ಪುಷ್ಪಕ ವಿಮಾನ ಖ್ಯಾತಿಯ ಶೃಂಗಾರ್ ನಾಗರಾಜ್ ಇನ್ನಿಲ್ಲ

ಗಂಗೊಳ್ಳಿ ರಾಮಶೇಠ್ ನಾಗರಾಜ್ ಅವರು ಶೃಂಗಾರ್ ನಾಗರಾಜ್ ಎಂದೇ ಹೆಸರಾಗಿದ್ದರು. ಮೃತರಿಗೆ ನಟ ರಾಮ್ ಕುಮಾರ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಒಂದು ವರ್ಷದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು.
ಬೆಂಗಳೂರಿನ ಮಲ್ಲಿಗೆ ನರ್ಸಿಂಗ್ ಹೋಂ ನಲ್ಲಿ ಮಂಗಳವಾರ ರಾತ್ರಿ ಸುಮಾರು 9.30ಕ್ಕೆ ನಾಗರಾಜ್ ಕಣ್ಮುಚ್ಚಿದ್ದಾರೆ. ಎಪ್ಪತ್ತರ ದಶಕದಲ್ಲಿ ಚಿತ್ರರಂಗಕ್ಕೆ ಅಡಿಯಿಟ್ಟ ನಾಗರಾಜ್ ಬಂಗಾರದ ಮನುಷ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರಂಗನಾಯಕಿ, ಹಾಲು ಜೇನು, ಸಿಪಾಯಿ ರಾಮು, ಕೆಸರಿನ ಕಮಲ, ಶಬ್ದವೇಧಿ ಅವರು ಅಭಿನಯದ ಕೆಲ ಚಿತ್ರಗಳು. ಕಮಲ್ ಹಾಸನ್ ಅಭಿನಯದ ಪುಷ್ಪಕ ವಿಮಾನ (1987) ಚಿತ್ರವನ್ನು ನಾಗರಾಜ್ ನಿರ್ಮಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರಪತಿ ಪದಕ ಲಭಿಸಿದೆ. ರಾಜ್ಯೋತ್ಸವ, ಫಿಲಂಫೇರ್ ಪ್ರಶಸ್ತಿ ಪುರಸ್ಕಾರಗಳಿಗೂ ನಾಗರಾಜ್ ಪಾತ್ರರಾಗಿದ್ದರು.
ರಂಗನಾಯಕಿ ಹಾಗೂ ಕಥಾಸಂಗಮ ಚಿತ್ರಗಳಲ್ಲಿ ಪೋಷಕ ಪಾತ್ರವನ್ನು ಪೋಷಿಸಿದ್ದ ನಾಗರಾಜ್, ಕೆಸರಿನ ಕಮಲ ಚಿತ್ರದಲ್ಲಿ ಖ್ಯಾತ ಅಭಿನೇತ್ರಿ ಕಲ್ಪನಾ ಅವರಿಗೆ ನಾಯಕ ನಟ ಪಾತ್ರವನ್ನು ಪೋಷಿಸಿದ್ದರು. ಚಿತ್ರ ನಿರ್ಮಾಣಕ್ಕೂ ಮೊದಲು ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು.
ವೃತ್ತಿಯಲ್ಲಿ ನಿರ್ಮಾಪಕರಾಗಿದ್ದ ನಾಗರಾಜ್ ಪ್ರವೃತ್ತಿಯಲ್ಲಿ ಅತ್ಯುತ್ತಮ ಛಾಯಾಗ್ರಾಹಕರಾಗಿದ್ದರು. ವರನಟ ಡಾ.ರಾಜ್ ಕುಮಾರ್ ಅವರ ಸಂಬಂಧಿಕರೂ ಆಗಿರುವ ನಾಗರಾಜ್ ನಿಧನಕ್ಕೆ ಕನ್ನಡ ಚಿತ್ರೋದ್ಯಮ ಅತೀವ ಸಂತಾಪ ವ್ಯಕ್ತಪಡಿಸಿದೆ. (ಏಜೆನ್ಸೀಸ್)


Click it and Unblock the Notifications











