ಆಧ್ಯಾತ್ಮಿಕ ಗುರು ನಾರಾಯಣಸ್ವಾಮಿ ಭೇಟಿ ಮಾಡಿದ ರಜನೀಕಾಂತ್
ಅನಾರೋಗ್ಯದ ಕಾರಣ ನೀಡಿ ರಾಜಕೀಯ ಪ್ರವೇಶ ನಿರ್ಧಾರವನ್ನು ಹಿಂಪಡೆದಿರುವ ನಟ ರಜನೀಕಾಂತ್ ಇಂದು ತಮ್ಮ ಆಧ್ಯಾತ್ಮಿಕ ಗುರು ನಮೋ ನಾರಾಯಣಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.
ನಟ ರಜನೀಕಾಂತ್ ಅವರ ಆಧ್ಯಾತ್ಮಿಕ ಆಸಕ್ತಿ ಅಭಿಮಾನಿಗಳಿಗೆ ಗೊತ್ತಿರುವುದೇ, ಹಿಮಾಲಯದಲ್ಲಿ ಬಾಬಾಗಳ ಜೊತೆ ಓಡಾಟ ಮಾಡಿರುವ ರಜನೀಕಾಂತ್, ಅವರು ನಂಬುವ ದೇವರು, ಗುರು ಬಾಬಾ ಅವರನ್ನು ಮುಖ್ಯವಾಗಿರಿಸಿಕೊಂಡು ಸಿನಿಮಾ ಸಹ ತೆಗೆದಿದ್ದರು.
ಹಲವು ಸ್ವಾಮೀಜಿಗಳು, ಗುರುಗಳ ಸಂಪರ್ಕ ಹೊಂದಿರುವ ರಜನೀಕಾಂತ್ ಅವರಿಗೆ ನಮೊ ನಾರಾಯಣಸ್ವಾಮಿ ಸಹ ಆಧ್ಯಾತ್ಮಿಕ ಗುರುಗಳೇ.
ನಮೋ ನಾರಾಯಣಸ್ವಾಮಿ ಅವರು ಇಂದು ರಜನೀಕಾಂತ್ ಅವರ ಪೋಯಸ್ ಗಾರ್ಡನ್ನ ನಿವಾಸಕ್ಕೆ ಬಂದಿದ್ದರು. ರಜನೀಕಾಂತ್ ಅನಾರೋಗ್ಯಕ್ಕೆ ತುತ್ತಾದ ಬಳಿಕ ಇದೇ ಮೊದಲ ಬಾರಿಗೆ ಹೊರಗಿನ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ.

ನಮೋ ನಾರಾಯಣ್ ಅವರನ್ನು ಪೂಜನೀಯವಾಗಿ ಸ್ವಾಗತಿಸಿದ್ದಾರೆ ರಜನೀಕಾಂತ್ ಮತ್ತು ದಂಪತಿ. ನಮೋ ನಾರಾಯಣಸ್ವಾಮಿ ಅವರು ರಜನೀಕಾಂತ್ ದಂಪತಿಗಳನ್ನು ಆಶೀರ್ವಾದ ಮಾಡಿದ್ದಾರೆ. ತಮ್ಮ ಅನಾರೋಗ್ಯ ಹಾಗೂ ರಾಜಕೀಯ ಪ್ರವೇಶದಿಂದ ಹಿಂದೆ ಸರಿದ ಕಾರಣವನ್ನು ತಮ್ಮ ಗುರುಗಳ ಬಳಿ ರಜನೀಕಾಂತ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ರಾಜಕೀಯ ಪ್ರವೇಶಿಸುವುದಾಗಿ ಡಿಸೆಂಬರ್ ತಿಂಗಳ ಆರಂಭದಲ್ಲಿ ಘೋಷಿಸಿದ್ದರು ನಟ ರಜನೀಕಾಂತ್. ಡಿಸೆಂಬರ್ 31 ರಂದು ರಾಜಕೀಯ ಪಕ್ಷದ ಹೆಸರು ಘೋಷಿಸಿ, ಜನವರಿ ತಿಂಗಳಲ್ಲಿ ದೊಡ್ಡ ಕಾರ್ಯಕ್ರಮದ ಮೂಲಕ ಪಕ್ಷವನ್ನು ಲೋಕಾರ್ಪಣೆ ಮಾಡುವುದಾಗಿ ಹೇಳಿದ್ದರು.
ಆದರೆ ಡಿಸೆಂಬರ್ ಕಡೆಯ ವಾರದಲ್ಲಿ ರಜನೀಕಾಂತ್ ಅವರ ಆರೋಗ್ಯದಲ್ಲಿ ಏರು-ಪೇರಾಯಿತು. ಅವರನ್ನು ಹೈದರಾಬಾದ್ ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ದೃಷ್ಟಿಯಿಂದ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು.
ಅನಾರೋಗ್ಯಕ್ಕೆ ಈಡಾದ ಎರಡು-ಮೂರು ದಿನಗಳ ನಂತರ ಟ್ವಿಟ್ಟರ್ನಲ್ಲಿ ಎರಡು ಪುಟದ ಪತ್ರ ಪ್ರಟಿಸಿದ ರಜನೀಕಾಂತ್, ತಾವು ರಾಜಕೀಯ ಪ್ರವೇಶಿಸುವುದಿಲ್ಲ. ಆದರೆ ಜನಸೇವೆ ಮುಂದುವರೆಸುತ್ತೇನೆ ಎಂದರು. ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದೇನೆ ಎಂದು ರಜನಿ ಪತ್ರದಲ್ಲಿ ಹೇಳಿದ್ದರು.


Click it and Unblock the Notifications











