'ಪುನೀತ ಪರ್ವ' ಕಾರ್ಯಕ್ರಮ ನೋಡುತ್ತಲೇ ಸಾವನ್ನಪ್ಪಿದ ಅಪ್ಪು ಅಭಿಮಾನಿ
ನಿನ್ನೆ ( ಅಕ್ಟೋಬರ್ 21 ) ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದ ಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆದಿತ್ತು. ಈ ಕಾರ್ಯಕ್ರಮ ವೀಕ್ಷಿಸಲು ಕರ್ನಾಟಕದ ಮೂಲೆ ಮೂಲೆಯಿಂದ ಅಪ್ಪು ಅಭಿಮಾನಿಗಳು ಬಂದಿದ್ದರು. ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳು ಪುನೀತ ಪರ್ವ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಿದರು. ಇನ್ನು ಕಾರ್ಯಕ್ರಮಕ್ಕೆ ಹೋಗದ ಹಲವಾರು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಮನೆಯಲ್ಲಿಯೇ ಟಿವಿ ಮೂಲಕ ಮತ್ತು ಮೊಬೈಲ್ ಮೂಲಕ ನೇರ ಪ್ರಸಾರವನ್ನು ವೀಕ್ಷಿಸಿದ್ದರು.
ಅದೇ ರೀತಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಗಿರಿರಾಜ್ ಕೂಡ ತಮ್ಮ ಕುಟುಂಬದವರ ಜತೆ ಕುಳಿತು ಪುನೀತ ಪರ್ವ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಕಾರ್ಯಕ್ರಮ ವೀಕ್ಷಿಸುತ್ತಾ ತೀವ್ರ ಭಾವುಕರಾಗಿ ಕಣ್ಣೀರು ಹಾಕಿದ್ದ ಗಿರಿರಾಜ್ ಕಾರ್ಯಕ್ರಮ ಮುಕ್ತಾಯವಾದ ನಂತರ ಹೃದಯಾಘಾತಕ್ಕೊಳಗಾಗಿ ಮರಣ ಹೊಂದಿದ್ದಾರೆ.
ಕುಸಿದು ಬಿದ್ದ ಗಿರಿರಾಜ್ ಅವರನ್ನು ತಕ್ಷಣವೇ ಕೆಸಿ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗಿರಿರಾಜ್ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಗಿರಿರಾಜ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕಾರ್ಯಕ್ರಮದುದ್ದಕ್ಕೂ ಕಣ್ಣೀರು ಇಟ್ಟಿದ್ದ ಗಿರಿರಾಜ್
ಇನ್ನು ಖಾಸಗಿ ಸುದ್ದಿ ವಾಹಿನಿಗಳ ಜತೆಗೆ ಮಾತನಾಡಿರುವ ಗಿರಿರಾಜ್ ಅವರ ತಂದೆ ವೆಂಕಟೇಶ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಪುನೀತ ಪರ್ವ ಕಾರ್ಯಕ್ರಮ ವೀಕ್ಷಿಸುತ್ತಾ ನೆರೆ ರಾಜ್ಯಗಳಿಂದ ಬಂದಿದ್ದ ಗಣ್ಯರು ಅಪ್ಪು ಅವರನ್ನು ಹೊಗಳಿದಾಗಲೆಲ್ಲಾ ಇಂಥ ಒಳ್ಳೆಯ ನಟ ಹೊರಟುಹೋದರಲ್ಲ ಎಂದು ಗಿರಿರಾಜ್ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದರಂತೆ, ಅದರಲ್ಲಿಯೂ ಅಮಿತಾಭ್ ಬಚ್ಚನ್ ಭಾಷಣ ಕೇಳಿ ಹೆಚ್ಚು ಭಾವುಕರಾಗಿದ್ದರಂತೆ ಗಿರಿರಾಜ್. ಈ ವೇಳೆ ಪೋಷಕರು ಸಮಾಧಾನ ಮಾಡಿದರೂ ಸಹ ಗಿರಿರಾಜ್ ಅಳುತ್ತಲೇ ಇದ್ದರು ಎನ್ನಲಾಗಿದೆ. ಹೀಗೆ ಕಾರ್ಯಕ್ರಮವೆಲ್ಲಾ ಮುಗಿದ ನಂತರ ಗಿರಿರಾಜ್ ಹೃದಯಾಘಾತದಿಂದ ಮೃತರಾಗಿದ್ದಾರೆ.

ಅಪ್ಪು ನಿಧನದ ವೇಳೆ ಸಾವನ್ನಪ್ಪಿದ್ದರು ಹಲವು ಅಭಿಮಾನಿಗಳು
ಇನ್ನು ಪುನೀತ್ ರಾಜ್ ಕುಮಾರ್ ನಿಧನ ಹೊಂದಿದಾಗ ಕೂಡ ಇದೇ ರೀತಿ ಹೃದಯಾಘಾತಕ್ಕೊಳಗಾಗಿ ಹಾಗೂ ಆತ್ಮಹತ್ಯೆ ಮಾಡಿಕೊಂಡು ಹಲವು ಅಭಿಮಾನಿಗಳು ಸಾವನ್ನಪ್ಪಿದ್ದರು. ಇದೀಗ ವರ್ಷದ ಬಳಿಕ ನಡೆಯುತ್ತಿರುವ ಕಾರ್ಯಕ್ರಮವನ್ನು ವೀಕ್ಷಿಸಿ ಅಪ್ಪು ಇಲ್ಲ ಎಂಬ ನೋವನ್ನು ತಡೆದುಕೊಳ್ಳಲಾಗದೆ ಅಭಿಮಾನಿ ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ಕಂಡು ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.

ಮನೆ ಅಪ್ಪುಮಯ, ಅಪ್ಪು ನಿಧನ ಹೊಂದಿದ್ದಾಗ ಕಂಠೀರವಕ್ಕೆ ಹೋಗಿದ್ದ ಗಿರಿ ರಾಜ್
ಇನ್ನು ಮನೆ ತುಂಬಾ ಪುನೀತ್ ರಾಜ್ ಕುಮಾರ್ ಅವರ ಫೋಟೋಗಳನ್ನು ಇಟ್ಟುಕೊಂಡಿರುವ ಗಿರಿರಾಜ್ ಮೊಬೈಲ್ ವಾಲ್ ಪೇಪರ್ ಮತ್ತು ವಾಟ್ಸ್ಆ್ಯಪ್ ಪ್ರೊಫೈಲ್ ಪಿಕ್ಚರ್ ಕೂಡ ಅಪ್ಪು ಅವರಿಂದ ಕೂಡಿದೆ. ಇನ್ನು ಅಪ್ಪು ನಿಧನ ಹೊಂದಿದಾಗ ಕಂಠೀರವ ಕ್ರೀಡಾಂಗಣಕ್ಕೆ ತೆರಳಿದ್ದ ಗಿರಿರಾಜ್ ಅಪ್ಪು ನಿಧನ ಹೊಂದುವ ಮುನ್ನ ಹಲವಾರು ಬಾರಿ ಅವರ ಮನೆಗೆ ತೆರಳಿ ಭೇಟಿಯಾಗಿದ್ದರು.


Click it and Unblock the Notifications











