ಸಾಹಿತಿ ಆಗುವತ್ತ 'ಕನ್ನಡತಿ' ರಂಜನಿ ರಾಘವನ್: ಕಥಾಸಂಕಲನ ಬಿಡುಗಡೆಗೆ ತಯಾರಿ
'ಕನ್ನಡತಿ' ಧಾರಾವಾಹಿಯ ಮುಖ್ಯ ನಟಿ ರಂಜನಿ ರಾಘವನ್ ಸಾಹಿತಿ ಆಗುತ್ತಿದ್ದಾರೆ. ತಮ್ಮ ಮೊದಲ ಕಥಾಸಂಕಲನವನ್ನು ರಂಜನಿ ಬಿಡುಗಡೆ ಮಾಡಲು ಅಣಿಯಾಗಿದ್ದಾರೆ.
ರಂಜನಿ ರಾಘವನ್ ಬರೆದಿರುವ ಕಥೆಗಳ ಗುಚ್ಛ ಹೊಂದಿರುವ ಮೊದಲ ಪುಸ್ತಕ ತಯಾರಾಗುತ್ತಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಈ ವಿಷಯವನ್ನು ರಂಜನಿ ರಾಘವನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಂಜನಿ ಅವರು ಅವಧಿಯ ಆನ್ಲೈನ್ ವೇದಿಕೆಯಲ್ಲಿ ಪ್ರತಿ ಶುಕ್ರವಾರ ಸಣ್ಣ ಕತೆಗಳನ್ನು ಬರೆದು ಪ್ರಕಟಿಸುತ್ತಿದ್ದರು. ಅದಕ್ಕೆ 'ಶುಕ್ರವಾರದ ಸಣ್ಣ ಕತೆಗಳು' ಎಂದು ಹೆಸರಿಟ್ಟಿದ್ದರು. ಈಗ ಅದೇ ಕತೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಂಜನಿ, ''ಶುಕ್ರವಾರದ ಸಣ್ಣ ಕತೆಗಳು ಈಗ ಕಥಾಸಂಕಲನವಾಗ್ತಿದೆ. ನಾನಂತೂ ಬಹಳ ಉತ್ಸಾಹದಿಂದ ನನ್ನ ಮೊದಲ ;ಪುಸ್ತಕಕ್ಕಾಗಿ ಕಾಯುತ್ತಿದ್ದೇನೆ. ತುಂಬಾ ಜನ ಅವಧಿಯಲ್ಲಿ ಪ್ರಕಟವಾದ ಕತೆಗಳನ್ನು ಒಟ್ಟು ಮಾಡಿ ಪುಸ್ತಕ ಮಾಡಿ ಅಂತ ಹೇಳಿದ್ರಿ.. ನಿಮ್ಮ ಸಲಹೆ, ಹಾರೈಕೆ ಇವತ್ತು ನಿಜವಾಗ್ತಿದೆ'' ಎಂದಿದ್ದಾರೆ ರಂಜನಿ.
ಬಹುರೂಪಿ ಪಬ್ಲಿಕೇಶನ್ಸ್ ಜೊತೆಗೆ ಒಪ್ಪಂದಕ್ಕೆ ಸಹಿ ಮಾಡುತ್ತಿರುವ ವಿಡಿಯೋವನ್ನು ಸಹ ರಂಜನಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಬಹುರೂಪಿಯ ಪಬ್ಲಿಷರ್, ''ಅವಧಿಯಲ್ಲಿ ಪ್ರಕಟವಾಗುತ್ತಿದ್ದ ಶುಕ್ರವಾರದ ಸಣ್ಣ ಕತೆಗಳಿಗೆ ದೊಡ್ಡ ಸಂಖ್ಯೆಯ ಓದುಗರಿದ್ದಾರೆ. ಶುಕ್ರವಾರಕ್ಕೆ ಕಾದು ಕತೆ ಓದಿ ಪ್ರತಿಕ್ರಿಯೆ ನೀಡುತ್ತಿದ್ದರು. ರಂಜನಿ ಅವರ ಕತೆಗಳಿಗೆ ಬಹಳ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿದ್ದವು'' ಎಂದಿದ್ದಾರೆ.
ಟಿವಿ, ಸಿನಿಮಾ ಎರಡರಲ್ಲೂ ಬ್ಯುಸಿಯಾಗಿರುವ ರಂಜನಿ, 'ಕನ್ನಡತಿ' ಧಾರಾವಾಹಿಯ ಜೊತೆಗೆ 'ಹಕೂನಾ ಮಟಾಟ' ವೆಬ್ ಸರಣಿಯಲ್ಲಿಯೂ ನಟಿಸುತ್ತಿದ್ದಾರೆ. ರಂಜನಿ ನಟಿಸಿರುವ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾ ಬಿಡುಗಡೆ ಆಗಬೇಕಿದೆ.


Click it and Unblock the Notifications











