ಅಪ್ಪು ಪ್ರೀತಿಯಿಂದ ಮಾಡಿದ 'ಗಂಧದ ಗುಡಿ': ಮೇಕಿಂಗ್ ಸ್ಟಿಲ್ಸ್ ವೈರಲ್
ಪುನೀತ್ ರಾಜ್ಕುಮಾರ್ ನಟನೆಯ 'ಗಂಧದ ಗುಡಿ' ಗೆಲುವಿನ ನಾಗಾಲೋಟ ಮುಂದುವರೆದಿದೆ. ನಾಳೆ(ನವೆಂಬರ್ 1) ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದು, ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಕರುನಾಡಿನ ಅರಣ್ಯ ಸಂಪತ್ತು, ವನ್ಯಜೀವಿ ಸಂಪತ್ತನ್ನು ಪರಿಚಯಿಸುವ ಡಾಕ್ಯುಡ್ರಾಮಾ ಸಿನಿಮಾ ಕನ್ನಡ ಸಿನಿರಸಿಕರ ಮನಗೆದ್ದಿದೆ.
ಬಹಳ ಅದ್ಧೂರಿಯಾಗಿ 'ಗಂಧದ ಗುಡಿ' ಸಿನಿಮಾ ಮೂಡಿ ಬಂದಿದೆ. ಅಮೋಘವರ್ಷ ಅಂಡ್ ಟೀಂ ಪುನೀತ್ ರಾಜ್ಕುಮಾರ್ ಕನಸನ್ನು ನನಸು ಮಾಡಲು ಬಹಳ ಕಷ್ಟಪಟ್ಟಿದ್ದಾರೆ. ಅದರಲ್ಲೂ ಸಿನಿಮಾಟೋಗ್ರಫರ್ ಪ್ರತೀಕ್ ಶೆಟ್ಟಿ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಸಾಕಷ್ಟು ಬಾರಿ ನೋಡಿರುವ ಸ್ಥಳಗಳನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಬಹಳ ಸೊಗಸಾಗಿ ಸೆರೆಹಿಡಿದಿದ್ದಾರೆ. ಪುನೀತ್ ರಾಜ್ಕುಮಾರ್ ಜೊತೆ ನೋಡುಗರೇ ಆ ಸ್ಥಳಗಳಿಗೆ ಹೋಗಿ ಬಂದ ಅನುಭವ ಆಗುತ್ತದೆ. ಸದ್ಯ ಚಿತ್ರದ ಕೆಲ ಮೇಕಿಂಗ್ ಸ್ಟಿಲ್ಗಳನ್ನು ಪ್ರತೀಕ್ ಶೆಟ್ಟಿ ಶೇರ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ 'ಗಂಧದ ಗುಡಿ' ಮೇಕಿಂಗ್ ಸ್ಟಿಲ್ಸ್ ಫುಲ್ ವೈರಲ್ ಆಗಿದೆ. ಅಪ್ಪು ಎಷ್ಟು ಜೋಶ್ನಿಂದ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರು ಎನ್ನುವುದು ಸ್ಟಿಲ್ಸ್ನಲ್ಲಿ ಗೊತ್ತಾಗುತ್ತದೆ. ಅಪ್ಪು ಬಹಳ ಪ್ರೀತಿಯಿಂದ ಮಾಡಿದ ಸಿನಿಮಾ ಇದು. ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಪ್ರಯತ್ನ. ಪ್ರತೀಕ್ ಶೆಟ್ಟಿ ಚಿತ್ರಕ್ಕೆ ಸಂಕಲನಕಾರರಾಗಿಯೂ ಕೆಲಸ ಮಾಡಿದ್ದಾರೆ.

ಅಪರೂಪದ ಪ್ರಯತ್ನ
'ಗಂಧದ ಗುಡಿ' ಪುನೀತ್ ರಾಜ್ಕುಮಾರ್ ಕರಿಯರ್ನಲ್ಲಿ ಬಹಳ ವಿಶೇಷವಾದ ಸಿನಿಮಾ. ಅಪ್ಪು ಅವರಾಗಿಯೇ ಕಾಣಿಸಿಕೊಂಡಿರುವ ಡಾಕ್ಯುಡ್ರಾಮ ಸಿನಿಮಾ. ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ಮುರುಡೇಶ್ವರ ನೇತ್ರಾಣಿ, ಕಾಳಿ ನದಿ ಗಾಜನೂರು ಸೇರಿದಂತೆ ಹಲವೆಡೆ ಚಿತ್ರಕ್ಕಾಗಿ ಸುತ್ತಾಡಿದ್ದಾರೆ. ಕಾಡು ಮೇಡು ಹತ್ತಿ ಇಳಿದಿದ್ದಾರೆ. ನೀರಿನ ಆಳಕ್ಕೆ ಇಳಿದು ಸಮುದ್ರ ತಳದ ಜಲಚರಗಳ ದರ್ಶನ ಮಾಡಿಸಿದ್ದಾರೆ. ಗಾಜನೂರಿಗೆ ಕರೆದುಕೊಂಡು ಹೋಗಿ ಅಣ್ಣಾವ್ರು ಹುಟ್ಟಿ ಬೆಳೆದ ಮನೆಯನ್ನು ತೋರಿಸಿದ್ದಾರೆ.

