆಯಿತು. ಈ ಸುತ್ತಿನಲ್ಲಿ ಆಸಕ್ತಿದಾಯಕ ಪ್ರಶ್ನೆಗಳು ಕಿಚ್ಚನಿಗೆ ಎದುರಾಯಿತು. ಅದರಲ್ಲಿ ಒಂದು ಪ್ರೇಮ್-ಅನೂಪ್ ಭಂಡಾರಿ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾವುದು? ಅದಕ್ಕೆ ಸುದೀಪ್ ಕೊಟ್ಟ ಉತ್ತರವೇನು? ಮುಂದೆ ಓದಿ...

ರಮ್ಯಾ-ರಕ್ಷಿತಾ
Rapid fire ಸುತ್ತಿನಲ್ಲಿ ನಟಿ ರಕ್ಷಿತಾ ಮತ್ತು ರಮ್ಯಾ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾವುದು ಎಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಸುದೀಪ್, ರಮ್ಯಾ ಎಂದರು. ಏಕಂದ್ರೆ ರಮ್ಯಾ ಮತ್ತು ನನ್ನ ಜೋಡಿಯನ್ನು ಜನ ಹೆಚ್ಚು ಇಷ್ಟ ಪಡ್ತಾರೆ. ಈಗಲೂ ಈ ಕಾಂಬಿನೇಷನ್ ನೋಡ್ಬೇಕು ಎನ್ನುವ ಅಭಿಮಾನಿಗಳಿದ್ದಾರೆ. ಅವರು ಬಯಸಿದ್ದು ಕೊಡುವುದು ನಮ್ಮ ಕೆಲಸ ಎಂದು ಸಮರ್ಥಿಸಿದರು. ಮುಂದಿನ ದಿನದಲ್ಲಿ ಈ ಕಾಂಬಿನೇಷನ್ ನೋಡಬಹುದಾ ಎಂದಿದ್ದಕ್ಕೆ, ನಾನು ಹೇಳೋದಿಕ್ಕೆ ಆಗಲ್ಲ. ಸ್ಕ್ರಿಪ್ಟ್ಗೆ ಬೇಕು ಎನಿಸಿದರೆ ಮೇಕರ್ಸ್ ನಿರ್ಧಾರ ತೆಗೆದುಕೊಳ್ಳುತ್ತಾರೆ, ನಾನು ಬೇಡ ಎನ್ನಲು ಆಗಲ್ಲ ಎಂದರು.

ಅನೂಪ್-ಪ್ರೇಮ್
ಪ್ರೇಮ್ ಮತ್ತು ಅನೂಪ್ ಭಂಡಾರಿ ಇಬ್ಬರು ಅವರದ್ದೇ ಆದ ಡೈರೆಕ್ಷನ್ ಶೈಲಿಯಲ್ಲಿ ವಿಭಿನ್ನವಾಗಿ ಯೋಚನೆ ಮಾಡ್ತಾರೆ. ಪ್ರೇಮ್ ಎಂದಾಕ್ಷಣ ನನಗೆ ಮಾಸ್ ನಿರ್ದೇಶಕ ಎನಿಸುತ್ತದೆ. ಅವರು ಎಲ್ಲವೂ ಮಾಡ್ತಾರೆ, ಆದರೆ ನನ್ನ ಜೊತೆ ಸಿನಿಮಾ ಎಂದಾಗ ಮಾಸ್ ಎಂಬ ಕಲ್ಪನೆ ಬರುತ್ತದೆ. ಈ ವಿಚಾರದಲ್ಲಿ ಅನೂಪ್ ಲವ್, ರೊಮ್ಯಾನ್ಸ್ ಈ ಕಡೆ ಬರ್ತಾರೆ, ಹಾಗಾಗಿ ಈ ಉದ್ದೇಶದಿಂದ ಅನೂಪ್ ಎಂದರು. ಅದಕ್ಕು ಮುಂಚೆ ಮಾಸ್ ಅಥವಾ ಲವ್ ಎನ್ನುವ ಪ್ರಶ್ನೆಗೆ ಲವ್ ಎಂದು ಸುದೀಪ್ ಆಯ್ಕೆ ಮಾಡಿಕೊಂಡಿದ್ದರು.

