ಡಿಸೆಂಬರ್ ಗೆ ರಿಲೀಸ್ ಆಗಲಿದೆ 'ಅವನೇ ಶ್ರೀಮನ್ನಾರಾಯಣ': ರಕ್ಷಿತ್ ಶೆಟ್ಟಿ
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಅಭಿಮಾನಿಗಳ ಮುಂದೆ ಬಂದಿಲ್ಲ. ಸುಮಾರು ಮೂರು ವರ್ಷಗಳಿಂದ ಅಭಿಮಾನಿಗಳು ರಕ್ಷಿತ್ ಸಿನಿಮಾಗಾಗಿ ಉಸಿರು ಬಿಡಿ ಹಿಡಿದು ಕಾಯುತ್ತಿದ್ದಾರೆ.
ಕಿರಿಕ್ ಪಾರ್ಟಿ ನಂತರ ರಕ್ಷಿತ್ ಅವನೇ ಶ್ರೀಮನ್ನಾರಾಯಣನಾಗಲು ಮೂರು ವರ್ಷ ಶ್ರಮಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ದಸರದಿಂದ ಚಿತ್ರದ ಪ್ರಮೋಷನ್ ಪ್ರಾರಂಭಿಸಿದ ಸಂತಸದಲ್ಲಿದೆ. ಯುವ ದಸರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಕ್ಷಿತ್ ಮೊದಲ ಬಾರಿಗೆ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಡಿಸೆಂಬರ್ ನಲ್ಲಿ ಸಿನಿಮಾ ಬರುವುದು ಪಕ್ಕ ಎಂದು ಹೇಳಿದ್ದಾರೆ.

ಡಿಸೆಂಬರ್ ನಲ್ಲಿ ರಿಲೀಸ್ ಪಕ್ಕ
'ಅವನೇ ಶ್ರೀಮನ್ನಾರಾಯಣ' ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸುಮಾರು ಮೂರು ವರ್ಷಗಳಿಂದ ರಕ್ಷಿತ್ ಚಿತ್ರಕ್ಕಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಸಿಂಪಲ್ ಸ್ಟಾರ್ ಸಿಹಿ ಸುದ್ದಿ ತಿಳಿಸಿದ್ದಾರೆ. ಅನೇಕ ಕಾರಣಗಳಿಂದ ಚಿತ್ರ ತಡವಾಗಿದೆ. ಆದ್ರೆ ಸಿನಿಮಾ ಡಿಸೆಂಬರ್ ಗೆ ಬರುವುದು ಪಕ್ಕಾ ಎಂದು ಯುವ ದಸರ ವೇದಿಕೆಯಲ್ಲಿ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ.

ಡಿಸೆಂಬರ್ ನಲ್ಲಿ ರಿಲೀಸ್ ಆಗಿತ್ತು ಕಿರಿಕ್ ಪಾರ್ಟಿ
ರಕ್ಷಿತ್ ಅಭಿನಯದ ಅವನೇ ಶ್ರೀಮನ್ನಾರಾಯಣ ಈ ವರ್ಷದ ಡಿಸೆಂಬರ್ ಗೆ ತೆರೆಗೆ ಬರುವುದು ಪಕ್ಕಾ ಎಂದು ರಕ್ಷಿತ್ ಹೇಳಿದ್ದಾರೆ. ವಿಶೇಷ ಅಂದ್ರೆ 'ಕಿರಿಕ್ ಪಾರ್ಟಿ' ಸಿನಿಮಾ ಕೂಡ ಮೂರು ವರ್ಷ ಹಿಂದೆ ಅಂದರೆ 2016 ಡಿಸೆಂಬರ್ ನಲ್ಲಿ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿಯೂ ಧೂಳ್ ಎಬ್ಬಿಸಿತ್ತು. ಇಡೀ ದಕ್ಷಿಣ ಭಾರತೀಯ ಚಿತ್ರತಂಡ ಕಿರಿಕ್ ಪಾರ್ಟಿಯ ಸದ್ದು ಕೇಳಿ ಬೆರಗಾಗಿತ್ತು. ಈಗ ಮತ್ತೆ ಡಿಸೆಂಬರ್ ನಲ್ಲಿ ಅವನೇ ಶ್ರೀಮನ್ನಾರಾಯಣ ತೆರೆಗೆ ಬರುತ್ತಿರುವುದು ವಿಶೇಷವಾಗಿದೆ.

ಕಿರಿಕ್ ಪಾರ್ಟಿಗಿಂತ ದೊಡ್ಡ ಮಟ್ಟದಲ್ಲಿರಲಿದೆ
'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕಿರಿಕ್ ಪಾರ್ಟಿ ಸಿನಿಮಾಗಿಂತ ದೊಡ್ಡ ಮಟ್ಟದಲ್ಲಿ ಇರಬೇಕೆನ್ನುವುದು ಚಿತ್ರತಂಡ ಉದ್ದೇಶ. ಹಾಗಾಗಿಯೆ ಒಂದೂವರೆ ವರ್ಷ ಸ್ಕ್ರಿಪ್ಟ್ ಗಾಗಿ ಕೆಲಸ ಮಾಡಿದ್ದಾರಂತೆ. 200 ದಿನ ಶೂಟಿಂಗ್ ಮಾಡಿದ್ದಾರೆ. ಇಷ್ಟು ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಿ ಗೊತ್ತಿರಲ್ಲಿಲ್ಲ ಆದ್ರೆ ಅವನೇ ಶ್ರೀಮನ್ನಾರಾಯಣ ಉತ್ತಮ ಅನುಭವ ನೀಡಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಇತಿಹಾಸ ಬರೆದರೆ ಎರಡು ಭಾಗ ಇರುತ್ತೆ
ರಕ್ಷಿತ್ ಮೊದಲ ಬಾರಿಗೆ ಅವರನೇ ಶ್ರೀಮನ್ನಾರಾಯಣ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಯುವ ದಸರ ವೇದಿಕೆಯಲ್ಲಿ ರಕ್ಷಿತ್, "ನಾಳೆ ದಿನ ನಿಮ್ಮ ಬಗ್ಗೆ ಇತಿಹಾಸ ಬರೆದರೆ ಅದರಲ್ಲಿ ಎರಡು ಭಾಗ ಇರುತ್ತೆ, ಒಂದು ಅವನನ್ನು ಭೇಟಿಯಾಗುವ ಮುಂಚೆ ಇನ್ನೊಂದು ಅವನನ್ನು ಭೇಟಿಯಾದ ನಂತರ, ಅವನು ಅಂದ್ರೆ ಅವನೇ ಶ್ರೀಮನ್ನಾರಾಯಣ" ಎಂದು ಚಿತ್ರದ ಡೈಲಾಗ್ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಆಕ್ಷನ್ ಮತ್ತು ಇನ್ವೆಸ್ಟಿಗೇಶನ್ ಪ್ರಮುಖ ಹೈಲೆಟ್ಸ್ ಆಗಿರಲಿಯಂತೆ.


Click it and Unblock the Notifications