ಅದ್ಭುತ ದೃಶ್ಯಕಾವ್ಯ 'ಗಂಧದ ಗುಡಿ'
ಎಷ್ಟೇ ಭಯ ಇದ್ದರೂ ಆನೆ, ಹಾವು ಸೇರಿದಂತೆ ಸಾಕಷ್ಟು ಪ್ರಾಣಿಗಳನ್ನು ಹತ್ತಿರದಿಂದ ನೋಡಿ ಸಾಕಷ್ಟು ಮಾಹಿತಿ ನೀಡಿದ್ದಾರೆ. ಹೀರೊ ಆಗಿ ಅಲ್ಲದೇ ಬಹಳ ಮುಗ್ಧವಾಗಿ ಎಲ್ಲವನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ತಿಳಿಸುವ ಕೆಲಸ ಮಾಡಿದ್ದಾರೆ. ಐಟಂ ಸಾಂಗು, ಫೈಟು, ರೊಮ್ಯಾನ್ಸ್ ಯಾವುದು ಇಲ್ಲದೇ ಒಂದು ಅದ್ಭುತ ದೃಶ್ಯಕಾವ್ಯವನ್ನು ತೆರೆದಿಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಜೊತೆಗೆ ಎಲ್ಲರೂ ಒಂದು ಅಮೋಘ ಪಯಣ ಹೋಗಿ ಬಂದ ಅನುಭವವಾಗುತ್ತದೆ.

ಬಾಕ್ಸಾಫೀಸ್ನಲ್ಲಿ 'ಗಂಧದ ಗುಡಿ' ಹವಾ
ಸದ್ಯ 'ಗಂಧದ ಗುಡಿ' ಸಿನಿಮಾ ಬಾಕ್ಸಾಫೀಸ್ನಲ್ಲಿ ಸಖತ್ ಸದ್ದು ಮಾಡ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಮೊದಲ ದಿನ 5 ಕೋಟಿ, 2ನೇ ದಿನ 4.5 ಕೋಟಿ ಹಾಗೂ 3ನೇ ದಿನ 5 ಕೋಟಿ ಕಲೆಕ್ಷನ್ ಮಾಡಿ ಒಟ್ಟು 14.5 ಕೋಟಿಗೂ ಅಧಿಕ ಗಳಿಕೆ ಕಂಡು ಸದ್ದು ಮಾಡ್ತಿದೆ. ಪ್ರೇಕ್ಷಕರು ನಿಧಾನವಾಗಿ ಮಕ್ಕಳನ್ನು ಕರೆದುಕೊಂಡು ಸಿನಿಮಾ ನೋಡಲು ಬರುತ್ತಿದ್ದಾರೆ.

ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಕ್ಕಿಲ್ಲ
'ಗಂಧದ ಗುಡಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಆದರೆ ಸಿನಿಮಾ ರಿಲೀಸ್ ಆಗಿ 4 ದಿನ ಕಳೆದರೂ ಇನ್ನು ಈ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಇನ್ನು ಇದು ಅನುಷ್ಠಾನಕ್ಕೆ ಬಂದಿಲ್ಲ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ. ಇನ್ನು ರಾಜ್ಯೋತ್ಸವ ಸಂಭ್ರಮದಲ್ಲಿ ಬಹಳ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.

PRK ಬ್ಯಾನರ್ನಲ್ಲಿ ಚಿತ್ರ ನಿರ್ಮಾಣ
ಕಳೆದ ವರ್ಷ ರಾಜ್ಯೋತ್ಸವಕ್ಕೆ ಪುನೀತ್ ರಾಜ್ಕುಮಾರ್ 'ಗಂಧದ ಗುಡಿ' ಟೀಸರ್ ರಿಲೀಸ್ ಪ್ಲ್ಯಾನ್ ಮಾಡಿದ್ದರು. ಏಪ್ರಿಲ್ 24ಕ್ಕೆ ಡಾ. ರಾಜ್ಕುಮಾರ್ ಹುಟ್ಟುಹಬ್ಬದ ಸಮಯದಲ್ಲಿ ಕನಸಿನ ಸಿನಿಮಾವನ್ನು ತೆರೆಗೆ ತರುವ ಆಸೆ ಅವರದ್ದಾಗಿತ್ತು. ಆದರೆ ಅಕ್ಟೋಬರ್ 29ರಂದು ಅಪ್ಪು ಬಾರದಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಮಡ್ ಸ್ಕಿಪ್ಪರ್ ಬ್ಯಾನರ್ ಜೊತೆ ಸೇರಿ ತಮ್ಮದೇ ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ನಲ್ಲಿ ಅಪ್ಪು 'ಗಂಧದ ಗುಡಿ' ಸಿನಿಮಾ ನಿರ್ಮಿಸಿದ್ದರು.


Click it and Unblock the Notifications