ಅನಿಲ್ ಕುಂಬ್ಳೆ-ದ್ರಾವಿಡ್
ಇಬ್ಬರು ಅದ್ಭುತವಾದ ಆಟಗಾರರು. ಆದರೆ ಅನಿಲ್ ಕುಂಬ್ಳೆ ಅವರು ನನಗೆ ಹೆಚ್ಚು ಸ್ಫೂರ್ತಿಯಾಗಿದ್ದರು. ಅವರ ಬೌಲಿಂಗ್ ಶೈಲಿ ಹೆಚ್ಚು ಇಷ್ಟ ಆಗ್ತಿತ್ತು. ಅವರ ಬೌಲಿಂಗ್ ನೋಡೋದಕ್ಕೆ ಸ್ಟೇಡಿಯಂಗೆ ಹೋಗ್ತಿದ್ವಿ. ಬಹುಶಃ ಅವರಂತೆ ಭಾರತೀಯ ತಂಡಕ್ಕೆ ಮತ್ತೊಬ್ಬ ಬೌಲರ್ ಸಿಕ್ಕಿಲ್ಲ ಅನ್ಸುತ್ತೆ. ಪರ್ಸನಲ್ ಆಗಿ ಭೇಟಿಯಾಗಿರುವ ಕಾರಣ ಅವರ ಅಭಿಮಾನಿ ನಾನು. ತುಂಬಾ ಸಲ ಅವರನ್ನು ಭೇಟಿ ಮಾಡಿದ್ದೇನೆ ಎಂದು ಸುದೀಪ್ ಉತ್ತರಿಸಿದರು.

ಅರ್ಜುನ್ ಜನ್ಯ-ಅಜನೀಶ್
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮತ್ತು ವಿಕ್ರಾಂತ್ ರೋಣ ಸಂಗೀತ ನಿರ್ದೇಶಕ ಅಜನೀಶ್ ಇಬ್ಬರಲ್ಲಿ ಜನ್ಯ ಕಡೆ ಸುದೀಪ್ ಒಲವು ತೋರಿದರು. ನನ್ನ ಜರ್ನಿಯಲ್ಲಿ ಜನ್ಯ ಎಷ್ಟು ಪ್ರಮುಖವಾದರು ಎನ್ನುವುದು ಗೊತ್ತಿದೆ. ಅದನ್ನು ಯಾರಿಂದಲೂ ರೀ-ಪ್ಲೇಸ್ ಮಾಡಲು ಆಗಲ್ಲ ಎಂದರು. ವಿಶೇಷವಾಗಿ ರಘು ದೀಕ್ಷಿತ್ ಅವರ ಸಂಗೀತವನ್ನು ಸುದೀಪ್ ಮೆಚ್ಚಿಕೊಂಡರು.

ಹುಚ್ಚ-ವಿಕ್ರಾಂತ್ ರೋಣ
ಸುದೀಪ್ ವೃತ್ತಿ ಜೀವನದಲ್ಲಿ ಅದೃಷ್ಟ ತಂದುಕೊಟ್ಟ ಹುಚ್ಚ ಸಿನಿಮಾ ಹಾಗೂ ಈಗ ಪ್ಯಾನ್ ಇಂಡಿಯಾ ಸದ್ದು ಮಾಡ್ತಿರುವ 'ವಿಕ್ರಾಂತ್ ರೋಣ' ಚಿತ್ರಗಳ ಪೈಕಿ 'ಹುಚ್ಚ' ಸಿನಿಮಾ ಆಯ್ಕೆ ಮಾಡಿಕೊಂಡರು. ಇನ್ನು ಕುಕ್ಕಿಂಗ್ ಅಥವಾ ಕ್ರಿಕೆಟ್ ಎಂದು ಕೇಳಿದ ಪ್ರಶ್ನೆಗೆ ಕುಕ್ಕಿಂಗ್ ಎಂದು ಅಯ್ಕೆ ಮಾಡಿದರು.


Click it and Unblock the Notifications











